ದಸರಾ ಗಜಪಡೆಗೆ ಶನಿವಾರದಿಂದ ತಾಲೀಮು ಶುರು
ಮೈಸೂರು, ಆಗಸ್ಟ್ 19 : ನಾಡಹಬ್ಬ ದಸರೆ ತಯಾರಿ ದಿನಕ್ಕೊಂದು ಮೆರುಗು ಪಡೆದುಕೊಳ್ಳುತ್ತಿದೆ. ಅರ್ಜುನ ಮತ್ತು ಗಜಪಡೆಯ ತಂಡಕ್ಕೆ ಶನಿವಾರದಿಂದ ತಾಲೀಮು ಆರಂಭಿಸಲಾಗಿದೆ.
ದಸರಾ ಮೆರವಣಿಗೆ ಮಾರ್ಗದಲ್ಲಿ ಗಜಪಡೆ ತಾಲೀಮು ನಡೆಸುತ್ತಿದೆ. ನಗರದ ಸಯ್ಯಾಜಿ ರಾವ್ ರಸ್ತೆ ಮೂಲಕ ಬನ್ನಿಮಂಟಪದವರೆಗೂ ಸಾಗಿ ಬಂದಿದ್ದು, ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಗಜಪಡೆಗಳು ಭಾಗಿಯಾಗಿವೆ.
ಶನಿವಾರ ಬೆಳಗ್ಗೆ 7.30ಕ್ಕೆ ಅರಮನೆಯ ಬಲರಾಮ ಪ್ರವೇಶ ದ್ವಾರದಿಂದ ತಾಲೀಮು ಆರಂಭಿಸಿದ ಗಜ ಪಡೆಗಳು ಕೆ.ಆರ್ ವೃತ್ತ ಮೂಲಕ ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ ಮೂಲಕ ಬಂಬೂ ಬಜಾರ್ ರಸ್ತೆಯನ್ನು ಹಾದು ಬನ್ನಿಮಂಟಪಕ್ಕೆ ಸುಮಾರು 8.30ರ ವೇಳೆಗೆ ತಲುಪಿತ್ತು.

ಆನೆಗಳ ಬೆಂಗಾವಲಿಗೆ ಪೊಲೀಸರು ಇದ್ದು, ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ 15 ನಿಮಿಷ ಗಜಪಡೆ ಕಾದಿದೆ. ಗಜಪಡೆ ತಾಲೀಮಿನ ವೇಳೆ ಅಧಿಕಾರಿಗಳು ಗೈರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಆನೆ ವೈದ್ಯರು ಬರಲಿಲ್ಲ. ಇದರಿಂದ ಆರ್.ಎಂ.ಸಿ. ವೃತ್ತದ ತನಕ ತೆರಳಿ ಗಜಪಡೆ ವಾಪಸಾಗಿವೆ.
ಸುಮಾರು 5 ಕಿ.ಮೀ ಮೊದಲ ದಿನ ಗಜ ಪಡೆಗಳ ತಾಲೀಮು ನಡೆಸಿವೆ. ಕ್ಯಾಪ್ಟನ್ ಅರ್ಜುನ ಜನನಿಬಿಡ ಮಾರ್ಕೆಟ್ ನ ಸಯ್ಯಾಜೀರಾವ್ ರಸ್ತೆ ಪ್ರವೇಶಿಸುತ್ತಿದಂತೆ ತನ್ನ ಸಂಗಾತಿ ವರಲಕ್ಷ್ಮೀಯನ್ನು ನೆನೆದು ಕೆಲಕಾಲ ರಸ್ತೆಯಲ್ಲಿ ನಿಂತು ಹಿಂದೆ ತಿರುಗಿ ನೋಡುತ್ತಿದ್ದ.
ಕೆ.ಆರ್. ವೃತ್ತ ಮೂಲಕ ಸಯ್ಯಾಜಿರಾವ್ ರಸ್ತೆಗೆ ಬರುತ್ತಿದಂತೆ ರಸ್ತೆಯ ಪಕ್ಕದಲ್ಲಿ ಹೂ ಮಾರುತ್ತಿದ್ದ ವ್ಯಾಪಾರಿಗಳು ಎಲ್ಲ ಆನೆಗಳಿಗೂ ಹೂ ಮತ್ತು ಹಾರವನ್ನು ನೀಡುವ ಮೂಲಕ ಸ್ವಾಗತಿಸಿದರು.












Click it and Unblock the Notifications