ಈ ಬಾರಿ ಮಾವುತರಿಗೆ ಮಾತ್ರವಲ್ಲ, ಆನೆಗಳಿಂದ ತೊಂದರೆಯಾದರೂ ವಿಮೆ
ಮೈಸೂರು, ಆಗಸ್ಟ್ 31: ಈ ಬಾರಿ ಮೈಸೂರು ದಸರೆಗೆ ಬರುವ ಮಾವುತ, ಕಾವಾಡಿಗರಿಗೆ ವಿಮೆ ಮಾಡಿಸುವ ಜೊತೆಗೆ, ಆನೆಗಳಿಂದ ಜನಗಳಿಗೆ, ಆಸ್ತಿಗೆ ಆಗಬಹುದಾದ ಹಾನಿಗೂ ಮೈಸೂರು ಜಿಲ್ಲಾಡಳಿತ ವಿಮೆ ಮಾಡಿಸಲಿದೆ.
ಈ ಕುರಿತಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ ಶಂಕರ್ ಅವರು ದಿ ನ್ಯೂ ಇಂಡಿಯನ್ ಅಶುರನ್ಸ್ ಕಂಪನಿಯ ವಿಮಾ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು ಕಂಪನಿಯ ಡಿವಿಜನ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿದ್ದಾರೆ.
ಗಜಪಯಣಕ್ಕೆ ಚಾಲನೆ, ಸಂಪ್ರದಾಯದ ಬಗ್ಗೆ ಎಚ್ ವಿಶ್ವನಾಥ್ ಹೇಳಿದ್ದು ಕೇಳಿ
12 ಆನೆಗಳಿಗೆ 32 ಲಕ್ಷ ರೂ ವಿಮೆ ಮಾಡಿಸುತ್ತಿದ್ದು, 40 ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗಿದೆ. ಮಾವುತರು, ಕಾವಾಡಿಗರು ಸೇರಿ ಒಟ್ಟು 24 ಮಂದಿಯಿದ್ದು ತಲಾ ಒಂದು ಲಕ್ಷ ವಿಮೆ ಮೊತ್ತವಿದೆ. ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆ ಮತ್ತು ಆಸ್ತಿ ಪಾಸ್ತಿ ನಷ್ಟವಾದಲ್ಲಿ 25 ಲಕ್ಷ ರೂ ವಿಮೆ ಮಾಡಿಸಲಾಗಿದೆ. ಈ ವಿಮಾ ಅವಧಿ ಸೆಪ್ಟೆಂಬರ್ 2ರಿಂದ ಅಕ್ಟೋಬರ್ 31ರವರೆಗೆ ಚಾಲ್ತಿಯಲ್ಲಿರಲಿದೆ.
ಆಕಸ್ಮಿಕ ಸಂದರ್ಭದಲ್ಲಿ ಮೂರು ದಿನಗಳೊಳಗೆ ವಿಮಾ ಮೊತ್ತವನ್ನು ಕ್ಲೈಮ್ ಮಾಡಬಹುದಾಗಿದೆ. ವನ್ಯಜೀವಿ ಉಪ ಸಂರಕ್ಷಣಾ ಅಧಿಕಾರಿಗಳ ಹೆಸರಿನಲ್ಲಿಯೇ ಪಾಲಿಸಿ ಮಾಡಿಸಲು ಸೂಚಿಸಲಾಗಿದೆ.
ಇನ್ನು ಜಂಬೂಸವಾರಿ ಆನೆಗಳಿಗೆ ವಿಶೇಷ ಆರೈಕೆ
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು, ಬಳ್ಳೆ ಕೊಡಗಿನ ದುಬಾರೆ ಕೆ. ಗುಡಿ ಶಿಬಿರಗಳಲ್ಲಿ ವಿಶೇಷ ಆರೈಕೆಯೊಂದಿಗೆ ಪೋಷಿಸಲಾಗುತ್ತಿದೆ.
ದಸರೆಗೆ ಈ ಬಾರಿಯೂ ಹಳೆಯ ಲೋಗೋ ಮುಂದುವರಿಕೆ
ಸತತ ಐದನೇ ಬಾರಿಗೆ ಅಂಬಾರಿ ಹೊರಲು ಸಜ್ಜಾದ ಅರ್ಜುನನಿಗೆ ಬಳ್ಳೆ ಶಿಬಿರದಲ್ಲೂ, ಅಭಿಮನ್ಯು, 13 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ, ದ್ರೋಣ, ಕುಮ್ಕಿ ಆನೆ ವರಲಕ್ಷ್ಮೀ, ಗೋಪಾಲಸ್ವಾಮಿ ಪಾಲ್ಗೊಳ್ಳುತ್ತಿರುವ ಆನೆಗಳು, ಮತ್ತಿಗೋಡು ಶಿಬಿರದಲ್ಲೂ ಕಾವೇರಿ, ವಿಕ್ರಮ, ಗೋಪಿ, ಧನಂಜನಯ, ಪ್ರಶಾಂತ ಕೊಡಗಿನ ದುಬಾರೆ ಕ್ಯಾಂಪಿನಲ್ಲಿ ಹಾಗೂ ಕೆ. ಗುಡಿ ಶಿಬಿರದಲ್ಲಿ ಗಜೇಂದ್ರನಿಗೆ ನಿತ್ಯವೂ ವಿಶೇಷ ಮಜ್ಜನದ ಸೇವೆಯೊಂದಿಗೆ ನೋಡಿಕೊಳ್ಳಲಾಗುತ್ತಿದೆ.