ಮೈಸೂರು: ವರದಕ್ಷಿಣೆಗಾಗಿ ಬಲಿಯಾಯ್ತು ಮುಗ್ಧ ಮಹಿಳೆಯ ಜೀವ
ಮೈಸೂರು, ಅಕ್ಟೋಬರ್ 6: ವರದಕ್ಷಿಣೆ ದಾಹ ಎನ್ನುವುದು ನಮ್ಮ ನಡುವೆ ತನ್ನ ಕಬಂಧ ಬಾಹುವನ್ನು ವ್ಯಾಪಕವಾಗಿ ಚಾಚಿಕೊಂಡಿದೆ ಎನ್ನುವುದಕ್ಕೆ ಈ ಘಟನೆ ಪ್ರತ್ಯಕ್ಷ ಉದಾಹರಣೆ. ಕೇವಲ ಕಾರು ತರುವಂತೆ ಒತ್ತಾಯಿಸದ್ದಷ್ಟೇ ಅಲ್ಲದೇ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಆಕೆಯ ಪತಿಯೇ ಕೊಲೆಗೈದ ಘಟನೆ ಮೈಸೂರು ಜಿಲ್ಲೆ ರಂಗಯ್ಯನ ಕೊಪ್ಪಲಿನಲ್ಲಿ ನಡೆದಿದೆ.
ಬೆಂಗಳೂರು: ಪತ್ನಿಗೇ ಬ್ಲಾಕ್ ಮೇಲ್ ಮಾಡುತ್ತಿದ್ದ ಕ್ರೂರ ಪತಿ!
ಮೃತಳನ್ನು ತೇಜಸ್ವಿನಿ ಎಂದು ಗುರುತಿಸಲಾಗಿದೆ. 11 ತಿಂಗಳ ಹಿಂದಷ್ಟೇ ಹೆಚ್.ಡಿ.ಕೋಟೆ ತಾಲೂಕಿನ ತೇಜಸ್ವಿನಿಗೆ ಹುಣಸೂರು ತಾಲೂಕು ರಂಗಯ್ಯನ ಕೊಪ್ಪಲು ರಾಘವೇಂದ್ರ ಜೊತೆ ವಿವಾಹ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ ಸಾಕಷ್ಟು ಹಣ ನೀಡಿದ್ದರೂ ರಾಘವೇಂದ್ರ ನಿಗೆ ವರದಕ್ಷಿಣೆ ದಾಹ ತೀರಿರಲಿಲ್ಲ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ವರದಕ್ಷಿಣೆ ತರದಿರುವುದರಿಂದ ತೇಜಸ್ವಿನಿ ಮೇಲೆ ಹಲ್ಲೆ ನಡೆಸಿದ್ದಾನೆ.
ತೀವ್ರ ಗಾಯಗೊಂಡಿದ್ದ ತೇಜಸ್ವಿನಿಯನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತೇಜಸ್ವಿನಿ ಗುರುವಾರ ಸಾವನ್ನಪ್ಪಿದ್ದಾರೆ. ತೇಜಸ್ವಿನಿ ಪೋಷಕರು ಆಕೆಯ ಪತಿಯೇ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದು, ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಘವೇಂದ್ರ ವಿರುದ್ಧ ದೂರು ದಾಖಲಿಸಲಾಗಿದೆ.
ತೇಜಸ್ವಿನಿ ಪತಿ ರಾಘವೇಂದ್ರಗೆ ಹುಣಸೂರು ಎಂ ಎಲ್ ಎ ಶ್ರೀರಕ್ಷೆ ನೀಡಿದ್ದಾರೆ ಎಂದು ತೇಜಸ್ವಿನಿ ಕುಟುಂಬಸ್ಥರು ಆರೋಪಿಸಿದ್ದಾರೆ. ಗ್ರಾ.ಪಂ.ಉಪಾಧ್ಯಕ್ಷ ನರಸಿಂಹೇಗೌಡ ತಮ್ಮ ಮಗಳನ್ನು 20 ಲಕ್ಷ ಖರ್ಚು ಮಾಡಿ ಹನ್ನೊಂದು ತಿಂಗಳ ಹಿಂದಷ್ಟೇ ವಿವಾಹ ಮಾಡಿಕೊಟ್ಟಿದ್ದರು. ವ್ಯವಸಾಯ ಮಾಡುವ ವ್ಯಕ್ತಿಯನ್ನೇ ಮದುವೆಯಾಗೋದಾಗಿ ಹೇಳಿ ತೇಜಸ್ವಿನಿ ರಾಘವೇಂದ್ರನ ಕೈ ಹಿಡಿದಿದ್ದರು. ನ್ಯಾಯ ಸಿಗುವವರೆಗೂ ಶವ ಕೊಂಡೊಯ್ಯಲ್ಲ ಎಂದು ತೇಜಸ್ವಿನಿ ಪೋಷಕರು ಪಟ್ಟು ಹಿಡಿದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.