ಮೈಸೂರು ಮೇಯರ್ ಚುನಾವಣೆ; ಬಿಜೆಪಿಯ ಸುನಂದಾ ಪಾಲನೇತ್ರ ರಾಜೀನಾಮೆ?
ಮೈಸೂರು, ಫೆಬ್ರವರಿ 25: ಮೈಸೂರು ಮಹಾನಗರ ಪಾಲಿಕೆ ಮೇಯರ್ ಗದ್ದುಗೆ ಕೈತಪ್ಪಿದ ಬೆನ್ನಲ್ಲೇ ಮೇಯರ್ ಆಗುವ ನಿರೀಕ್ಷೆ ಹೊಂದಿದ್ದ ಪಾಲಿಕೆಯ ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಪರಿಣಾಮ ಮೇಯರ್ ಆಗಿ ಜೆಡಿಎಸ್ನ ರುಕ್ಮಿಣಿ ಮಾದೇಗೌಡ, ಉಪಮೇಯರ್ ಆಗಿ ಕಾಂಗ್ರೆಸ್ನ ಅನ್ವರ್ ಬೇಗ್ ಆಯ್ಕೆಯಾಗಿದ್ದರು.
ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೇರಬೇಕೆಂದು ಆಸೆ ಇಟ್ಟುಕೊಂಡಿದ್ದ ಬಿಜೆಪಿಗೆ ನಿರಾಸೆ ಉಂಟಾಯಿತು.
ಕುವೆಂಪುನಗರದ ವಾರ್ಡ್ ನಂ.59ರ ಪಾಲಿಕೆ ಸದಸ್ಯೆ ಸುನಂದ ಪಾಲನೇತ್ರ ರಾಜಿನಾಮೆ ನೀಡುವ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಪಕ್ಷದಿಂದ ಸ್ಫರ್ಧಿಸಿ ಪರಾಭವಗೊಂಡಿದ್ದೇನೆ. ಇದರಿಂದ ಬೇಸರವಾಗಿದೆ, ಪಾಲಿಕೆ ಸದಸ್ಯೆಯಾಗಿ ಮುಂದುವರೆಯಲು ಮಾನಸಿಕವಾಗಿ ಹಿಂಸೆ ಆಗುತ್ತಿದೆ. ಹಾಗಾಗಿ ರಾಜೀನಾಮೆ ನೀಡುವ ಉದ್ದೇಶ ಹೊಂದಿದ್ದೇನೆ. ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸುನಂದ ಪಾಲನೇತ್ರ ಮನವಿ ಮಾಡಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಮೈಸೂರು ಪಾಲಿಕೆ ಗದ್ದುಗೆ ಏರಲು ಕಮಲಪಾಳಯ ಶತಪ್ರಯತ್ನ ನಡೆಸಿತ್ತು. ಉಸ್ತುವಾರಿ ಸಚಿವ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ ಅಧಿಕಾರದ ಚುಕ್ಕಾಣಿ ಹಿಡಿಯಲು ತೀವ್ರ ಕಸರತ್ತು ನಡೆಸಿದ್ದರು.
ಮೈತ್ರಿಯಾಗೋ ಮಾತುಕೊಟ್ಟಿದ್ದ ದಳಪತಿಗಳಲು ಕಡೇ ಕ್ಷಣದಲ್ಲಿ ಕಾಂಗ್ರೆಸ್ ಜತೆ ದೋಸ್ತಿ ಮಾಡಿದರು. ಇದರಿಂದಾಗಿ ಕಮಲಪಾಳಯಕ್ಕೆ ಗದ್ದುಗೆ ಕೈತಪ್ಪಿತು. ಬೇಸರಗೊಂಡಿದ್ದ ಮೇಯರ್ ಅಭ್ಯರ್ಥಿ ಸುನಂದ ಪಾಲನೇತ್ರ ಬೆನ್ನಿಗೆ ಅಲ್ಲ ಎದೆಗೆ ಚೂರಿ ಹಾಕಿಬಿಟ್ಟರು ಎಂದು ಬುಧವಾರ ಭಾವುಕರಾಗಿದ್ದರು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ಸುನಂದ ಪಾಲನೇತ್ರ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಂಬಂಧಿ ಅನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications