ಮೈಸೂರಿನಲ್ಲಿ ಕಳೆದ ಬಾರಿ ಬಜೆಟ್ ನಲ್ಲಿ ಮಂಡನೆಯಾದ ಯೋಜನೆಗಳೇ ಪೂರ್ಣಗೊಂಡಿಲ್ಲ!
Recommended Video

ಮೈಸೂರು, ಫೆಬ್ರವರಿ 6: 2017 - 18ನೇ ಸಾಲಿನ ಬಜೆಟ್ ಘೋಷಿಸಿದ ಯೋಜನೆಗಳೇ ಜಿಲ್ಲೆಗೆ ಇನ್ನು ಸಿಕ್ಕಿಲ್ಲ. ಇನ್ನೂ ಈ ಬಾರಿಯದೇನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ ಮೈಸೂರಿಗರು.
ಹೌದು, ಕಳೆದ ವರ್ಷ ಅಂದರೆ 2017 - 18 ನೇ ಸಾಲಿನಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದರಿಂದ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರದ ರೂವಾರಿಯಾಗಿರುವ ಕುಮಾರಸ್ವಾಮಿ ಅವರಿಂದ ಐದು ತಿಂಗಳ ಅಂತರದಲ್ಲಿ ಎರಡು ಬಜೆಟ್ ಮಂಡನೆಯಾಗಿತ್ತು.
ಮಾಜಿ ಮುಖ್ಯಮಂತ್ರಿಗಳು ಕಳೆದ ವರ್ಷ 12 ನೇ ಬಾರಿ ಹಣಕಾಸು ಸಚಿವರಾಗಿ ಮಂಡಿಸಿದ ಬಜೆಟ್ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ಮೈಸೂರು ಜಿಲ್ಲೆಗೆ ಭರಪೂರ ಕೊಡುಗೆ ಘೋಷಿಸಿದ್ದರು.
ಇಬ್ಬರು ನಾಯಕರು ಘೋಷಿಸಿ ಎರಡು ಬಜೆಟ್ ಗಳಲ್ಲಿ ಕೆಲವು ಮಾತ್ರ ಪೂರ್ಣಗೊಂಡಿದ್ದು, ಬಹುತೇಕ ಘೋಷಣೆಯಾಗಿಯೇ ಉಳಿದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮೈಸೂರಿನಲ್ಲಿ 30 ಕೋಟಿ ವೆಚ್ಚದಲ್ಲಿ ಶುಶ್ರೂಕರ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸುವುದಾಗಿ ಬಜೆಟ್ ನಲ್ಲಿ ಪ್ರಕಟಿಸಿದ್ದರು. ಆದರೆ ಈ ಯೋಜನೆ ಕೂಡ ಕಾರ್ಯರೂಪಕ್ಕೆ ಬರಲೇ ಇಲ್ಲ.
ಇನ್ನು ಸಿದ್ದರಾಮಯ್ಯ ಅವರು ಮೈಸೂರಿನವರೇ ಆಗಿದ್ದರಿಂದ ಮೈಸೂರಿನ ಬಗ್ಗೆ ವಿಶೇಷ ಒಲವು ತೋರಿ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸುವುದಾಗಿಯೂ ಘೋಷಿಸಿದ್ದರು. ಆದರೆ ಅದು ಸ್ಥಾಪನೆಯಾಯಿತೇ? ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.
ಮೈಸೂರಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಇಲ್ಲ ಎನ್ನುವ ಕೊರತೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದಾಗಿಯೂ ಘೋಷಿಸಿದ್ದರು. ಅದು ಏನಾಯಿತು ಯಾರಿಗೂ ತಿಳಿದಿಲ್ಲ. ಮುಂದೆ ಓದಿ...

ಕೊಡುಗೆಗಳನ್ನು ಮುಂದುವರಿಸುವುದಾಗಿ ಹೇಳಿದ್ದ ಸಿಎಂ
ಚುನಾವಣೆ ನಂತರ ರಚನೆಗೊಂಡ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ನೀಡಿದ ಕೊಡುಗೆಗಳನ್ನು ಮುಂದುವರಿಸುವುದಾಗಿ ಹೇಳಿದ್ದರು. ಆದರೆ ಮೈಸೂರಿನಲ್ಲಿ ಆ ಕ್ಯಾನ್ಸರ್ ಘಟಕವಾಗಲಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಲಿ ಸ್ಥಾಪನೆಯಾಗಲೇ ಇಲ್ಲ. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾಡಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು, ರಾಷ್ಟ್ರೀಯ ಕ್ರೀಡಾಕೂಟದ ಮಾದರಿಯಲ್ಲಿ ಆಯೋಜಿಸಲು ಚುನಾವಣೆಯ ಪೂರ್ವದಲ್ಲಿ ಸಿದ್ದರಾಮಯ್ಯ 7 ಕೋಟಿ ಮೀಸಲಿಟ್ಟು ಘೋಷಿಸಿದ್ದರು. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ದಸರಾ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಕ್ರೀಡೆಯನ್ನು ನಡೆಸಿ ಯಶಸ್ವಿಗೊಳಿಸಿತು.

ಈ ಯೋಜನೆಗೆ ಚಾಲನೆ ಸಿಕ್ಕಿರುವುದು ಖಚಿತ
ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಸವ ಪೀಠ ಸ್ಥಾಪಿಸುವುದಾಗಿ ಘೋಷಿಸಿ 2 ಕೋಟಿ ಮೀಸಲಿಟ್ಟಿದ್ದರು. ಆ ಯೋಜನೆಯನ್ನೇ ಮುಂದುವರಿಸಿದ ಮೈತ್ರಿ ಸರ್ಕಾರ ಈವರೆಗೆ ನಾಲ್ಕು ಹಂತದಲ್ಲಿ ಹಣ ಬಿಡುಗಡೆ ಮಾಡಿ ಮೈಸೂರು ವಿವಿ ಈಗ ಇದಕ್ಕೆ ಟೆಂಡರ್ ಕರೆಯಲಾಗಿದೆ. ಒಟ್ಟಾರೆ ಈ ಯೋಜನೆಗೆ ಚಾಲನೆ ಸಿಕ್ಕಿರುವುದು ಖಚಿತವಾಗಿದೆ. ಮಾಜಿ ಸಚಿವ ಹಾಗೂ ಅಲ್ಪಸಂಖ್ಯಾತರ ನಾಯಕ ಎಂದೇ ಗುರುತಿಸಿಕೊಂಡಿದ್ದ ಅಜಿತ್ ಸೇಠ್ ಅವರ ಹೆಸರಿನಲ್ಲಿ ಒಂದು ಭವನ ನಿರ್ಮಾಣ ಮಾಡುವುದಾಗಿ ಸಿದ್ದರಾಮಯ್ಯ 3 ಕೋಟಿ ಅನುದಾನ ಘೋಷಿಸಿದ್ದರು. ಭವನ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಗಿ ಸೇಠ್ ರಸ್ತೆಯಲ್ಲಿರುವ ಅಜಿತ್ ಸೇಠ್ ನಗರದ ಮುಂಭಾಗದಲ್ಲೇ ನಿವೇಶನ ನೀಡಿದೆ. ಸದ್ಯಕ್ಕೆ ಕಟ್ಟಡ ನಕ್ಷೆ ಅನುಮೋದನೆಗೊಂಡಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮೊಟ್ಟೆ, ಹಾಲು
ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಂಗನವಾಡಿ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಹಾಗೂ ಐದು ದಿನ ಹಾಲು ನೀಡುವ ಯೋಜನೆಯನ್ನು ಘೋಷಿಸಲಾಗಿತ್ತು. ಅಂದಿನಿಂದಲೂ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮೊಟ್ಟೆ, ಹಾಲು ನೀಡಲಾಗುತ್ತಿದೆ. ಇದಾದ ಬಳಿಕ ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಮೈಸೂರು ನಗರದಲ್ಲಿ ರೇಷ್ಮೆ ಮಾರುಕಟ್ಟೆ ಹಾಗೂ ಕೆಎಸ್ಐಸಿ ಪುನಶ್ಚೇತನಕ್ಕೆ ಐದು ಕೋಟಿ ಅನುದಾನ ಮೀಸಲಿಡುವುದಾಗಿ ಪ್ರಕಟಿಸಲಾಗಿತ್ತು. ಈ ನಿಟ್ಟಿನಲ್ಲಿ ಇದುವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಈ ಸಾಲಿನ ಬಜೆಟ್ ನಲ್ಲಿ ಇದರ ಸ್ಥಿತಿ ಏನಾಗುವುದೋ ಕಾದು ನೋಡಬೇಕಾಗಿದೆ. ಇದಲ್ಲದೆ ಉಂಡುವಾಡಿ ಸಮೀಪದಲ್ಲಿ ಹೆಚ್ಚುವರಿ ನೀರಿನ ಘಟಕ ಸ್ಥಾಪಿಸಿ, 96 ಗ್ರಾಮ ಸೇರಿದಂತೆ ನಗರಕ್ಕೆ ಕುಡಿಯುವ ನೀರಿನ ಘಟಕ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ. ಪಶು ಸಂಗೋಪನಾ ವ್ಯವಸ್ಥೆಗೆ ಘನೀಕೃತ ವೀರ್ಯ ನಳಿಕೆ ಕೇಂದ್ರ ಸ್ಥಾಪನೆ ಯೋಜನೆಯನ್ನು ರೂಪಿಸಲಾಗಿತ್ತಾದರೂ ಕೆಲಸ ಆರಂಭವಾಗಿಲ್ಲ.

ಈ ಯೋಜನೆಯನ್ನು ನೆನೆಗುದಿಗೆ ತಳ್ಳಿದ್ದು ದುರಂತ
ಮೈಸೂರು ನಗರದಲ್ಲಿ ಚಿತ್ರನಗರಿ ಸ್ಥಾಪಿಸಬೇಕೆಂಬ ಅನೇಕರ ಬೇಡಿಕೆಗೆ ಸಮ್ಮತಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸಿದ ಮೊದಲ ಬಜೆಟ್ ನಲ್ಲೇ ಮೈಸೂರು ನಗರದಲ್ಲಿ ಚಿತ್ರನಗರ ಸ್ಥಾಪಿಸುವುದಾಗಿ ಘೋಷಿಸಿದ್ದರು. ಅದರಂತೆಯೇ ಕಡಕೊಳ ಸಮೀಪದ ಇಮ್ಮಾವು ಎಂಬಲ್ಲಿ 300 ಎಕರೆ ಜಮೀನನ್ನು ಗುರುತಿಸಿ ಅದರಲ್ಲಿ ಈಗಾಗಲೇ 150 ಎಕರೆ ಜಮೀನಿನ ಖರೀದಿಯನ್ನು ಸರ್ಕಾರ ಮಾಡಿದೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಚಿತ್ರನಗರಿಯನ್ನು ರಾಮನಗರದಲ್ಲಿ ಸ್ಥಾಪಿಸುವುದಾಗಿ ಹೇಳಿದ್ದರು. ತದನಂತರ ಮೈಸೂರು ಹಾಗೂ ರಾಮನಗರ ಎರಡೂ ಕಡೆ ಸ್ಥಾಪಿಸುವುದಾಗಿ ಹೇಳಿದ್ದರು. ಆದರೆ ಕಳೆದ ಸಾಲಿನಲ್ಲಿ ಈ ಸಂಬಂಧವಾಗಿ ಯಾವುದೇ ಕಾರ್ಯ ಆಗಲಿಲ್ಲ. ಪ್ರವಾಸೋದ್ಯಮ ಸಚಿವರು ಮೈಸೂರಿನವರೇ ಆಗಿದ್ದರೂ ಸರ್ಕಾರದ ಈ ಯೋಜನೆಯನ್ನು ನೆನೆಗುದಿಗೆ ತಳ್ಳಿದ್ದು ದುರಂತ ಎಂದರೆ ತಪ್ಪಾಗಲಾರದು.
ಇದು ಕಳೆದ ಬಾರಿಯ ಬಜೆಟ್ ಚಿತ್ರಣ, ಪ್ರಗತಿಯ ವಿವರ. ಈ ಬಾರಿಯ ಬಜೆಟ್ ಏನಾಗುತ್ತದೋ ಎಂಬ ನಿರೀಕ್ಷೆಯಲ್ಲಿ ಸದ್ಯ ಮೈಸೂರಿಗರು ಇದ್ದಾರೆ.












Click it and Unblock the Notifications