ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಇದ್ದರೂ ಶುಚಿಯ ಬಗ್ಗೆ ಕೇಳಲೇಬೇಡಿ
ಮೈಸೂರು, ಫೆಬ್ರವರಿ 9 : ಕಳೆದ ವರ್ಷವಷ್ಟೇ ಬಹಳ ಉತ್ಸಾಹದಿಂದ ನಗರದಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್'ಗಳಲ್ಲಿ ಶುಚಿತ್ವವೇ ಕಾಣುತ್ತಿಲ್ಲ. ಹೊರ ನೋಟಕ್ಕೆ ಎಲ್ಲವೂ ಚಂದವಾಗಿದೆ ಎನಿಸುತ್ತದೆ. ಆದರೆ ಶುಚಿತ್ವ ಮಾತ್ರ ಮರೆಯಾಗಿದೆ.

ಟೇಬಲ್ ಮೇಲೆ ಹಾಗೆ ಇದ್ದ ಪ್ಲೇಟ್ಗಳು
ಸರಿಯಾಗಿ ತಟ್ಟೆ ತೊಳೆಯುವುದಿಲ್ಲ. ತಿಂಡಿ, ಊಟ ಸೇವಿಸಿದ ತಟ್ಟೆಗಳನ್ನು ಒಂದು ಬಕೆಟ್ ನೀರಿನಲ್ಲಿ ತೊಳೆಯಲಾಗುತ್ತದೆ. ಮತ್ತೆ ಮತ್ತೆ ಅದೇ ನೀರಿನಲ್ಲಿ ಅದ್ದಿ ತೆಗೆದು ಸ್ವಚ್ಛವಾಗದ ತಟ್ಟೆಯಲ್ಲೇ ಆಹಾರ ಸರಬರಾಜು ಮಾಡುತ್ತಿರುವುದು ಇಂದಿರಾ ಕ್ಯಾಂಟೀನ್ಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕಂಡು ಬಂದ ದೃಶ್ಯಗಳು.

ಶುಚಿ, ರುಚಿ ಎರಡೂ ಇಲ್ಲ
ಕಾಡಾ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡಿದವರ ತಟ್ಟೆಗಳು ಟೇಬಲ್ ಮೇಲೆ ಹಾಗೆಯೇ ಇದ್ದವು. ಜತೆಗೆ, ತಟ್ಟೆ ತೊಳೆದ ನೀರು ಸಿಂಕ್ನಿಂದ ಹೊರ ಹೋಗುತ್ತಿರಲಿಲ್ಲ. ಇದಕ್ಕಾಗಿ ಬಕೆಟುಗಳಲ್ಲಿ ಸಂಗ್ರಹಿಸಿ ಆಚೆಗೆ ಚೆಲ್ಲಬೇಕಿತ್ತು. ಬೇರೆ ನೀರು ಬಳಸದೆ, ಈಗಾಗಲೇ ತೊಳೆದ ತಟ್ಟೆಯ ನೀರಲ್ಲೇ ಮತ್ತೊಂದಿಷ್ಟು ತೊಳೆದು ಊಟ ಬಡಿಸಲು ಕೊಡಲಾಗುತ್ತಿತ್ತು.
ಇದರೊಂದಿಗೆ ಗುಣಮಟ್ಟದ ಆಹಾರ ಇಲ್ಲ, ಶುಚಿ, ರುಚಿ ಇಲ್ಲ. ಸ್ವಚ್ಛತೆ ಮೊದಲೇ ಇಲ್ಲ ಎನ್ನುವ ಅಸಮಾಧಾನವನ್ನು ಸಾರ್ವಜನಿಕರು ಹೊರ ಹಾಕಿದರು. ನಗರದಲ್ಲಿ 11 ಇಂದಿರಾ ಕ್ಯಾಂಟೀನ್ಗಳು ಬಡವರ ಉದರ ತುಂಬಿಸುತ್ತಿವೆ. ಆದರೆ, ಶುಚಿ, ರುಚಿಯಿಲ್ಲದ ಆಹಾರ ಸೇವಿಸಿ ಅನಾರೋಗ್ಯಕ್ಕೆ ಈಡಾಗುವ ಭಯ ಅನೇಕರಲ್ಲಿದೆ. ಇದಕ್ಕಾಗಿ ಕಡಿಮೆ ದುಡ್ಡಿಗೆ ಆಹಾರ ಸಿಗುತ್ತದೆಂದು ಸೇವಿಸಿ ಆರೋಗ್ಯ ಹದಗೆಡಿಸಿಕೊಳ್ಳುವುದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಕೆಲ ಕ್ಯಾಂಟೀನುಗಳಲ್ಲಿ ಬೇಡಿಕೆಯಿದ್ದಲ್ಲಿ ಸರಿಯಾಗಿ ಆಹಾರ ಪೂರೈಕೆಯಾಗುತ್ತಿಲ್ಲ ಎನ್ನುವ ಆರೋಪವೂ ಇದೆ. 'ಊಟ ಚೆನ್ನಾಗಿಲ್ಲ. ಸ್ವಚ್ಛತೆ ಇಲ್ಲ. ಆರಂಭದ ದಿನಗಳಲ್ಲಿ ಕೊಟ್ಟ ಹಾಗೆ ಈಗ ಕೊಡುತ್ತಿಲ್ಲ. ಕಡಿಮೆಯೂ ಕೊಡುತ್ತಾರೆ. ಜತೆಗೆ, ರುಚಿಯಿಲ್ಲ, ಶುಚಿಯಿಲ್ಲ' ಎಂದು ಆಟೋ ಚಾಲಕ ಮಲ್ಲಪ್ಪ ಬೇಸರ ವ್ಯಕ್ತಪಡಿಸಿದರು.

ಕೂಲಕಾರ್ಮಿಕರಿಗಾಗಿಯೇ ಕ್ಯಾಂಟೀನ್
ಆವರಣದಲ್ಲಿರುವ ಕ್ಯಾಂಟೀನ್ನಲ್ಲಿ ತಿಂಡಿ ತಿನ್ನುವ ರಾಮಯ್ಯ ಇದು ಕೂಲಿಗಳಿಗೆ ಹೇಳಿಮಾಡಿಸಿದ ಕ್ಯಾಂಟೀನ್. ಆದರೆ, ಟೇಸ್ಟ್ ಇಲ್ಲ'ಎಂದರು. ಸೂಯೆಜ್ ಫಾರಂ ಬಳಿಯ ಕ್ಯಾಂಟೀನಿನಲ್ಲಿ ತಿಂಡಿ ತಿನ್ನುವ, ಹುಲ್ಲು ಕೊಯ್ಯುವ ಲಿಂಗರಾಜು, ದಿನಾಲೂ ಬಾತ್, ಪುಳಿಯೊಗರೆ, ಪೊಂಗಲ್ ಕೊಡ್ತಾರೆ. ಮಂಗಳವಾರ ಬೆಳಿಗ್ಗೆ ಖಾರಾಬಾತ್ ಪರವಾಗಿಲ್ಲ ಎಂದರು.
ಇನ್ನು ಶಾರದಾದೇವಿನಗರದ ನೀರಿನ ಟ್ಯಾಂಕ್ ಆವರಣದಲ್ಲಿರುವ ಕ್ಯಾಂಟೀನ್ಗೆ ಹೆಚ್ಚು ಜನರು ತೆರಳುತ್ತಿಲ್ಲ. ಈ ಕುರಿತು ಅಲ್ಲಿನ ಸಿಬ್ಬಂದಿ, ಇದು ಹೆಚ್ಚು ಪ್ರಚಾರಕ್ಕೆ ಬಂದಿಲ್ಲ. ಮೂಲೆಯಲ್ಲಾಯಿತು. ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಬೆಳಿಗ್ಗೆ250, ಮಧ್ಯಾಹ್ನ 200, ರಾತ್ರಿ 150 ಜನರು ಬರ್ತಾರಷ್ಟೆ. ಬಂದವರಾರೂ ಮತ್ತೆ ಬರುತ್ತಿಲ್ಲ. ಹೊಸಬರು ಮಾತ್ರ ಬರುತ್ತಿದ್ದಾರೆ ಎಂದು ತಿಳಿಸಿದರು.

ಪಿಯು ಕಾಲೇಜಿನ ಕ್ಯಾಂಟೀನ್ ಆವರಣದಲ್ಲಿ ನೂಕು ನುಗ್ಗಲು
ಗ್ರಾಮೀಣ ಬಸ್ ನಿಲ್ದಾಣ ಎದುರಿನ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿರುವ ಕ್ಯಾಂಟೀನ್ಗೆ ನೂಕುನುಗ್ಗಲು ಇದೆ. ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರು ಲಗ್ಗೆ ಇಡುತ್ತಾರೆ. ಆದರೆ, ಸರಿಯಾಗಿ ತಟ್ಟೆ ತೊಳೆಯಲ್ಲ, ಶುಚಿತ್ವ ಕಾಪಾಡದ ಕಾರಣ ನೊಣಗಳ ಕಾಟ ಹೆಚ್ಚಿದೆ ಎಂದು ಮಾರುಕಟ್ಟೆ ಪ್ರತಿನಿಧಿ ರಾಮು ಬೇಸರ ವ್ಯಕ್ತಪಡಿಸಿದರು.












Click it and Unblock the Notifications