ಮೈಸೂರು: ಉತ್ತಮ ಸುದ್ದಿಗಳ ನಡುವೆ ಒಂದಿಷ್ಟು ಕ್ರೈಂ ಸುದ್ದಿಗಳು
ಉತ್ತಮ ಸುದ್ದಿಗಳನ್ನು ಮಾತ್ರ ತಿಳಿಕೊಂಡರೇ ಹೇಗೆ? ಮೈಸೂರಿನಲ್ಲಿ ಬುಧವಾರ ನಡೆದ ಒಂದಿಷ್ಟು ಅಪರಾಧ ಸುದ್ದಿಗಳ ಬಗ್ಗೆ ತಿಳಿಯಿರಿ.
ಮೈಸೂರು, ಫೆಬ್ರವರಿ 22 : ಶುಭ ಕಾರ್ಯಗಳಲ್ಲಿ ಬೆಕ್ಕು ಅಡ್ಡ ಬಂತು ಎನ್ನುವಂತೆ, ಒಳ್ಳೆ ಸುದ್ದಿಗಳ ಮಧ್ಯೆ ಈ ಕ್ರೈಂ ಸುದ್ದಿಗಳ ಬಗ್ಗೆ ಒಂದಿಷ್ಟು ತಿಳಿಯಿರಿ.
ಬುಧವಾರ ಮೈಸೂರು ಜಿಲ್ಲೆಯಲ್ಲಿ ನಡೆದ ಒಟ್ಟಾರೆ ಅಪರಾಧ ಸುದ್ದಿ ರೌಂಡ್ ಅಪ್ ನಿಮ್ಮ ಮುಂದೆ. ಕೊಲೆ,ಸುಲಿಗೆ,ವಂಚನೆ, ಅಪಘಾತ, ಸೇರಿದಂತೆ ಇತರೆ ಕ್ರೈಂ ಸುದ್ದಿಗಳು ಇಲ್ಲಿವೆ.

ವೇಷಧಾರಿ ಬಂಧನ: ಪೊಲೀಸ್ ಸೋಗಿನಲ್ಲಿ ಬಂದು ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮೈಸೂರಿನ ಕೆ.ಆರ್. ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧೀತನನ್ನು ದೇವಲಾಪುರದ ಸುಪ್ರೀತ್ ಕುಮಾರ್ ಅಲಿಯಾಸ್ ಶಿವಕುಮಾರ್ ಅಲಿಯಾಸ್ ಪ್ರೀತಂ ಎಂದು ಗುರುತಿಸಲಾಗಿದೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ತಾನು ಮುಖ್ಯ ಪೇದೆ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ.
ಇನ್ಸ್ ಪೆಕ್ಟರ್ ಜತೆ ಆರೋಪಿಯ ಅಸಭ್ಯ ವರ್ತನೆ: ಮೈಸೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾದೇಶ್ ಮತ್ತವನ ಸಹಚರರನ್ನು ಬುಧವಾರ ಮೈಸೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಈ ಸಂದರ್ಭ ಇನ್ಸಪೆಕ್ಟರ್ ಸಿದ್ದರಾಜುರನ್ನು ಮಾದೇಶ್ ಬೆಂಬಲಿಗರು ಅವಾಚ್ಯ ಸಂಬಂಧಗಳಿಂದ ನಿಂದಿಸಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ.
ಪತಿಯಿಂದ ಪತ್ನಿ ಕೊಲೆ: ತನ್ನ ಪತ್ನಿ ಜಾತ್ರೆಯಲ್ಲಿ ಬೇರೆ ಒಬ್ಬ ಪುರುಷನನ್ನು ನೋಡಿದ್ದಾಳೆ ಎಂದು ಪತ್ನಿಯ ಮೇಲೆ ಅನುಮಾನಗೊಂಡು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಕೊಲೆಯಾದಾಕೆಯನ್ನು ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದ ಮಂಗಳಮ್ಮ (28) ಎಂದು ಗುರುತಿಸಲಾಗಿದೆ.
ಈಕೆಯ ಪತಿ ಬಸವಶೆಟ್ಟಿ ಪತ್ನಿಯ ಶೀಲಾ ಶಂಕಿಸಿ ಆಕೆಯನ್ನು ಕೊಲೆಗೈದಿದ್ದಾನೆ. ಈ ಬಗ್ಗೆ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ
8 ವರ್ಷ ಹಿಂದೆ ಕೊಲೆ ಮಾಡಿದ್ದ ಆರೋಪಿ ಬಂಧನ: ಎಂಟು ವರ್ಷಗಳ ಹಿಂದೆ ಪತ್ನಿ ಹಾಗೂ ನಾದಿನಿಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಜೀಜ್ ಸೇಠ್ ನಗರದ ಬೀಡಿಕಾಲೋನಿ ನಿವಾಸಿ ಇಸಾಕ್ ಪಾಷಾ ಎಂದು ಗುರುತಿಸಲಾಗಿದೆ.
ಈತ 2009ರಲ್ಲಿ ಪತ್ನಿ ಸುರಯ್ಯಭಾನು ಹಾಗೂ ನಾದಿನಿ ಸಿದ್ದಕಿಭಾನು ಎಂಬವರನ್ನು ಕೊಲೆಗೈದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಿನ್ನ ಲಪಟಾಯಿಸಲು ಯತ್ನಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ: ಮನೆಯಲ್ಲಿ ಚಿನ್ನವನ್ನಿಟ್ಟು ಪೂಜಿಸಿದರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಿಸಿ ಚಿನ್ನ ಲಪಟಾಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿದ ಗ್ರಾಮಸ್ಥರು ಅವನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮೈಸೂರಿನ ಟಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.
ನಾಲ್ವರು ಯುವಕರ ತಂಡವೊಂದು ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬಿಳಿಗೆಹುಂಡಿ ಗ್ರಾಮದಲ್ಲಿನ ಮನೆಗಳಿಗೆ ತೆರಳಿ ಡಬ್ಬಿಯಲ್ಲಿ ಚಿನ್ನವನ್ನು ಇಟ್ಟು ಪೂಜಿಸಿದರೆ ಚಿನ್ನ ದ್ವಿಗುಣಗೊಳ್ಳುತ್ತದೆ ಎಂದು ಮುಗ್ಧರನ್ನು ನಂಬಿಸಿ ಆಭರಣಗಳನ್ನು ಲಪಟಾಯಿಸಲು ಯತ್ನಿಸಿದ್ದರು.
ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಅವರನ್ನು ಹಿಡಿಯಲು ಯತ್ನಿಸಿದಾಗ ಮೂವರು ಪರಾರಿಯಾಗಿದ್ದು, ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಸಿಕ್ಕಿಹಾಕಿಕೊಂಡವನನ್ನು ಕಂಬಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಟಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಲಿಸುತ್ತಿದ್ದ ಬಸ್ ಚಕ್ರಕ್ಕೆ ಸಿಲುಕಿ ಯುವಕ ಸಾವು: ಚಲಿಸುತ್ತಿದ ಬಸ್ಸಿನ ಮುಂಬದಿಯ ಚಕ್ರಕ್ಕೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಕೆ.ಆರ್.ನಗರದ ಬಸ್ ಸ್ಟ್ಯಾಂಡ್ ಬಳಿಯ ಚಂದ್ರಮೌಳೇಶ್ವರ ರಸ್ತೆಯಲ್ಲಿ ನಡೆದಿದೆ.
ಮೃತನನ್ನು ಜೋಡಿಗೌಡ ಕೊಪ್ಪಲಿನ ಸಂತೊಷ್(30) ಎಂದು ಗುರುತಿಸಲಾಗಿದೆ. ಈತ ಬಸ್ ನ ಮುಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕೆ.ಆರ್.ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications