ಶಾಸಕ ಸ್ಥಾನಕ್ಕೆ ಸಾ. ರಾ ಮಹೇಶ್ ರಾಜೀನಾಮೆ
ಮೈಸೂರು, ಜೂನ್ 8: ಮೈಸೂರಿನ ಕೆ.ಆರ್.ನಗರದ ವಿಧಾನಸಭಾ ಕ್ಷೇತ್ರದ ಸದಸ್ಯ ಜೆಡಿಎಸ್ ನ ಸಾ.ರಾ.ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ನಿನ್ನೆ (ಜೂನ್ 7) ರಾಜೀನಾಮೆ ನೀಡಿದ್ದಾರೆ.
ಬುಧವಾರ (ಜೂನ್ 7) ವಿಧಾನಸಭೆಯಲ್ಲಿ ನಿಯಮ 69 ರ ಅಡಿಯಲ್ಲಿ ಚರ್ಚೆ ಆರಂಭಿಸಿದ ಸಾ.ರಾ.ಮಹೇಶ್ ಸದನದಲ್ಲೇ ರಾಜೀನಾಮೆ ನೀಡಿ, ಧರಣಿ ನಡೆಸಿದರು.
ಮೈಸೂರಿನ ಕೆ.ಆರ್.ನಗರ ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಮತ್ತು ಕಾರ್ಖಾನೆಯ ನೌಕರರಿಗೆ ವೇತನ ಬಿಡುಗಡೆ ಮಾಡಲು ಸುಮಾರು ನಾಲ್ಕು ವರ್ಷಗಳಿಂದಲೂ ಹೋರಾಟ ಮಾಡಿದರೂ ಸಹ ಸರ್ಕಾರ ಯಾವುದೇ ರೀತಿಯಲ್ಲಿ ಸಹಕರಿಸಿಲ್ಲ ಎಂದು ಬೇಸರದಿಂದ ಸಾ.ರಾ.ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.[ವಿಶ್ವನಾಥ್ ಸಂದರ್ಶನ : ಇರುವುದೋ ಬಿಡುವುದೋ ನೀವೇ ಹೇಳಿ!]

ನಾನು ಬೆಳಿಗ್ಗೆ (ಜೂನ್ 7) ಯೇ ಉಪಸಭಾಧ್ಯಕ್ಷ ಶಿವಶಂಕರ್ ರೆಡ್ಡಿಅವರಿಗೆ ರಾಜೀನಾಮೆ ಪತ್ರ ನೀಡಿರುವುದಾಗಿ ಅವರು ತಿಳಿಸಿದರು. ಅವರು ಸ್ಪರ್ಧಿಸಿದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಮತ್ತು ವೇತನವನ್ನು ಬಿಡುಗಡೆ ಮಾಡಲು ವಿನಂತಿಸಿದ್ದರೂ, ಸರ್ಕಾರ ಕಿಂಚಿತ್ತೂ ಗಮನ ಹರಿಸದ ಬೇಸರವೇ ರಾಜೀನಾಮೆಗೆ ಕಾರಣ ಎಂದು ಅವರು ಹೇಳಿದರು.
ಶಾಸಕ ಸಾ.ರಾ.ಮಹೇಶ್ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications