ಅಸಮರ್ಪಕ ಮಾಹಿತಿ:ಪ್ರತಾಪ್ ಸಿಂಹ, ವಿಜಯ್ ಶಂಕರ್ ಸೇರಿದಂತೆ 6 ಮಂದಿಗೆ ನೋಟಿಸ್ ಜಾರಿ
ಮೈಸೂರು, ಏಪ್ರಿಲ್ 4:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹಲವು ಅಭ್ಯರ್ಥಿಗಳು ಇದುವರೆಗೆ ನಿರ್ವಹಿಸಿರುವ ವೆಚ್ಚದ ಮಾಹಿತಿಗಳು ಸಮರ್ಪಕವಾಗಿ ಇಲ್ಲದಿರುವ ಹಿನ್ನೆಲೆಯಲ್ಲಿ 48ಗಂಟೆಯೊಳಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಶಂಕರ್ ನೋಟಿಸ್ ಜಾರಿಗೊಳಿಸಿದ್ದಾರೆ.
ಸಿ.ಎಚ್ ವಿಜಯಶಂಕರ್, ಪ್ರತಾಪ್ ಸಿಂಹ, ಎಸ್ಯುಸಿಐನ ಪಿ.ಎಸ್. ಸಂಧ್ಯಾ, ಕೆಪಿಪಿಯ ಬಿ.ಕೆ. ಬಿದ್ದಪ್ಪ, ಪಕ್ಷೇತರರಾದ ಆನಂದಕುಮಾರ್, ಬಿ.ಡಿ. ನಿಂಗಪ್ಪ ಸಹ ತಾವು ಮಾಡಿರುವ ವೆಚ್ಚದ ಬಗ್ಗೆ ನೀಡಿರುವ ಮಾಹಿತಿಗಳು ವೆಚ್ಚ ವೀಕ್ಷಕರು ನೀಡಿರುವ ಮಾಹಿತಿಗೆ ತಾಳೆಯಾಗದಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ 48 ಗಂಟೆಯೊಳಗೆ ಸರಿದೂಗಿಸಿ ವೆಚ್ಚದ ಮಾಹಿತಿಗಳನ್ನು ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.

ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದು, ಪರಿವೀಕ್ಷಣೆಗೆ 16 ಜನರಿದ್ದಾರೆ. ಲೋಕಸಭಾ ಚುನಾವಣೆ ಸಂಬಂಧ ಮಾರ್ಚ್ 19 ರಿಂದ ಏಪ್ರಿಲ್ 1ರ ವರೆಗಿನ ಅವಧಿಯಲ್ಲಿ ಅಭ್ಯರ್ಥಿಗಳು ಮಾಡಿದ ಖರ್ಚು ವೆಚ್ಚಗಳ ಲೆಕ್ಕ ಪರಿಶೀಲನೆ ಮಾಡಲಾಯಿತು. ಇದೇ ವೇಳೆ ತಾಳೆಯಾಗದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.












Click it and Unblock the Notifications