ಮೈಸೂರಿನಲ್ಲಿ ಜೆಡಿಎಸ್ ಜೊತೆ ಮುರಿದುಬಿದ್ದ ಮೈತ್ರಿ: ಕಾಂಗ್ರೆಸ್ ಜಾಣ ನಡೆ
ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಕಮಲ ಅರಳಿದೆ. ಬಿಜೆಪಿಯ ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಮೈಸೂರು ಹಾಲು ಒಕ್ಕೂಟದ ಚುನಾವಣೆಯಂತೆ, ಮೇಯರ್ ಚುನಾವಣೆಯೂ ಭಾರೀ ಕುತೂಹಲವನ್ನು ಹುಟ್ಟುಹಾಕಿತ್ತು.
ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿಯಿತ್ತು, ಅದು ಈ ಬಾರಿಯೂ ಮುಂದುವರಿಯಬಹುದು ಎನ್ನುವ ಲೆಕ್ಕಾಚಾರ ಹುಸಿಯಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಳ್ಳುವ ಮೂಲಕ, ಜೆಡಿಎಸ್ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದಂತಾಗಿದೆ.
ಬಿಜೆಪಿಯ ಸುನಂದಾ ಅವರಿಗೆ 26 ಮತ, ಜೆಡಿಎಸ್ಸಿನ ಅಶ್ವಿನಿ ಅನಂತು ಮತ್ತು ಕಾಂಗ್ರೆಸ್ಸಿನ ಶಾಂತಕುಮಾರಿಗೆ ತಲಾ 22 ಮತಗಳು ಬಿದ್ದಿವೆ. ತೆರೆಮೆರೆಯಲ್ಲಿ ನಡೆದ ಹಲವು ವಿದ್ಯಮಾನಗಳಿಂದಾಗಿ , ಬಿಜೆಪಿ ಇಲ್ಲಿ ಗೆಲುವು ಸಾಧಿಸಿದೆ. ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಉದ್ದೇಶಪೂರ್ವಕವಾಗಿಯೇ ಚುನಾವಣೆಯಿಂದ ದೂರ ಉಳಿದಿದ್ದರು ಎಂದು ಹೇಳಲಾಗುತ್ತಿದೆ.
ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆ ಮೈತ್ರಿ ಉಳಿಸಿಕೊಳ್ಳಲು ವಿಫಲವಾಯಿತು ಎಂದು ಹೇಳಲಾಗುತ್ತಿದ್ದರೂ, ಮುಂಬರುವ ಅಸೆಂಬ್ಲಿ ಚುನಾವಣೆಯ ದೃಷ್ಟಿಯಿಂದ, ಕಾಂಗ್ರೆಸ್ ಸರಿಯಾದ ದಾರಿಯಲ್ಲಿ, ಸರಿಯಾದ ಹೆಜ್ಜೆಯನ್ನೇ ಇಟ್ಟಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಮುಂದೆ ಕಾಂಗ್ರೆಸ್ ಸೇರಲಿದ್ದೇನೆ ಎಂದು ಜಿಟಿಡಿ ಹೇಳಿಕೆ ನೀಡಿದ ಒಂದೇ ದಿನದಲ್ಲಿ ಈ ಬೆಳವಣಿಗೆ
ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್ ಅವರು ಮೇಯರ್ ಚುನಾವಣೆಯಿಂದ ದೂರ ಉಳಿದಿದ್ದಾರೆ. ಹಾಲೀ ಅವಧಿಯಲ್ಲಿ ಮಾತ್ರ ನಾನು ಜೆಡಿಎಸ್ ಶಾಸಕನಾಗಿರುತ್ತೇನೆ, ಮುಂದೆ ಕಾಂಗ್ರೆಸ್ ಸೇರಲಿದ್ದೇನೆ ಎಂದು ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ ಒಂದೇ ದಿನದಲ್ಲಿ ಈ ಬೆಳವಣಿಗೆ ನಡೆದಿರುವುದು ಗಮನಿಸಬೇಕಾದ ವಿಚಾರ. ಜಿಟಿಡಿ ಮತ್ತು ಸಂದೇಶ್ ಇಬ್ಬರೂ ಕುಮಾರಸ್ವಾಮಿ ಜೊತೆ ಅಂತರವನ್ನು ಕಾಯ್ದುಕೊಂಡು ಬರುತ್ತಿರುವುದು ಗೊತ್ತಿರುವ ವಿಚಾರ.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ತೀವ್ರ ವಿರೋಧ
ಮೂಲಗಳ ಪ್ರಕಾರ, ಪ್ರಮುಖವಾಗಿ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಆ ಪಕ್ಷದ ಜೊತೆಗೆ ಮೈತ್ರಿ ಮುಂದುವರಿಸುಕೊಂಡು ಹೋಗುತ್ತಿರುವುದಕ್ಕೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ತೀವ್ರ ವಿರೋಧವಿದೆ. ಜೊತೆಗೆ, ಈಗಿನ ಬಿಜೆಪಿ ಸರಕಾರಕ್ಕೆ ಸಂಖ್ಯಾಬಲದ ಸಂಕಷ್ಟ ಎದುರಾದರೆ, ಜೆಡಿಎಸ್ ಜೊತೆ ಮೈತ್ರಿಯಾಗುವ ಸಾಧ್ಯತೆಯಿದೆ. ಇದರಿಂದ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ, ಮುಂದಿನ ಚುನಾವಣೆಯ ಹೊತ್ತಿಗೆ ಬೇರೆ ಸಂದೇಶ ರವಾನೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್, ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಅನ್ನು ದೂರವಿಟ್ಟಿತು ಎನ್ನುವ ಮಾತಿದೆ.

ಸಿದ್ದರಾಮಯ್ಯನವರು ಹೈಕಮಾಂಡಿಗೆ ಮನದಟ್ಟು ಮಾಡಿದ್ದಾರೆ ಎನ್ನುವ ಮಾತಿದೆ
ಮೈಸೂರು ಮೇಯರ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ಸಿನ ಯಾವ ರಾಜ್ಯ ಮಟ್ಟದ ನಾಯಕರು, ದೇವೇಗೌಡ್ರು ಅಥವಾ ಎಚ್.ಡಿ.ಕುಮಾರಸ್ವಾಮಿಯವರನ್ನು ಸಂಪರ್ಕಿಸಲಿಲ್ಲ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಳ್ಳಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಎಚ್ಡಿಕೆ ಹಲವು ಬಾರಿ ಆರೋಪಿಸಿದ್ದರು. ಇದರಿಂದ, ಜೆಡಿಎಸ್ ಜೊತೆಗಿನ ಒಡನಾಟದಿಂದ ದೂರವಿರುವ ಅವಶ್ಯಕತೆಯನ್ನು ಸಿದ್ದರಾಮಯ್ಯನವರು ಹೈಕಮಾಂಡಿಗೆ ಮನದಟ್ಟು ಮಾಡಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ.

ಮೈಸೂರಿನಲ್ಲಿ ಜೆಡಿಎಸ್ ಜೊತೆ ಮುರಿದುಬಿದ್ದ ಮೈತ್ರಿ: ಕಾಂಗ್ರೆಸ್ ಜಾಣ ನಡೆ
ಮಂಡ್ಯ, ಹಾಸನ, ಮೈಸೂರು, ತುಮಕೂರು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಈ ಮೈತ್ರಿಯಿಂದ ತನಗೇ ಲಾಭ ಎನ್ನುವ ಲೆಕ್ಕಾಚಾರದಲ್ಲಿ ಕೈನಾಯಕರು ಇದ್ದಾರೆ. ಈ ಮೈತ್ರಿಯನ್ನು 'ಅಪವಿತ್ರ'ಎಂದು ಜನರ ಮುಂದೆ ಹೋಗುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ಇದರಿಂದ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮಣಿಸಲು ಸುಲಭವಾಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.












Click it and Unblock the Notifications