ಚಿತ್ರಗಳು; ರಂಗೇರಿದ ನಾಡಹಬ್ಬ ಮೈಸೂರು ದಸರಾ

ಮೈಸೂರು, ಸೆಪ್ಟೆಂಬರ್ 29: ವಿಶ್ವವಿಖ್ಯಾತ ಮೈಸೂರು ದಸರಾಗೆ ಸರ್ವಾಲಂಕೃತ ಬೆಳ್ಳಿ ರಥದಲ್ಲಿ ವಸ್ತ್ರಾಭರಣಗಳಿಂದ ಶೋಭಿಸುತ್ತಿದ್ದ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೀಶ್ವರಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಸಾಹಿತಿ ಎಸ್.ಎಲ್.ಭೈರಪ್ಪ ಅವರು ವಿದ್ಯುಕ್ತ ಚಾಲನೆ ನೀಡಿದ್ದಾರೆ.

ಇದೀಗ ನಾಡಹಬ್ಬದ ಕಳೆ ಇಡೀ ಮೈಸೂರನ್ನು ಆವರಿಸುತ್ತಿದೆ.

 ದಸರೆಗೆ ಬಂದ ಗಣ್ಯರ ದಂಡು

ದಸರೆಗೆ ಬಂದ ಗಣ್ಯರ ದಂಡು

ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ.ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಎಂ. ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ತನ್ವೀರ್ ಸೇಠ್, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಮೈಸೂರು ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ದಸರಾ ಉದ್ಘಾಟಕರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

 ಕಲಾ ತಂಡಗಳೊಂದಿಗೆ ದೊರೆತ ಸ್ವಾಗತ

ಕಲಾ ತಂಡಗಳೊಂದಿಗೆ ದೊರೆತ ಸ್ವಾಗತ

ಕಾರ್ಯಕ್ರಮಕ್ಕೆ ಮುನ್ನ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಜಿಲ್ಲಾಡಳಿತವತಿಯಿಂದ ದಸರಾ ಉದ್ಘಾಟಕರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಪುಷ್ಪಗುಚ್ಛ ನೀಡಿ, ಪೂರ್ಣಕುಂಭ ಸ್ವಾಗತದೊಂದಿಗೆ ಜಾನಪದ ಕಲಾತಂಡ ಹಾಗೂ ಮಂಗಳವಾದ್ಯದೊಂದಿಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಕರೆದೊಯ್ದು ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿಸಲಾಯಿತು.

ಬಳಿಕ ದೇಗುಲದ ಬಳಿ ನಿರ್ಮಾಣವಾಗಿದ್ದ ಬೃಹತ್ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ದಸರಾ ಉದ್ಘಾಟನಾ ಭಾಷಣ ಮಾಡಿದ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಚಾಮುಂಡಿಬೆಟ್ಟ ಪ್ರವಾಸಿ ತಾಣವಾಗಿದೆ. ಆದರೂ ಇದು ದೈವಿ ಕ್ಷೇತ್ರವಾಗಿದ್ದು, ಈ ಸುಂದರ ತಾಣವನ್ನು ಅಭಿವೃದ್ಧಿ ಹೆಸರಿನಲ್ಲಿ ಕಾಂಕ್ರಿಟ್ ಕಾಡನ್ನಾಗಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

"ಸಾಹಿತಿಗಳು ದೇವರಿಲ್ಲ ಎನ್ನುವುದು ತಪ್ಪು"

ವಾಣಿಜ್ಯ ಮಳಿಗೆಗಳ ನಿರ್ಮಾಣ ಕುರಿತಂತೆ ಮಾತನಾಡಿದ ಅವರು, "ಚಾಮುಂಡಿಬೆಟ್ಟಕ್ಕೆ ಜನ ದೇವಿಯ ದರ್ಶನಕ್ಕೆ ಬರುತ್ತಾರೆಯೇ ಹೊರತು ಶಾಪಿಂಗ್ ಮಾಡಲು ಅಲ್ಲ. ಶಾಪಿಂಗ್ ಮಾಡಲು ಮೈಸೂರು ನಗರದಲ್ಲಿ ವ್ಯವಸ್ಥೆಯಿದೆ. ವಾಣಿಜ್ಯ ಮಳಿಗೆಗಳ ನಿರ್ಮಾಣದಿಂದ ಚಾಮುಂಡಿ ಬೆಟ್ಟದ ಪರಿಸರಕ್ಕೆ ಹಾನಿಯಾಗುತ್ತದೆ. ಜನ ಚಾಮುಂಡಿ ಬೆಟ್ಟಕ್ಕೆ ಬರುವುದು ಶಾಪಿಂಗ್ ಮಾಡಲೋ ಮನಃಶಾಂತಿ ಪಡೆಯಲೋ ಎಂದು ಪ್ರಶ್ನಿಸಿದರು.

"ನಾನು ದೇವರನ್ನು ನಂಬಲ್ಲ ಅಂತ ಹೇಳಲ್ಲ. ಮೊದಲು ವಾರಕ್ಕೊಮ್ಮೆ ಮೆಟ್ಟಿಲು ಹತ್ತಿ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದೆ. ಸಾಹಿತಿಗಳು ದೇವರಿಲ್ಲ ಎನ್ನುವುದು ತಪ್ಪು. ದೇವರಿಲ್ಲ ಎಂಬ ಕಲ್ಪನೆ ಬಂದರೆ ಜಾತ್ರೆ, ಉತ್ಸವ ಯಾವುದೂ ನಡೆಯುವುದಿಲ್ಲ. ಗಂಡು ಮತ್ತು ಹೆಣ್ಣು ಎಂಬ ಎರಡು ದೇವರ ಕಲ್ಪನೆಯಿದೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಪ್ರಧಾನ ದೇವತೆ. ವಿಜ್ಞಾನಿಗಳೇ ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿದ್ದಾರೆ" ಎಂದರು.

 ಕಾಯಕ ನಿಷ್ಠೆ ಮಾಯ ಎಂದು ನೇರ ಚಾಟಿ

ಕಾಯಕ ನಿಷ್ಠೆ ಮಾಯ ಎಂದು ನೇರ ಚಾಟಿ

"ನಮ್ಮ ಜನಪ್ರತಿನಿಧಿಗಳಿಂದಾಗಿ ರೈತರಲ್ಲಿದ್ದ ಕಾಯಕ ನಿಷ್ಠೆಯೂ ಹಾಳಾಗಿದೆ. ಅವರೆಲ್ಲ ಮುಂಜಾವಿನಲ್ಲಿ ಉಳುಮೆ ಮಾಡಿ ಬಿಸಿಲೇರುವ ಹೊತ್ತಿಗೆ ನಿಲ್ಲಿಸಿಬಿಡುತ್ತಿದ್ದರು. ಆದರೆ ಕೆಲವರು ನೀವ್ಯಾಕೆ ಮುಂಜಾನೆ ಕೆಲಸ ಮಾಡಬೇಕು, ಎಲ್ಲ ಕೆಲಸಗಾರರಂತೆ ಹಗಲು ಹೊತ್ತಿನಲ್ಲಿ ಉಳುಮೆ ಮಾಡಬಾರದು ಎಂದು ದಾರಿ ತಪ್ಪಿಸಿದ ಕಾರಣದಿಂದ ಮುಂಜಾನೆಯ ಕಾಯಕವನ್ನು ಮರೆತು ಸುಡು ಬಿಸಿಲಲ್ಲಿ ಕೆಲಸ ಮಾಡುವ ಪರಿಸ್ಥಿತಿಯನ್ನು ತಂದಿಟ್ಟುಕೊಂಡರು" ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದರು.

ಆ ನಂತರ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಚಾಮುಂಡಿ ಬೆಟ್ಟದಲ್ಲಿ ಸ್ಥಾಪಿಸಿರುವ ಪೊಲೀಸ್ ಸಹಾಯವಾಣಿ ಕೇಂದ್ರವನ್ನು ಗೃಹಸಚಿವ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.

ಚಾಮುಂಡಿ ಬೆಟ್ಟದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ನಡುವೆ ಕಪ್ಪು ಬಾವುಟ ಹಾರಿಸಲು ಯತ್ನಿಸಿ ಸುಮಾರು 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು, ಮತ್ತೊಂದೆಡೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರೊಂದಿಗೆ ಚಾಮುಂಡಿ ಬೆಟ್ಟದ ಭದ್ರತಾ ಸಿಬ್ಬಂದಿ ಅನುಚಿತವಾಗಿ ನಡೆದುಕೊಂಡರು ಎಂದು ಸಿಟ್ಟಾದ ಘಟನೆಯೂ ನಡೆಯಿತು. ಹೀಗೆ ಸಣ್ಣಪುಟ್ಟ ಘಟನೆಗಳು ಹೊರತು ಪಡಿಸಿದರೆ ನಾಡಹಬ್ಬ ದಸರಾಕ್ಕೆ ಚಾಮುಂಡಿಬೆಟ್ಟದಲ್ಲಿ ಯಶಸ್ವಿ ಚಾಲನೆ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+