ಮೈಸೂರು ಜಿಲ್ಲಾಧಿಕಾರಿ ಸಿ ಶಿಖಾ ವರ್ಗಾವಣೆ
ಬೆಂಗಳೂರು, ಆಗಸ್ಟ್ 10: ಮೈಸೂರು ಜಿಲ್ಲಾಧಿಕಾರಿ ಸಿ ಶಿಖಾ ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಬುಧವಾರ ಸಂಜೆ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಸಿ ಶಿಖಾ ಅವರಿಗೆ ಧಮಕಿ ಹಾಕಿ, ಕರ್ತ್ಯವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕೆ.ಮರಿಗೌಡ ಜೈಲುಪಾಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. [ಕೆ.ಮರೀಗೌಡ ಜಾಮೀನು ಅರ್ಜಿ ವಜಾ, ಜೈಲೇ ಗತಿ]
ಮರಿಗೌಡ ವಿರುದ್ಧ ಜಿಲ್ಲಾಧಿಕಾರಿ ಶಿಖಾ ಅವರು ನಜರ್ ಬಾದ್ ಠಾಣೆಗೆ ದೂರು ನೀಡಿದ್ದರು. ಜಾಮೀನು ಸಿಗದೆ ತಲೆಮರೆಸಿಕೊಂಡಿದ್ದ ಮರಿಗೌಡ ಆಗಸ್ಟ್ 3ರಂದು ನಜರ್ ಬಾದ್ ಪೊಲೀಸರ ಮುಂದೆ ಶರಣಾಗಿದ್ದರು. ಜಾಮೀನು ಸಿಗದ ಹಿನ್ನೆಲೆಯಲ್ಲಿ ಮರಿಗೌಡ ಅವರು ಜೈಲು ಪಾಲಾಗಿದ್ದಾರೆ.

2004ರ ಬ್ಯಾಚಿನ ಐಎಎಸ್ ಅಧಿಕಾರಿ ಸಿ ಶಿಖಾ ಅವರು ಮಾರ್ಚ್ 27, 2013ರಂದು ಮೈಸೂರಿನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ತಿರುಚನಾಪಳ್ಳಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀಮತಿ ಶಿಖಾ ಅವರು ಇ ಮುಂಚೆ ಗದಗ ಜಿಲ್ಲಾಧಿಕಾರಿ, ಧಾರವಾಡದ ಜಿಲ್ಲಾಪಂಚಾಯಿತಿ ಸಿಇಒ, ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದರು.
ಮಂಡ್ಯದ ಜಿಲ್ಲಾಧಿಕಾರಿ ಐಎಎಸ್ ಅಧಿಕಾರಿ ಎಂಎವಿಜಯಪುರದ ಜಿಲ್ಲಾಧಿಕಾರಿಯಾಗಿದ್ದ ಡಿ.ರಣದೀಪ್ ಅವರು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಒಟ್ಟಾರೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಅಜಯ್ ನಾಗಭೂಷಣ್ ಅವರ ಪತ್ನಿ ಸಿ ಶಿಖಾ ಅವರು ಈಗ ಸಮಾಜ ಕಲ್ಯಾಣ ಇಲಾಖೆ ಸುಧಾರಣೆಗೆ ಸಜ್ಜಾಗಬೇಕಿದೆ.
* ಕೆ.ಶಿಖಾ: ಆಯುಕ್ತರು ಸಮಾಜ ಕಲ್ಯಾಣ ಇಲಾಖೆ
* ಎಂಎನ್ ಅಜೇಯ ನಾಗಭೂಷಣ: ಆಯುಕ್ತರು, ಆಹಾರ ಇಲಾಖೆ
* ಡಿ.ರಣದೀಪ್: ಮೈಸೂರು ಜಿಲ್ಲಾಧಿಕಾರಿ
* ಎಂ.ವಿ ಸಾವಿತ್ರಿ : ವ್ಯವಸ್ಥಾಪಕ ನಿದೇರ್ಶಕರು ಕೆಎಸ್ಎಸ್ಐಡಿಸಿ
* ಮನೋಜ ಜೈನ್: ಎಂಡಿ, ಆಹಾರ ನಿಗಮ
* ಜೀಯಾವುಲ್ಲಾ : ಮಂಡ್ಯ ಜಿಲ್ಲಾಧಿಕಾರಿ
* ಕೆಬಿ ಶಿವಕುಮಾರ : ವಿಜಯಪುರ ಜಿಲ್ಲಾಧಿಕಾರಿ
* ಖುಷ್ಬೂ ಗೋಯಲ್ ಚೌಧರಿ : ಯಾದಗಿರಿ ಜಿಲ್ಲಾಧಿಕಾರಿ
* ರಮಣದೀಪ್ ಚೌಧರಿ : ಹೆಚ್ಚುವರಿ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿ
* ಎಚ್.ಆರ್. ಮಹದೇವ್ : ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
* ಎಂಜಿ ಹಿರೇಮಠ್- ವ್ಯವಸ್ಥಾಪಕ ನಿರ್ದೇಶಕರು. ಹು-ಧಾ, ಬಿಆರ್ ಟಿಎಸ್
(ಒನ್ಇಂಡಿಯಾ ಸುದ್ದಿ)












Click it and Unblock the Notifications