'ನೆಲ್ಲಿಕಾಯಿ' ಮರದಿಂದ ಬದುಕು ಕಟ್ಟಿಕೊಂಡ ಮೈಸೂರು ದಿವಾಕರ್
ಒಂದು ಮರ ನೆಡು, ಅದು ನಿಮ್ಮ ಬದುಕನ್ನು ಬಂಗಾರವಾಗಿಸುತ್ತದೆ, ಮರವನ್ನು ನಂಬಿ ಕೆಟ್ಟವರಿಲ್ಲ. ಮರ ಮನೆಯನ್ನು ಕಾಯುತ್ತದೆ ಎಂಬ ಮಾತಿಗೆ ಸಾಕ್ಷಿಯಾಗಿ ನಿಂತಿದ್ದಾರೆ ಮೈಸೂರಿನ ದಿವಾಕರ್. ಇವರು ಬೆಟ್ಟದ ನೆಲ್ಲಿಕಾಯಿಯನ್ನು ಬೆಳೆದು ಅದರಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬೆಟ್ಟದ ನೆಲ್ಲಿ ಮರದಲ್ಲಿರುವ ಔಷಧಿ ಗುಣಗಳನ್ನು ಮನಗಂಡ ದಿವಾಕರ್ ಅವರು ಇದರಿಂದ ಉತ್ಪನ್ನಗಳನ್ನು ತಯಾರಿಸಿದರೆ ಹೇಗೆ ಎಂಬ ಆಲೋಚನೆ ಮಾಡಿದರು. ಆಗ ಅವರಿಗೆ ಎದುರಾದ ಪ್ರಶ್ನೆಯೆಂದರೆ ಅಷ್ಟೊಂದು ನೆಲ್ಲಿಕಾಯಿಗಳನ್ನು ಎಲ್ಲಿಂದ ತರುವುದು? ಎಂದು. ತಕ್ಷಣ ಅವರು ನೆಲ್ಲಿ ಕೃಷಿಯನ್ನು ಆರಂಭಿಸುವ ಮೂಲಕ ಯಶಸ್ಸಿನ ಹಾದಿಗೆ ಮುನ್ನಡಿ ಇಟ್ಟರು.
ಮೊದಲು ಮಾರ್ಕೆಟಿಂಗ್ ಉದ್ಯೋಗದಲ್ಲಿದ್ದ ದಿವಾಕರ್ ಅವರು ಕ್ಯಾತಮಾರನಹಳ್ಳಿಯ ಸೇಠ್ ಬಾವರ್ ಲಾಲ್ ಅವರ ಮೂಲಕ ಕೇರಳದ ಸಿದ್ಧಿಕ್ ಅಹಮದ್ ಅವರನ್ನು ಪರಿಚಯ ಮಾಡಿಕೊಂಡರು. ಬಳಿಕ ಅವರಿಂದ ಮಾಹಿತಿ ಪಡೆದರು.[ಬೆಟ್ಟದ ನೆಲ್ಲಿಕಾಯಿಯ ಸ್ಪೆಷಾಲಿಟಿ ಒಂದೇ ಎರಡೇ]
ಮಾಹಿತಿ ಪಡೆದ ನಂತರ ಮೈಸೂರು ತಾಲೂಕು ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಳೆದಿದ್ದ ಬೆಟ್ಟದ ನೆಲ್ಲಿಕಾಯಿ ಮರಗಳ ಸಹಿತ ಆರೂವರೆ ಎಕರೆ ಭೂಮಿಯನ್ನು ಪಡೆದು ಸಾವಯವ ವಿಧಾನದಲ್ಲಿ ಕೃಷಿ ಆರಂಭಿಸಿದರು. ನೆಲ್ಲಿಯಿಂದ ಹಲವು ಉತ್ಪನ್ನಗಳನ್ನು ತಯಾರಿಸುವ ಇವರು ನಾಡಿನಾದ್ಯಂತ ಖ್ಯಾತರಾಗಿದ್ದಾರೆ. ಇವರ ಯಶೋಗಾಥೆ ಮುಂದಿದೆ.
ಯಾವ ಹೆಸರಿನಡಿ ನೆಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ?
ನೆಲ್ಲಿ ಬೆಳೆದು ಫಸಲಿಗೆ ಬಂದಿದ್ದು, ಫಸಲನ್ನು ಬಲೆಯನ್ನು ಹರಡಿ ಕೊಯ್ಲು ಮಾಡುತ್ತಾರೆ. ಬಳಿಕ ಶುದ್ಧವಾದ ನೀರಿನಲ್ಲಿ ಅದನ್ನು ತೊಳೆದು ತಾಜಾ ಕಾಯಿಗಳನ್ನು ಯಂತ್ರದ ಮೂಲಕ ಪುಡಿ, ಜ್ಯೂಸ್, ಕ್ಯಾಂಡಿ, ಎಣ್ಣೆ ಹೀಗೆ ನಾಲ್ಕು ವಿಧದ ಉತ್ಪನ್ನಗಳನ್ನು ತಯಾರಿಸಿ ಆರಾಧ್ಯ ಆಗ್ರೋ ಫುಡ್ ಅಂಡ್ ಬೇವಿರೇಜ್ ರವರ ಅಮೃತ ಬಿಂದು ಎಂಬ ಹೆಸರಿನಡಿ ಮಾರಾಟ ಮಾಡುತ್ತಿದ್ದಾರೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ನೆಲ್ಲಿಕಾಯಿಯಿಂದ ಏನನ್ನು ಉತ್ಪಾದಿಸಿದ್ದಾರೆ?
ಸಾವಯವ ಕೃಷಿಯಿಂದಲೇ ನೆಲ್ಲಿಕಾಯಿಯನ್ನು ಬೆಳೆದು ಅದರಿಂದ ತಲೆಗೆ ಹಚ್ಚುವ ಎಣ್ಣೆ, ಜ್ಯೂಸ್, ಕ್ಯಾಂಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಇವರು ತಯಾರಿಸುವ ನೆಲ್ಲಿಕಾಯಿಯ ಆಮ್ಲ ಜ್ಯೂಸ್ ರಸವನ್ನು ದಿನವೂ ಆಹಾರ ಕ್ರಮ ಮತ್ತು ವ್ಯಾಯಾಮದ ಜೊತೆಗೆ ನಿಯಮಿತವಾಗಿ ಸೇವಿಸುವುದರೊಂದಿಗೆ ಮಧುಮೇಹ (ಸಕ್ಕರೆ ಕಾಯಿಲೆ) ನಿಯಂತ್ರಣಕ್ಕೆ ಬರುತ್ತದೆ.[ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]
ದಿವಾಕರ್ ತಯಾರಿಸಿದ ನೆಲ್ಲಿಕಾಯಿ ಪದಾರ್ಥ ಎಲ್ಲೆಲ್ಲಿ ಮಾರಾಟವಾಗಿದೆ?
ರಾಜ್ಯದೆಲ್ಲೆಡೆ ನಡೆಯುವ ಮೇಳಗಳಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡಿದ್ದಾರೆ. ಪ್ರಮುಖವಾಗಿ, ದಸರಾ ವಸ್ತುಪ್ರದರ್ಶನ ಆವರಣ, ಕೃಷಿ ಮೇಳ, ಆರೋಗ್ಯ ಮೇಳ, ಆಳ್ವಾಸ್ ನುಡಿ ಸಿರಿ ಚಂದ್ರವನ ಹೀಗೆ ಅನೇಕ ಮೇಳಗಳಲ್ಲಿ ಇವರ ಪದಾರ್ಥ ಮಾರಾಟವಾಗಿ ಜನಮೆಚ್ಚುಗೆ ಪಡೆದಿವೆ.
ನೆಲ್ಲಿಕಾಯಿಯಲ್ಲಿ ಏನೆಲ್ಲಾ ಗುಣಗಳಿವೆ?
ಆರ್ಯುವೇದದಲ್ಲಿ ಬೆಟ್ಟದ ನೆಲ್ಲಿಕಾಯಿಗೆ ಬೇಡಿಕೆಯಿದೆ. ಇದರಲ್ಲಿ ವಿಟಮಿನ್ ಸಿ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಪಿತ್ತವನ್ನೂ ನಿಯಂತ್ರಿಸುವ ಗುಣವಿದೆ. ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆ, ಮಲಬದ್ಧತೆ, ಅಲ್ಸರ್, ಕರುಳಿನ ತೊಂದರೆ ಮುಂತಾದ ತೊಂದರೆಯನ್ನು ನಿವಾರಿಸುವ ಶಕ್ತಿಯೂ ಇದೆ.
ದಿವಾಕರ್ ಬಳಿ ನೆಲ್ಲಿ ಮರ ಎಷ್ಟು ಬೆಲೆಗೆ ಸಿಗುತ್ತದೆ?
ಸಾಮಾನ್ಯವಾಗಿ ವರ್ಷಪೂರ್ತಿ ಇಳುವರಿ ನೀಡುವ ಬೆಟ್ಟ ನೆಲ್ಲಿಕಾಯಿ ಎಲ್ಲಾ ಕಾಲಕ್ಕೂ ಅತ್ಯುಪಯುಕ್ತ. ಹಾಗಾಗಿ ಲಾಭದ ದೃಷ್ಟಿಯಿಂದಲೂ ಇದು ಉತ್ತಮ ಆಯ್ಕೆ ಎಂದು ದಿವಾಕರ್ ಹೇಳುತ್ತಾರೆ. ದಿವಾಕರ್ ನೆಲ್ಲಿಕಾಯಿ ಸಸಿಗಳನ್ನು ಕಡಿಮೆ ಬೆಲೆಯಲ್ಲಿ (10ರೂ.ಗೆ) ಮಾರಾಟ ಮಾಡುತ್ತಾರೆ. ಹಾಗೂ ಅದನ್ನು ಬೆಳೆಸುವ ಬಗ್ಗೆಯೂ ಮಾಹಿತಿ ನೀಡುತ್ತಾರೆ.
ಆರೋಗ್ಯ ಸಂಜೀವಿನಿ ನೆಲ್ಲಿಕಾಯಿ
ನೆಲ್ಲಿಕಾಯಿಯ ಆಮ್ಲ ಪೌಡರ್, ರಸಂ ಸಾಂಬಾರ್ ನಲ್ಲಿ ಹಾಕಿ ಸೇವಿಸುವುದರಿಂದ ಇಲ್ಲವೇ ಮೊಸರಿನಲ್ಲಿ ಹಾಕಿ ಸೇವಿಸುವುದರಿಂದ ಜೀರ್ಣಶಕ್ತಿ, ಮಲಬದ್ಧತೆ ಕಡಿಮೆಯಾಗುತ್ತದೆ. ನೆಲ್ಲಿಕಾಯಿ ಪುಡಿಯನ್ನು ಸೀಗೆಪುಡಿಯೊಂದಿಗೆ ಬೆರಸಿ ತಲೆಗೆ ಹಚ್ಚುವುದರಿಂದ ಬಾಲ ನರೆ, ತಲೆಹೊಟ್ಟು, ಕೂದಲು ಉದುರುವುದನ್ನು ತಡೆಯಬಹುದು. ಆಮ್ಲಕ್ಯಾಂಡಿಯಂತೂ ಬಲು ಉಪಯೋಗಿ.