ಮಾಸ್ಕ್ ಧರಿಸಿ ಸಭೆಗೆ ಬಂದ ಮೈಸೂರು ಮೇಯರ್ ತಸ್ನೀಂ
ಮೈಸೂರು, ಮಾರ್ಚ್ 4: ರಾಜ್ಯದೆಲ್ಲೆಡೆ ಕೊರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗಿದೆ. ಅಂತೆಯೇ ಆ ಆತಂಕ ಮೈಸೂರು ಮಹಾನಗರ ಪಾಲಿಕೆ ಸಭೆಗೂ ತಟ್ಟಿದೆ.
ಕೊರೊನಾ ವೈರಸ್ ಭೀತಿಯಿಂದಾಗಿ ಮೇಯರ್ ತಸ್ನೀಂ, ಉಪಮೇಯರ್ ಶ್ರೀಧರ್ ಹಾಗೂ ನಗರಪಾಲಿಕೆ ಸದಸ್ಯರು ಇಂದು ಮಾಸ್ಕ್ ಧರಿಸಿ ಸಭೆಯಲ್ಲಿ ಭಾಗವಹಿಸಿದರು. ಸದ್ಯ ಮೈಸೂರಿನಲ್ಲಿ ಕೊರೊನಾ ವೈರಸ್ ಭಯವಿಲ್ಲದಿದ್ದರೂ ಮೇಯರ್ ತಸ್ನೀಂ ಮಾಸ್ಕ್ ಧರಿಸಿ ಸಭೆಗೆ ಹಾಜರಾಗಿ ಅಚ್ಚರಿ ಮೂಡಿಸಿದರು.
ರಾಜ್ಯದಲ್ಲಿ ಎಲ್ಲಿಯೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿಲ್ಲ. ಹೀಗಿರುವಾಗ ನೀವು ಮಾಸ್ಕ್ ಧರಿಸಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸುವುದಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ತಸ್ನೀಂ, "ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಸ್ಕ್ ಧರಿಸಿದ್ದೇವೆ" ಎಂದು ಸ್ಪಷ್ಟನೆ ನೀಡಿದರು. ಜೊತೆಗೆ ಮೈಸೂರಿನಲ್ಲಿ ಕೊರೊನಾ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯಧಿಕಾರಿ ಮಾಹಿತಿ ನೀಡಿದರು.

ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳಿದ್ದ ಟೆಕ್ಕಿಯೊಬ್ಬರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಟೆಕ್ಕಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಹಾಂಕಾಂಗ್ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ದುಬೈಗೆ ಕಳೆದ ತಿಂಗಳು ಹೋಗಿದ್ದು, ಅಲ್ಲಿಂದ ದೇಶಕ್ಕೆ ವಾಪಸಾಗಿದ್ದಾನೆ. ಬೆಂಗಳೂರಿಗೆ ಫೆ.19/20ಕ್ಕೆ ಆಗಮಿಸಿದ್ದು, ಬಳಿಕ ಬಸ್ನಲ್ಲಿ ಹೈದಾರಾಬಾದ್ಗೆ ತೆರಳಿದ್ದರು. ಹೈದರಾಬಾದ್ ಗೆ ತೆರಳಿದ ಬಳಿಕ ಕೊರೊನಾ ಲಕ್ಷಣಗಳು ಕಾಣಿಸಿದ್ದವು. ಹೀಗಾಗಿ ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಈ ವೇಳೆ ಪರೀಕ್ಷೆಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು.
ಹೀಗಾಗಿ ರಾಜ್ಯಾದ್ಯಂತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಬೆಂಗಳೂರು ಮೂಲದ ಟೆಕ್ಕಿ ಸೋಂಕಿಗೆ ಗುರಿಯಾಗಿರುವುದು ಎಲ್ಲರಲ್ಲೂ ಆತಂಕ ಹೆಚ್ಚಿಸಿದೆ.












Click it and Unblock the Notifications