ಮೈನವಿರೇಳಿಸುವ ಪಂಜಿನ ಕವಾಯತಿಗೆ ಸಾಕ್ಷಿಯಾದ ಮೈಸೂರು

ಮೈಸೂರು, ಅಕ್ಟೋಬರ್ 1: ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪ ಸಮಿತಿ ವತಿಯಿಂದ ಬನ್ನಿ ಮಂಟಪದ ಮೈದಾನದಲ್ಲಿ ಶನಿವಾರ ಸಂಜೆ ಆಕರ್ಷಕ ಪಂಜಿನ ಕವಾಯತು ನಡೆಯಿತು. ಪಂಜಿನ ಕವಾಯತಿನ ಜತೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರಲ್ಲಿ ದೇಶಾಭಿಮಾನ ಮೂಡಿಸುವುದರ ಜತೆಗೆ ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದೂಟವನ್ನೂ ಉಣಬಡಿಸಿತು.

ಆಕರ್ಷಕ ಪಂಜಿನ ಕವಾಯತು ದಸರಾ ಮಹೋತ್ಸವದ ಕೊನೆಯ ಕಾರ್ಯಕ್ರಮವಾಗಿದ್ದು, ಇದನ್ನು ವೀಕ್ಷಿಸಲು ಅಪಾರ ಪ್ರೇಕ್ಷಕರು ನೆರೆದಿದ್ದರು.

In Pics:ಮೈಸೂರು ದಸರಾದ ಅಂತಿಮ ದಿನದ ಚಿತ್ರಗಳನ್ನು ನೋಡಿ..!

ಪಂಜಿನ ಕವಾಯತು ಆರಂಭಕ್ಕೂ ಮುನ್ನ ಮೌಂಟೆಡ್ ಪೊಲೀಸ್ ಕಂಪನಿಯ ಪ್ರಧಾನ ದಳಪತಿ ಶಿವರಾಜ್ ನೇತೃತ್ವದ ಅಶ್ವಪಡೆಯು 21 ಕುಶಾಲತೋಪುಗಳ ಅತ್ಯುನ್ನತ ರಾಷ್ಟ್ರ ಗೌರವವನ್ನು ರಾಜ್ಯಪಾಲ ವಜೂಭಾಯಿ ರುಢಾಬಾಯಿ ವಾಲ‌ ಅವರಿಗೆ ಸಲ್ಲಿಸಿತು.

ನಂತರ ಪಂಜಿನ ಕವಾಯತು ಆರಂಭವಾಗುತ್ತಿದ್ದಂತೆ ತ್ರಿವರ್ಣ ಧ್ವಜವನ್ನು ಹಿಡಿದ ಯೋಧರು ಮೈದಾನದಲ್ಲಿ ಒಂದು ಸುತ್ತು ತಿರುಗಿ ನೆರೆದಿದ್ದ ಪ್ರೇಕ್ಷಕರಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿದರು.

ಹಲವು ಶತಮಾನಗಳ ಇತಿಹಾಸ

ಹಲವು ಶತಮಾನಗಳ ಇತಿಹಾಸ

ಪಂಜಿನ ಕವಾಯತು ಅಥವಾ ದೀವಟಿಗೆ‌ ಸಲಾಂ ಗೆ ಶತಮಾನಗಳ ಇತಿಹಾಸವಿದೆ. ಈ ದೇವಟಿಗೆ ಸಲಾಂ 1610 ರಿಂದಲೂ ನಡೆದು ಬಂದಿದ್ದು, ವಿಜಯದಶಮಿ ಮೆರವಣಿಗೆ ನಂತರದಲ್ಲಿ ನಡೆಯುತ್ತದೆ.

ಎದೆ ಝಲ್ಲೆನಿಸಿದ ಕ್ಷಣಗಳು

ಎದೆ ಝಲ್ಲೆನಿಸಿದ ಕ್ಷಣಗಳು

ಕರ್ನಾಟಕ‌‌ ಪೊಲೀಸ್‌ ಪಡೆಯ ಶಿಸ್ತು ಬದ್ದ ಪಥ ಸಂಚಲನ ನೋಡುಗರನ್ನು ಚಕಿತಗೊಳಿಸಿತು. ಟಾರ್ನೋಡೋ ಮಿಲಿಟರಿ ಪಡೆ ನಡೆಸಿಕೊಟ್ಟ ಹೇಡನ್ ಕಾಸ್, ಕಾರ್ನರ್ ಕ್ರಾಸ್, ಸುದರ್ಶನ ಚಕ್ರ, ಪೇಪರ್ ಓದುತ್ತ ಬೈಕ್ ಚಾಲನೆ, ಬೈಕ್‍ನಲ್ಲಿ ಯೋಗ ಭಂಗಿ, ಬೆಂಕಿ ಹೊತ್ತಿಸಲಾಗಿದ್ದ ಬೃಹತ್ ಚಕ್ರದೊಳಗೆ ಮೋಟಾರ್ ಬೈಕ್ ನುಗ್ಗಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರ ಎದೆ ಝಲ್ಲೆನ್ನುವಂತೆ ಮಾಡಿದರು.

ಒಂದೇ ಬೈಕ್ ನಲ್ಲಿ ಹಲವರ ಪ್ರಯಾಣ

ಒಂದೇ ಬೈಕ್ ನಲ್ಲಿ ಹಲವರ ಪ್ರಯಾಣ

ನಂತರ ವಿವಿಧ ಕೋನಗಳಲ್ಲಿ ಕೌಶಲ ಮತ್ತು ನೈಪುಣ್ಯ ಪ್ರದರ್ಶನ ನೀಡಿದ ಟಾರ್ನೆಡೊ ಪಡೆಯ ಮುಖ್ಯಸ್ಥ ರಿಷಬ್ ಹಾಗೂ ತಂಡದವರು ಒಂದೇ ಬೈಕ್‍ನಲ್ಲಿ ಹಲಾವರು ಜನರು ಏರಿ ಸಾಹಸ ಮೆರೆದರು.

ಟಾರ್ನೆಡೊ ತಂಡದಲ್ಲಿ ಐವರು ಕರ್ನಾಟಕದವರೇ ಇದ್ದುದು ಸಭಿಕರಲ್ಲಿ ಹೆಮ್ಮೆಗೆ ಕಾರಣವಾಯಿತು.

ಮನಸೆಳೆದ ಗಣಪತಿ ಮೋರಿಯಾ

ಮನಸೆಳೆದ ಗಣಪತಿ ಮೋರಿಯಾ

ವಿದುಷಿ ಶ್ರೀಧರ್ ಜೈನ್ ತಂಡದವರು ನಡೆಸಿಕೊಟ್ಟ ನೃತ್ಯ ರಿದ್ದಿಸಿದ್ದಿ' ಗಣಪತಿ ಮೋರಿಯಾ ನೃತ್ಯ ಪ್ರದರ್ಶನ ನೋಡುಗರನ್ನು ಮುದಗೊಳಿಸಿತು. ಇದಲ್ಲದೆ ಮೈಸೂರು ದಸರಾ ಎಷ್ಟೊಂದು ಸುಂದರ, ಕನ್ನಡದ ಮಾತು ಚೆನ್ನ, ಜಯ ಹೇ ಹಾಡಿನ ಮೂಲಕ ನಾಡಿಗೆ ನಮನ ಸಲ್ಲಿಸಿದರು.

ಚಪ್ಪಾಳೆ ಗಿಟ್ಟಿಸಿದ ಪ್ರದರ್ಶನ

ಚಪ್ಪಾಳೆ ಗಿಟ್ಟಿಸಿದ ಪ್ರದರ್ಶನ

ಅಶ್ವಾರೋಹಿ ಪಡೆಯ ಆರ್.ಪಿ.ಸುದರ್ಶನ್ ನೇತೃತ್ವದಲ್ಲಿ ಆನಂದ್ ಸಿಂಗ್, ರುದ್ರಪ್ಪ, ಚಂದ್ರು, ಮಲ್ಲಿಕಾರ್ಜುನ, ಮಹೇಶ್, ಸಂದೇಶ ಮಿರ್ಲೆ ಅವರು ವೇಗವಾಗಿ ಓಡುತ್ತಿದ್ದ ಕುದುರೆ ಮೇಲೆ ಕುಳಿತಿರುವಂತೆಯೇ ಈಟಿಯಿಂದ ಬೆಂಕಿ ಚೆಂಡನ್ನು ಒಂದೇ ಏಟಿಗೆ ಎತ್ತಿಕೊಂಡು ಸಾಹಸ ಮೆರೆದ ದೃಶ್ಯ ನೋಡುಗರ ಚಪ್ಪಾಳೆ ಗಿಟ್ಟಿಸಿತು.

ಪರಿಸರ ಕಾಳಜಿ ತೋರಿದ ಪ್ರದರ್ಶನ

ಪರಿಸರ ಕಾಳಜಿ ತೋರಿದ ಪ್ರದರ್ಶನ

ಹಿರಿಯ ರಂಗಕರ್ಮಿ ಎಚ್.ಜನಾರ್ಧನ್ ಮತ್ತು ತಂಡ ನಡೆಸಿಕೊಟ್ಟ ಹಸಿರು-ನೀರು' ಗೀತ ರೂಪಕವು ಕಾಡನ್ನು ಉಳಿಸಿ- ಮಳೆಯನ್ನು ತರಿಸೋಣ ಎಂಬ ಪರಿಸರ ಕಾಳಜಿ ತೋರಿತು.

307 ಪೊಲೀಸರಿಂದ ವಿವಿಧ ಕಸರತ್ತು

307 ಪೊಲೀಸರಿಂದ ವಿವಿಧ ಕಸರತ್ತು

ಕರ್ನಾಟಕ ಪೊಲೀಸ್ ಪಡೆಯ ತರಬೇತಿ ಪೊಲೀಸರು ಮೈದಾನದಲ್ಲಿ ಹೆಜ್ಜೆ ಹಾಕುತ್ತ ಪಂಜನ್ನು ಹಿಡಿದು, ಪ್ರೇಕ್ಷಕರ ಮುಖದಲ್ಲಿ ಬೆಳಕನ್ನು ಮೂಡಿಸಿದರು. ವಿವಿಧ ಕಸರತ್ತು ತೋರುತ್ತಾ ಸುಸ್ವಾಗತ, ಕರ್ನಾಟಕ ಪೊಲೀಸ್, ವೆಲ್‍ಕಮ್ ಟು ಪೊಲೀಸ್, ಪಾರ್ಲಿಮೆಂಟ್, ಜೈ ಚಾಮುಂಡಿ, ಹ್ಯಾಪಿ ದಸರಾ, ಸಿ ಯು ಇನ್ 2018, ಥ್ಯಾಂಕ್ ಯು, ಜೈ ಹಿಂದ್ ಎಂಬ ಸಂದೇಶಗಳನ್ನು ಜೋರಾಗಿ ಬೆಳಗುತ್ತಿದ್ದ ಪಂಜಿನಲ್ಲೇ 307 ಪೊಲೀಸರು ರಚಿಸಿದರು. ಇವರ ನಡಿಗೆಗೆ ಪೊಲೀಸ್ ವಾದ್ಯವೃಂದ ಸುಶಾವ್ಯವಾಗಿ ಸಂಗೀತ ನುಡಿಸಿತು.

ಪಂಜಿನ ಕವಾಯತಿಗೆ ಸಾಕ್ಷಿಯಾದ ಗಣ್ಯರು

ಪಂಜಿನ ಕವಾಯತಿಗೆ ಸಾಕ್ಷಿಯಾದ ಗಣ್ಯರು

ಮುಖ್ಯಮಂತ್ರಿ ಸಿದ್ದರಾಮಯ್ಯ, ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್ ನಿಸಾರ್ ಅಹಮದ್, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಅರಣ್ಯ ಸಚಿವ ಬಿ. ರಮಾನಾಥ ರೈ, ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಶಿಕ್ಷಣ ಸಚಿವ ತನ್ವೀರ್ ಸೇಠ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+