ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಚುರುಕು
ಮೈಸೂರು, ಮೇ 13:ಕಳೆದ ವಾರ ಮೈಸೂರಿನ ಹೊರವಲಯದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಖುದ್ದು ಮೈಸೂರು ನಗರ ಪೊಲೀಸ್ ಆಯುಕ್ತರು ವಹಿಸಿಕೊಂಡಿರುವುದರಿಂದ ವೇಗ ಪಡೆದುಕೊಂಡಿದೆ.
ಪೊಲೀಸ್ ಆಯುಕ್ತ ಕೆ. ಟಿ. ಬಾಲಕೃಷ್ಣ ಅವರು ತನಿಖೆ ವೇಳೆ ಯಾವ ಅಂಶಗಳನ್ನು ಪರಿಗಣಿಸಬೇಕು, ಆರೋಪಿಗಳ ಪತ್ತೆ ಬಗ್ಗೆ ಕೈಗೊಳ್ಳಬೇಕಾದ ತನಿಖಾ ವಿಧಾನಗಳ ಕುರಿತಾಗಿ ಕೆಳ ಹಂತದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಡಿಸಿಪಿ ಮುತ್ತುರಾಜ್ , ಎಸಿಪಿ ಜಿ.ಟಿ ನಾಯಕ್ ಹಾಗೂ ಕುವೆಂಪು ನಗರ ಠಾಣೆ ಇನ್ಸ್ಪೆಕ್ಟರ್ ತನಿಖೆ ನಡೆಸುತ್ತಿದ್ದು, ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಮೊಬೈಲ್ ಟವರ್ ಸಿಗ್ನಲ್ ಆಧಾರದ ಮೇಲೆ ಘಟನಾ ಸ್ಥಳದಲ್ಲಿ ದಾಖಲಾಗಿರುವ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಈಗಾಗಲೇ 200ಕ್ಕೂ ಹೆಚ್ಚು ಮಂದಿಯ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಪೊಲೀಸರು ಹಂತ - ಹಂತವಾಗಿ ಅವರುಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಅವರಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿರುವ ಕಾರಣ ಕೆಲವರ ಮೇಲೆ ತೀವ್ರ ನಿಗಾ ಇಡುವ ಕೆಲಸವನ್ನು ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯನ್ನು ಕೌನ್ಸೆಲಿಂಗ್ ಮಾಡಲಾಗಿದೆ. ಘಟನೆಯ ಸಂಪೂರ್ಣ ವಿವರವನ್ನು ಮತ್ತೊಮ್ಮೆ ಪಡೆದುಕೊಂಡಿರುವ ಪೊಲೀಸರು ವ್ಯಕ್ತಿಗಳ ಚಹರೆ ಕುರಿತು ಹಾಗೂ ಅವರು ಬಳಸುತ್ತಿದ್ದ ಭಾಷೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಮೇ.8ರಂದು ರಾತ್ರಿ ನಗರದ ಲಿಂಗಾಂಬುದಿ ಪಾಳ್ಯದ ದೇವಸ್ಥಾನವೊಂದರ ಬಳಿ ಯುವತಿ ಹಾಗೂ ಅಕೆಯ ಪ್ರಿಯಕರನ ಮೇಲೆ ಮೂವರು ಯುವಕರು ದಾಳಿ ನಡೆಸಿದ್ದರು. ಅವರಲ್ಲಿ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂತ್ರಸ್ತೆಯ ಪ್ರಿಯಕರ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications