ಮೈಸೂರು ಮಂಜುನಾಥ್ ರಿಂದ ಅಂತಾರಾಷ್ಟ್ರೀಯ ಯೋಗ ಗೀತೆ
ಮೈಸೂರು, ಜೂನ್ 20: ಯೋಗವೆಂದರೆ ಪ್ರಾಣಾಯಾಮ, ಧ್ಯಾನ ಅಷ್ಟೇ ಅಲ್ಲ. ಅದರಲ್ಲಿ ಕರ್ಮ, ಜ್ಞಾನ, ನಾದ ಎಲ್ಲವೂ ಇರುತ್ತದೆ. ಓಂಕಾರದಿಂದ ಶುರುವಾಗುವ ನಾದದ ಮೂಲ ಯೋಗದ ಪ್ರಾರಂಭ. ಹೀಗಿದ್ದಾಗ, ಯೋಗಕ್ಕೇ ರಾಗ ಸಂಯೋಜಿಸಿದರೆ ಹೇಗೆ? ಹೌದು. ಇಂಥದ್ದೊಂದು ಆಲೋಚನೆಗೆ ರೂಪ ಕೊಟ್ಟವರು. ಅಂತಾರಾಷ್ಟ್ರೀಯ ಪಿಟೀಲು ವಾದಕ ಮೈಸೂರು ಮಂಜುನಾಥ್. ಅವರು ಯೋಗಕ್ಕೆಂದೇ ಹೊಸ ರಾಗ ಸೃಷ್ಟಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಭರತ ಎಂಬ ಹೊಸ ರಾಗವನ್ನು ಹುಡುಕಿರುವ ಮಂಜುನಾಥ್ ಅವರು, ನಾಳೆ ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಅದನ್ನು ಬಿಡುಗಡೆ ಮಾಡಲಿದ್ದಾರೆ. ಶತಾವಧಾನಿ ಗಣೇಶ್ ಅವರು ಯೋಗ ದಿನಕ್ಕೆ ಸಂಬಂಧಪಟ್ಟ ಗೀತ ರಚನೆ ಮಾಡಿದ್ದು, ಅದಕ್ಕೆ ಮಂಜುನಾಥ್ ರಾಗ ಹೂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ನಮ್ಮ ದೇಶದ ಸಂಸ್ಕೃತಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂಬ ಅಭಿಲಾಷೆಯಿಂದ ಈ ಗೀತೆ ರಚನೆ ಮಾಡಲಾಗಿದೆ. ಯುರೋಪಿನ ಖ್ಯಾತ ಸಂಗೀತ ದಿಗ್ಗಜರು ಈ ಗೀತೆಗೆ ದನಿಯಾಗಿದ್ದಾರೆ. ಐದು ನಿಮಿಷದ ಈ ಗೀತೆಯಲ್ಲಿ 20 ಸಂಗೀತಗಾರರು ತೊಡಗಿದ್ದಾರೆ. ಜೈ ಹೋ ಖ್ಯಾತಿಯ ವಿಜಯ್ ಪ್ರಕಾಶ್, ಬಾಂಬೆ ಜಯಶ್ರೀ, ರೇಣು ಮುಜಂದಾರ್, ಜಯಂತಿ, ಉಸ್ತಾದ್ ರಫೀಕ್ ಖಾನ್, ಸಂಜೀವ್ ಅಭಯಂಕರ್, ರಾಮದಾಸ್ ಸೇರಿದಂತೆ ಇಟಲಿಯ ಸಂಗೀತ ದಿಗ್ಗಜರು ಈ ಗೀತೆಗಾಗಿ ಕಾರ್ಯ ನಿರ್ವಹಿಸಿದ್ದಾರೆ.

ಯೋಗ ಗೀತೆಗೆ ಹಲವು ಸಂಗೀತ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆ. ಪಿಯಾನೊ, ಸ್ಯಾಕ್ಸಾಫೋನ್ , ವೆಸ್ಟನ್ ವಯೋಲಿನ್, ತಬಲಾ, ಮೃದಂಗ, ಖಂಜರ, ಘಟ ಸೇರಿದಂತೆ ಒಟ್ಟು 14ಕ್ಕೂ ಹೆಚ್ಚು ಸಂಗೀತ ಉಪಕರಣಗಳು ಹಾಡಿನಲ್ಲಿ ಸದ್ದು ಮಾಡುತ್ತವೆ.
ಮೊದಲು ಗೀತೆಯನ್ನು ಬಿಡುಗಡೆಗೊಳಿಸಿ ನಂತರ ವಿಡಿಯೋ ಹಾಡನ್ನು ಬಿಡುಗಡೆ ಮಾಡುವ ಆಲೋಚನೆ ಇದೆ. ಯೋಗವನ್ನು ಅಭ್ಯಾಸ ಮಾಡುತ್ತಿರುವ ಹಾಗೂ ಯೋಗವನ್ನು ಪ್ರೀತಿಸುವ ಎಲ್ಲರಿಗೂ ಈ ಗೀತೆ ಅರ್ಪಿಸಲಾಗುತ್ತಿದೆ. ಭಾರತದ ಯೋಗಕ್ಕೆ ಇಡೀ ವಿಶ್ವದಲ್ಲೇ ಮನ್ನಣೆ ಇದೆ. ಆದ್ದರಿಂದ ರೈತಗೀತೆ, ನಾಡಗೀತೆ ರೀತಿ ಯೋಗ ಗೀತೆಯಾಗಿ ಈ ಹಾಡು ಹೊರಹೊಮ್ಮಲಿದೆ ಎಂದು ಪಿಟೀಲು ವಾದಕ ಮೈಸೂರು ಮಂಜುನಾಥ್ ತಿಳಿಸಿದ್ದಾರೆ.
ಲಂಡನ್ ನ ಇಂಡಿಯನ್ ಹೈ ಕಮಿಷನರ್ ಕಚೇರಿ, ಅಮೆರಿಕದ ಅರಿಜೋನ, ನ್ಯೂಯಾರ್ಕ್ ನಗರದಲ್ಲಿಯೂ ಈ ಯೋಗ ಗೀತೆ ಬಿಡುಗಡೆಯಾಗುತ್ತಿದೆ. ಯೋಗ ಗೀತೆ ಹಲವೆಡೆ ಆನ್ ಲೈನ್ ನಲ್ಲಿ ಬಿಡುಗಡೆಯಾಗಲಿರುವುದು ವಿಶೇಷ.












Click it and Unblock the Notifications