ಮೈಸೂರು ಕಾಡಂಚಿನ ರೈತರ ನಿದ್ದೆಗೆಡಿಸಿದ ಚಿರತೆ ಹಾವಳಿ!
ಮೈಸೂರು, ಡಿಸೆಂಬರ್ 7: ಜಿಲ್ಲೆಯ ಕಾಡಂಚಿನ ಗ್ರಾಮದ ರೈತರು ಮೊದಲೇ ಕಾಡಾನೆಗಳಿಂದ ಬೇಸತ್ತು ಹೋಗಿದ್ದಾರೆ. ಆದರೆ, ಇದೀಗ ಚಿರತೆ ಹಾವಳಿಯಿಂದಾಗಿ ಜನರ ನಿದ್ದೆಗೆಡಿಸಿದೆ.
ಜಿಲ್ಲೆಯಲ್ಲಿ ಒಂದಾದ ಮೇಲೊಂದು ಚಿರತೆಗಳು ಪ್ರತ್ಯಕ್ಷವಾಗಿ ಜನರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಇದೀಗ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮರೂರುಕಾವಲು ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.
ಬಂಡಿಪುರ ಕಾಡಂಚಿನ ಜನರ ನೆಮ್ಮದಿ ಕಸಿದ ಕಾಡುಪ್ರಾಣಿಗಳು
ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಬಂಡೀಪುರ ಉದ್ಯಾನ ಸೇರಿದಂತೆ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಇದೀಗ ಕಾಡಾನೆಗಳಿಗಿಂತ ಚಿರತೆಗಳದ್ದೇ ಹಾವಳಿ ಹೆಚ್ಚಾಗಿದೆ. ನೇರವಾಗಿ ಕೊಟ್ಟಿಗೆಗೆ ನುಗ್ಗಿ ಜಾನುವಾರು, ಕುರಿ, ಮೇಕೆಗಳಲ್ಲದೆ ಸಾಕು ನಾಯಿಗಳ ಮೇಲೆಯೂ ದಾಳಿ ಮಾಡಿ ತಿಂದು ಹಾಕುತ್ತಿವೆ.
ಕಳೆದ ಆರು ತಿಂಗಳಿಂದ ಇಲ್ಲಿ ವಾಸ್ತವ್ಯ ಹೂಡಿದ್ದ ಚಿರತೆ ಆಗಾಗ್ಗೆ ಸಾಕು ನಾಯಿ ಕೋಳಿ ಹಾಗೂ ಹಸುಗಳ ಕರುಗಳನ್ನು ಹೊತ್ತೊಯ್ದು ತಿಂದು ಹಾಕುತ್ತಾ ಬಂದಿತ್ತು. ಅದನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ, ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಈ ವ್ಯಾಪ್ತಿಯ ಜನ ಆತಂಕಕ್ಕೀಡಾಗುವಂತೆ ಮಾಡಿದೆ.
ಗ್ರಾಮದ ಮೂಡ್ಲೇಗೌಡರ ತೋಟದ ಮನೆಗೆ ನುಗ್ಗಿದ ಚಿರತೆ ಅವರ ಕೊಟ್ಟಿಗೆಯಲ್ಲಿದ್ದ 5 ನಾಟಿ ಕೋಳಿಗಳನ್ನು ತಿಂದು ಹಾಕಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇದೇ ಕೊಟ್ಟಿಗೆಯಲ್ಲಿದ್ದ ಕುರಿಗಳನ್ನು ಕೊಂದು ತಿಂದು ಹಾಕಿ ಹೋಗಿತ್ತು.
ಈಗ ಗ್ರಾಮದಲ್ಲಿ ಅಲ್ಲಲ್ಲಿ ಚಿರತೆಯ ಹೆಜ್ಜೆಗಳು ಕಂಡು ಬಂದಿದ್ದು, ಗ್ರಾಮದ ಸುತ್ತಲೇ ಚಿರತೆ ಓಡಾಡುತ್ತಿರುವುದು ಖಚಿತವಾಗಿದೆ. ಆದ್ದರಿಂದ ಮಕ್ಕಳು ಶಾಲೆಗೆ ತೆರಳಲು,
ರೈತರು ಜಮೀನಿಗೆ ಹೋಗಲು, ಕೂಲಿ ಕಾರ್ಮಿಕರು ಕೆಲಸ ಮಾಡಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಚಿರತೆಯನ್ನು ಸೆರೆಹಿಡಿಯುವ ತನಕ ಇಲ್ಲಿನವರಿಗೆ ನೆಮ್ಮದಿ ಇಲ್ಲದಂತಾಗಿದೆ.