ದಸರಾ ಆನೆ ಅರ್ಜುನನ ಮಾವುತ ದೊಡ್ಡಮಾಸ್ತಿ ನಿಧನ
ಮೈಸೂರು, ಆಗಸ್ಟ್ 11 : ಮೈಸೂರು ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಅರ್ಜುನ ಆನೆಯ ಮಾವುತನಾಗಿ ಕಾರ್ಯನಿರ್ವಹಿಸಿ ಕಳೆದ ವರ್ಷವಷ್ಟೇ ನಿವೃತ್ತನಾಗಿದ್ದ ಮಾವುತ ದೊಡ್ಡಮಾಸ್ತಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಅರ್ಜುನ ಆನೆಯ ಮಾವುತನಾಗಿ ಅವರು ವಿಶ್ವವಿಖ್ಯಾತ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಇವರು ಎಚ್.ಡಿ ಕೋಟೆ ತಾಲೂಕಿನ ಬಳ್ಳೆ ಆನೆ ಶಿಬಿರದ ನಿವಾಸಿಯಾಗಿದ್ದರು. ದಸರಾದಲ್ಲಿ ಸುಮಾರು 12 ವರ್ಷಗಳಿಂದ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದರು. 2012ರಿಂದ ಜಂಬೂಸವಾರಿಯ ಜವಾಬ್ದಾರಿಯನ್ನು ಕೂಡ ವಹಿಸಿದ್ದರು.
ಬ್ರೈನ್ಟ್ಯೂಮರ್ನಿಂದ ಬಳಲುತ್ತಿದ್ದ ಮಾವುತ ದೊಡ್ಡಮಾಸ್ತಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಫಲಕಾರಿಯಾಗಿರಲಿಲ್ಲ.
ಕಳೆದೊಂದು ವರ್ಷದಿಂದ ಹಾಸಿಗೆ ಹಿಡಿದಿದ್ದ ಇವರು ಅರ್ಜುನನಿಗೆ ಅಂಬಾರಿ ಹೊರುವ ತರಬೇತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಜುನನ ಕಾವಾಡಿಯಾಗಿರುವ ಮಗ ಮಹೇಶ ಸೇರಿದಂತೆ ಮೂರು ಜನ ಪುತ್ರರನ್ನು ಅಗಲಿದ್ದಾರೆ.












Click it and Unblock the Notifications