ರೈತರನ್ನೇ ದಾರಿ ತಪ್ಪಿಸಿದವರು, ನೌಕರರನ್ನು ದಾರಿ ತಪ್ಪಿಸದೇ ಇರುತ್ತಾರಾ?: ಮೈಸೂರು ಸಂಸದ
ಮೈಸೂರು, ಏಪ್ರಿಲ್ 8: ರೈತರನ್ನೇ ದಾರಿ ತಪ್ಪಿಸಿದವರನ್ನು ತಮ್ಮ ನಾಯಕನಾಗಿ ಮಾಡಿಕೊಂಡಿರುವ ಕೆಎಸ್ಆರ್ಟಿಸಿ ನೌಕರರು ದಾರಿ ತಪ್ಪದೆ ಇರುತ್ತಾರಾ? ಎಂದು ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರ ಮೈಸೂರು ನಗರದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ತಮ್ಮ ನಾಯಕ ಎಂದು ಮಾಡಿಕೊಂಡಿದ್ದೇ ಸಾರಿಗೆ ನೌಕರರ ತಪ್ಪು ಎಂದು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಸಿಡಿಮಿಡಿಗೊಂಡರು.
ಸಾರಿಗೆ ನೌಕರರು ಕೋಡಿಹಳ್ಳಿ ನಾಯಕತ್ವವನ್ನು ಬಿಟ್ಟು ಬಂದು ಮಾತನಾಡಲಿ: ಸಚಿವ ಕೆ.ಎಸ್ ಈಶ್ವರಪ್ಪ
ರೈತರ ದನಿಯಾಗಿದ್ದ ಪ್ರೊ.ನಂಜುಂಡಸ್ವಾಮಿ
ರಾಜ್ಯದಲ್ಲಿ ರೈತರ ದನಿಯಾಗಿದ್ದ ಪ್ರೊ.ನಂಜುಂಡಸ್ವಾಮಿ, ಕೆ.ಎಸ್ ಪುಟ್ಟಣ್ಣಯ್ಯ ಅವರಿದ್ದಾಗ ರೈತ ಮುಖಂಡರುಗಳ ಹೋರಾಟದ ಬಗ್ಗೆ ಗೌರವವಿತ್ತು. ಆದರೆ ಅವರಿಬ್ಬರು ಅಸ್ತಂಗತ ಆದ ನಂತರ ಅಂತಹ ಮುಖ ರೈತ ಹೋರಾಟದಲ್ಲಿಲ್ಲ. ಈಗ ಇರುವವರು ಖಾಲಿ ಹೋರಾಟಗಾರರು ಎಂದು ಟೀಕಿಸಿದ ಪ್ರತಾಪ್ ಸಿಂಹ, ಇಂತಹ ಹೋರಾಟಗಾರರನ್ನು ನಂಬಿದರೆ ನೌಕರರು ಸಹ ದಾರಿ ತಪ್ಪುತ್ತಾರೆ ಎಂದರು.
ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ
ನಾವು ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಹೀಗಿರುವಾಗ ಸಾರಿಗೆ ನೌಕರರು ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಈ ರೀತಿಯ ಹೋರಾಟಕ್ಕೆ ಇಳಿಯುವುದು ತಪ್ಪು. ಈ ಹೋರಾಟ ಹೀಗೆ ಮುಂದುವರಿದರೆ ಜನರೇ ಸಾರಿಗೆ ವಿಭಾಗದಲ್ಲೂ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಹೀಗಾಗಿ ಜನರೇ ಖಾಸಗೀಕರಣದ ಈ ಬಗ್ಗೆ ಧ್ವನಿ ಎತ್ತುವಂತೆ ಮಾಡಬೇಡಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಮಾತನ್ನು ಜನರು ಮೆಚ್ಚಲ್ಲ
ಜಾಸ್ತಿ ಕೆಲಸ ಮಾಡುವ ನಿಮ್ಮ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ. ಆ ಪ್ರೀತಿ ಕಳೆದುಕೊಳ್ಳಬೇಡಿ. ಎಸ್ಮಾ ಜಾರಿ ಮಾಡಿ ಬಲವಂತವಾಗಿ ಕೆಲಸಕ್ಕೆ ಹಾಜರಾಗುವಂತಹ ಪರಿಸ್ಥಿತಿ ತಂದುಕೊಳ್ಳಬೇಡಿ. ಆ ಮೂಲಕ ಎಸ್ಮಾ ಜಾರಿಗೊಳಿಸುವ ಅನಿರ್ವಾಯತೆಯನ್ನು ಸರ್ಕಾರಕ್ಕೆ ತಂದಿಡಬೇಡಿ ಎಂದು ಮನವಿ ಮಾಡಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈಗ ಬೇಡಿಕೆ ಈಡೇರಿಸಿ ಎನ್ನುತ್ತಿದ್ದಾರೆ. ಆದರೆ ಈ ಕೆಲಸವನ್ನು ಈ ಹಿಂದೆಯೇ ಅವರ ಅಧಿಕಾರವಧಿಯಲ್ಲೇ ಮಾಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರ ಇವತ್ತಿನ ಮಾತನ್ನು ಜನರು ಮೆಚ್ಚಲ್ಲ, ಅವರ ಆತ್ಮಸಾಕ್ಷಿಯೂ ಮೆಚ್ಚಲ್ಲ ಎಂದರು.
ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಬೇಡ
ಇದಕ್ಕೂ ಮುನ್ನ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮೈಸೂರು ನಗರದ ಕೇಂದ್ರಿಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಪ್ರತಾಪ್ ಸಿಂಹ, ಪರ್ಯಾಯ ಬಸ್ ವ್ಯವಸ್ಥೆ ಹಾಗೂ ಮುಷ್ಕರದ ಕುರಿತು ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರನ್ನು ಮಾತನಾಡಿಸಿದ ಅವರು, ವೇಗವಾಗಿ ಬಸ್ ಡ್ರೈವಿಂಗ್ ಮಾಡಬೇಡಿ ಹಾಗೂ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಬೇಡಿ. ನಿಮಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಅಧಿಕಾರಿಗಳೇ ಮಾಡಿಕೊಡುತ್ತಾರೆ ಎಂದರು.