ನಾಳೆ ವಿಧಾನಸೌಧದಲ್ಲಿ ದಸರಾ ಉನ್ನತ ಮಟ್ಟದ ಸಭೆ
ಮೈಸೂರು, ಆಗಸ್ಟ್ 13: ಆಗಸ್ಟ್ 9ಕ್ಕೆ ನಡೆಯಬೇಕಿದ್ದ ದಸರಾ ಉನ್ನತಾಧಿಕಾರ ಸಮಿತಿ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 14ರ ಮಧ್ಯಾಹ್ನ 12.30ಕ್ಕೆ ವಿಧಾನಸೌಧದಲ್ಲಿ ಸಮಿತಿಯ ಸಭೆಯನ್ನು ನಿಗದಿಪಡಿಸಲಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ದಸರಾ ಉನ್ನತಾಧಿಕಾರ ಸಮಿತಿ ಸಭೆ ನಡೆಯುತ್ತಿತ್ತು. ಆದರೆ ರಾಜಕೀಯ ಕೆಸರೆರಚಾಟದ ಹಿನ್ನೆಲೆ ಒಂದು ತಿಂಗಳು ಸಭೆ ನಡೆಯಲಿಲ್ಲ. ಯಡಿಯೂರಪ್ಪ ಅವರು ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ಆಗಸ್ಟ್ 9ರಂದು ಸದನ ನಿಗದಿಯಾಗಿತ್ತು. ಆದರೆ ರಾಜ್ಯದ ಹಲವೆಡೆ ಪ್ರವಾಹ ಸೃಷ್ಟಿಯಾದ ಹಿನ್ನೆಲೆ ಸಭೆಯನ್ನು ಮುಂದೂಡಲಾಗಿತ್ತು.

ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನವನ್ನು ಅನುಸರಿಸಿ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಸಭೆ ನಡೆಸಬೇಕಾಗುತ್ತದೆ. ದಸರಾ ಗಜಪಡೆಯು ನಾಡ ಹಬ್ಬ ಆರಂಭವಾಗುವ ಒಂದು ತಿಂಗಳ ಮುಂಚೆಯೇ ನಗರಕ್ಕೆ ಆಗಮಿಸಿ ತಾಲೀಮು ನಡೆಸಬೇಕು. ಇದಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಜಂಬೂಸವಾರಿಯಲ್ಲಿ ಪಾಲ್ಗೊಳ್ಳಬೇಕಾದ ಕಲಾತಂಡಗಳ ಆಯ್ಕೆ ಇತ್ಯಾದಿ ಪ್ರಮುಖ ಕಾರ್ಯಗಳು ಸಭೆ ವಿಳಂಬದಿಂದ ನನೆಗುದಿಗೆ ಬಿದ್ದಿವೆ.












Click it and Unblock the Notifications