ಮೈಸೂರಲ್ಲಿ ಮತದಾನ ಅರಿವು ಮೂಡಿಸಲು ಹೋಟೆಲ್ ಸಿಬ್ಬಂದಿಗಳ ನೂತನ ಪ್ರಯತ್ನ
ಮೈಸೂರು, ಮಾರ್ಚ್ 23 : ಮತದಾನ ನಮ್ಮೆಲ್ಲರ ಹಕ್ಕು. ತಪ್ಪದೇ ಮತ ಚಲಾಯಿಸಿ ಎಂದು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ಈಗಾಗಲೇ ಕೈಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಮೈಸೂರಿನ ಹೋಟೆಲ್ ಮಾಲೀಕರೊಬ್ಬರು ವಿಶಿಷ್ಟವಾದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರಿನ ಚಾಮುಂಡಿಪುರಂನಲ್ಲಿರೋ ಅಪೂರ್ವ ದರ್ಶಿನಿ ಹೋಟೆಲ್ ಮಾಲೀಕರು ತಮ್ಮ ತಿಂಡಿ ಬಿಲ್ ಮೂಲಕವೇ ಗ್ರಾಹಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಕಾಫಿ, ತಿಂಡಿ ಬಿಲ್ ನಲ್ಲಿ ಎಲ್ಲರೂ ತಪ್ಪದೆ ಮತದಾನ ಚಲಾಯಿಸಿ ಎಂದು ನಮೂದಿಸಿರುವ ಮಾಲೀಕರು, ಚುನಾವಣೆ ದಿನಾಂಕವನ್ನು ಕೂಡ ನಮೂದಿಸಿದ್ದಾರೆ. ಬಸ್ ಟಿಕೆಟ್ ನಲ್ಲೂ ಮತದಾನದ ಜಾಗೃತಿ ಮೂಡಿಸುವ ಕೆಲಸಗಳು ಆಗಾಗ ನಡೆಯುತ್ತಿರುತ್ತದೆ.

ಈಗಾಗಲೇ ಮಿಂಚಿನ ನೋಂದಣಿ' ಕಾರ್ಯಕ್ರಮದ ಮೂಲಕ ಹೊಸ ಮತ ದಾರರ ಸೇರ್ಪಡೆ ಕಾರ್ಯ ಮುಗಿದಿದ್ದು, ಎಲ್ಲಾ ಅರ್ಹ ಮತದಾರರು ಕಡ್ಡಾಯವಾಗಿ, ನೈತಿಕ ಮತದಾನ ಮಾಡಬೇಕೆಂಬ ಜಾಗೃತಿ ಮೂಡಿಸುವ ಕಾರ್ಯ ಅವಿರತವಾಗಿ ನಡೆದಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
2014ರ ಲೋಕಸಭೆ ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳ ಪಟ್ಟಿ ಮಾಡಿ, ಅಂತಹ ಸ್ಥಳಗಳಲ್ಲಿ ಹೆಚ್ಚಿನ ಪ್ರಚಾರ ನಡೆಸ ಲಾಗುತ್ತಿದೆ.
ಸ್ವೀಪ್ ಸಮಿತಿಯು ಬೂತ್ ಮಟ್ಟದ ಅಧಿಕಾರಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರೊಂದಿಗೆ ಮನೆ ಮನೆ ಗಳಿಗೆ ತೆರಳಿ ಕಡ್ಡಾಯ ಹಾಗೂ ನೈತಿಕ ಮತ ದಾನಕ್ಕೆ ಮನವಿ ಮಾಡುತ್ತಿದೆ. ಕರಪತ್ರಗಳ ಹಂಚುವ ಮೂಲಕ ಎಲ್ಲಾ ಮತದಾರರನ್ನೂ ಪ್ರಜಾಪ್ರಭುತ್ವ ಹಬ್ಬಕ್ಕೆ ಆಹ್ವಾನಿಸಲಾಗುತ್ತಿದೆ.
ಜನಸಂದಣಿ ಇರುವ ಸ್ಥಳಗಳಲ್ಲಿ ನಾನು ಕಡ್ಡಾಯವಾಗಿ, ಯಾವುದೇ ಜಾತಿ, ಮತ, ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡುತ್ತೇನೆ' ಎಂಬ ಪ್ರತಿಜ್ಞಾ ವಿಧಿ ಬೋಧಿ ಸಲಾಗುತ್ತಿದೆ. ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ದಲ್ಲಿ ಮತ ಚಲಾಯಿಸಿದ ಬಳಿಕ ಪಕ್ಕದಲ್ಲಿಡುವ ವಿವಿ ಪ್ಯಾಟ್ನಲ್ಲಿ ಖಾತ್ರಿ ಪಡಿಸಿಕೊಳ್ಳುವ ಬಗ್ಗೆ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಮಾಹಿತಿ ನೀಡಲಾಗುತ್ತಿದೆ.
ಹೆದ್ದಾರಿಗಳು, ಪ್ರಮುಖ ರಸ್ತೆಗಳು, ವೃತ್ತಗಳು ಸೇರಿದಂತೆ ಹೆಚ್ಚು ಜನ ಸಂಚಾರವಿರುವ ಸ್ಥಳಗಳಲ್ಲಿ ಮತದಾನದ ಮಹತ್ವ ಸಾರುವ ಹೋರ್ಡಿಂಗ್ಸ್, ಭಿತ್ತಿಪತ್ರ, ಪೋಸ್ಟರ್ಗಳನ್ನು ಅಳವಡಿಸಲಾಗುತ್ತಿದೆ.
ಮಾಜಿ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್, ಸಾಹಿತಿ ಚಂದ್ರಶೇಖರ ಕಂಬಾರ ಸೇರಿದಂತೆ ಸಾಹಿತ್ಯ, ಕ್ರೀಡೆ, ಸಿನಿಮಾ ಇನ್ನಿತರ ಕ್ಷೇತ್ರಗಳ ಸಾಧಕರ ಭಾವಚಿತ್ರವುಳ್ಳ ಮತದಾನ ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಮಾಲ್ಗಳು, ವಾಣಿಜ್ಯ ಸಂಕೀರ್ಣಗಳ ಬಳಿಯೂ ಪ್ರದರ್ಶಿಸಲಾಗಿದೆ. ಬೆರಳಿಗೆ ಇಂಕು, ಪ್ರಜಾಪ್ರಭುತ್ವಕ್ಕೆ ಲಿಂಕು', ನಿಮ್ಮ ಮತ, ನಿಮ್ಮ ಹಕ್ಕು' ಎಂಬಿತ್ಯಾದಿ ಆಕರ್ಷಕ ಸಾಲುಗಳೂ ಪೋಸ್ಟರ್ಗಳಲ್ಲಿವೆ.












Click it and Unblock the Notifications