ದೀಪಿಕಾ ಪಡುಕೋಣೆಗೆ "ಆಲ್ ದಿ ಬೆಸ್ಟ್' ಹೇಳಿದ ಪ್ರತಾಪ್ ಸಿಂಹ
ಮೈಸೂರು, ಜನವರಿ 08: ದೆಹಲಿಯ ಜೆಎನ್ ಯು ನಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ, ಮುಂದಿನ ವಾರ ನಿಮ್ಮ ಸಿನಿಮಾ ಬಿಡುಗಡೆ ಆಗುತ್ತಿದೆ, ನಿಮಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ ""ದೇಶವಿರೋಧಿ ಮನಸ್ಸುಗಳು ಒಂದೊಂದಾಗಿ ಹೊರ ಬರುತ್ತಿವೆ. ದೀಪಿಕಾ ಪಡುಕೋಣೆ ಅವರ ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ, ಇಲ್ಲದಿದ್ದರೆ ತಿರಸ್ಕರಿಸುತ್ತಾರೆ'' ಎಂದು ಹೇಳಿದರು.
ಪ್ರಧಾನಿ ಮೋದಿಯ ಏಳಿಗೆ ಸಹಿಸದ ಮನಸ್ಸುಗಳು ಪ್ರತಿಭಟನೆ ಮಾಡುತ್ತಿವೆ. ಅಂತಹ ಪ್ರತಿಭಟನೆಗಳಿಗೆ ಯಾವುದೇ ರೀತಿಯ ಮನ್ನಣೆ ಕೊಡುವ ಅಗತ್ಯ ಇಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನಾಕಾರರಿಗೆ ತಿರುಗೇಟು ನೀಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ 370 ವಿಧಿ ರದ್ದು ಮಾಡಿದೆ. ರಾಮ ಮಂದಿರ ಸಮಸ್ಯೆ ಬಗೆಹರಿದಿದೆ, ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗಿಡುವ ಪ್ರಯತ್ನ ನಡೆದಿದೆ. ಅದರ ಭಾಗವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ಪ್ರತಿಭಟನೆಯನ್ನು ದುರುಪಯೋಗ ಪಡಿಸಿಕೊಂಡು ದೇಶದಲ್ಲಿ ಶಾಂತಿ ಕದಡುತ್ತಿರುವವರ ಮೇಲೆ ಶಿಸ್ತು ಕ್ರಮ ಆಗಲೇಬೇಕು. ಉತ್ತರ ಪ್ರದೇಶ ಸರ್ಕಾರದಂತೆ ಇಲ್ಲಿಯೂ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮಾಡುವವರಿಂದಲೇ ದಂಡ ವಸೂಲಿ ಮಾಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಜೆಎನ್ ಯುನಲ್ಲಿ ಗಲಾಟೆ ವಿಚಾರ ಮಾತನಾಡಿದ ಪ್ರತಾಪ್ ಸಿಂಹ ಅವರು, ""ಜೆಎನ್ ಯು ನಿಂದ ದಿನಕ್ಕೊಂದು ಮಾಹಿತಿ ಬರುತ್ತಿದೆ. ಎಬಿವಿಪಿ ಯವರ ಮೇಲೆ ಟಾರ್ಗೆಟ್ ಮಾಡಿ ಹಲ್ಲೆ ಮಾಡಿರುವ ವೀಡಿಯೋ ಬಿಡುಗಡೆ ಅಗುತ್ತಿದೆ. ಈಗ ಪ್ರತಿಭಟನೆಗೆ ಸಿನಿಮಾದವರನ್ನು ಕರೆದುಕೊಂಡು ಹೋಗಿ ಬೇರೆ ಬಣ್ಣ ಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜೆಎನ್ ಯು ವಿಶ್ವವಿದ್ಯಾಲಯಕ್ಕೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ 45 ದಿನ ಬೀಗ ಹಾಕಿಸಿದ್ದರು. ಅಂದು ಇಂದಿರಾ ಗಾಂಧಿ ಮಾಡಿದ್ದು ತಪ್ಪು ಅಂತ ಕಾಂಗ್ರೆಸ್ ನವರು ಹೇಳುತ್ತಾರಾ.? ಎಂದು ಪ್ರಶ್ನಿಸಿದರು.
ಇಡೀ ದೇಶದಲ್ಲಿ 600 ಕ್ಕೂ ಹೆಚ್ಚು ಯುನಿವರ್ಸಿಟಿ ಗಳಿವೆ. ಜಿಎನ್ ಯು, ಜಾಮಿಯಾ ಮಿಯಾ ವಿವಿ ಎರಡೇ ಅಲ್ಲ. ಎಲ್ಲಾ ಕಡೆ ಪಾಠ ಪ್ರವಚನಗಳ ಚೆನ್ನಾಗಿಯೇ ನಡೆಯುತ್ತಿವೆ ಅಂದರೆ ದೇಶ ವಿರೋಧಿ ಚಟುವಟಿಕೆ ಎಲ್ಲಿ ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.












Click it and Unblock the Notifications