ವಿದೇಶದಲ್ಲೂ ರಾರಾಜಿಸಲಿದೆ ಮೈಸೂರು ದಸರೆಯ ಜಾಹೀರಾತು ಫಲಕ!
ಮೈಸೂರು, ಆಗಸ್ಟ್ 7 : ವಿಶ್ವವಿಖ್ಯಾತ ದಸರೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ದಸರೆಯ ಗಮನ ಕೋರಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದಸರಾ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶ ಹಾಗೂ ವಿದೇಶಿ ಪ್ರವಾಸಿಗರನ್ನ ಸೆಳೆಯಲು ವಿಮಾನದ ಮೇಲೆ ಜಾಹೀರಾತು ಪ್ರಕಟಿಸಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ.
ವಿದೇಶಿ ಪ್ರವಾಸಿಗರ ಮೇಲೆಯೇ ಕಣ್ಣಿಟ್ಟ ಟೂರಿಸಂ ಇಲಾಖೆ ಒಂದು ವಿಮಾನದ ಮೇಲೆ ಕನಿಷ್ಠ 1 ವರುಷ ಜಾಹೀರಾತು ರಾರಾಜಿಸುವ ನಿಟ್ಟಿನಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. 460 ಟ್ರಿಪ್ ಹಾಗೂ 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವಿಮಾನವಾಗಿರಬೇಕೆಂದು ಟೆಂಡರ್ ನಲ್ಲಿ ಷರತ್ತು ವಿಧಿಸಿದೆ.

ಜೊತೆಗೆ ಮುಂಬೈ, ದೆಹಲಿ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಒಂದು ವಿಮಾನ ಬಳಸಿಕೊಳ್ಳಲಾಗುವುದು. ಜೊತೆಗೆ ವಿದೇಶಗಳಿಗೆ ತೆರಳುವ ವಿಮಾನದ ಆಸನಗಳಲ್ಲಿ ರಾಜ್ಯದ ಬಗ್ಗೆ ಮಾಹಿತಿ ನೀಡುವ ಕರಪತ್ರ ಮತ್ತು ಮ್ಯಾಗಜಿನ್ ಇಡಲಾಗುವುದು.
ವಿಮಾನ ಮಾತ್ರವಲ್ಲದೇ ರೈಲು, ಮೆಟ್ರೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುವುದು. ಈ ಹಿಂದೆ ದಸರಾ ಮಹೋತ್ಸವದ ಪ್ರಚಾರದ ಹೊಣೆಯನ್ನು ವಿವಿಧ ಇಲಾಖೆಗಳಿಗೆ ಪ್ರತ್ಯೇಕಿಸಲಾಗುತ್ತಿತ್ತು. ಆದರೆ ಈ ಬಾರಿ ದಸರಾ ಪ್ರಚಾರದ ಸಂಪೂರ್ಣ ಉಸ್ತುವಾರಿ ಪ್ರವಾಸೋದ್ಯಮ ಇಲಾಖೆ ಹೆಗಲ ಮೇಲೆ ಬಿದ್ದಿದೆ. ದೇಶ ವಿದೇಶಗಳಲ್ಲಿ ಪ್ರಚಾರ ಮಾಡಿ ಪ್ರವಾಸಿಗರನ್ನು ಸೆಳೆಯಲಾಗುವುದೆಂದು ರಾಜ್ಯ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿದೇಶದಲ್ಲಿ ದಸರೆ ಕುರಿತ ರೋಡ್ ಶೋ!
ದೇಶ-ವಿದೇಶಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಲಂಡನ್, ಪ್ಯಾರಿಸ್, ಬ್ಯಾಂಕಾಕ್, ಸಿಂಗಾಪುರದಲ್ಲಿ ರೋಡ್ ಷೋ ನಡೆಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ದಸರೆಗೆ ಕಾಯಂ ಲಾಂಛನ ಸಿದ್ಧಪಡಿಸಲಾಗಿದೆ. ಪ್ರಚಾರಕ್ಕೆ ಒಂದು ಬ್ಯಾಂಡ್ ರೂಪಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಕೇರಳ, ತಮಿಳುನಾಡು ರಾಜ್ಯದ ಪ್ರವಾಸಿಗರನ್ನು ಸೆಳೆಯಲು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೈಸೂರು -ಬೆಂಗಳೂರು ವಿಮಾನಯಾನಕ್ಕೆ ಡಿಸಿ ಪತ್ರ:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರು- ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ವಿಶೇಷ ವಿಮಾನ ಹಾರಾಟ ಆರಂಭಿಸುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಾರಿ ದಸರಾ ಮಹೋತ್ಸವ ಸೆ.21ರಿಂದ 30ರವರೆಗೆ ನಡೆಯಲಿದ್ದು, ಆ ದಿನಗಳಲ್ಲಿ ವಿಶೇಷ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಸಿಕೊಡುವಂತೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
ದಸರಾ ಮಹೋತ್ಸವ ಮೈಸೂರು ನಗರದಲ್ಲಿ ಅತ್ಯಂತ ವಿಶಿಷ್ಟವಾದ ರೀತಿಯಲ್ಲಿ ಆಚರಣೆಗೊಳ್ಳಲಿದ್ದು, ವಿಶ್ವ ಮಾನ್ಯತೆ ಗಳಿಸುವ ಜತೆಗೆ ಮೈಸೂರಿನ ಹೆಗ್ಗುರುತಾಗಿದೆ. ಈ ಸಂದರ್ಭದಲ್ಲಿ ವಿದೇಶಿ ಪ್ರವಾಸಿಗರೂ ಹೆಚ್ಚಾಗಿ ನಗರಕ್ಕೆ ಭೇಟಿ ನೀಡಲು ಉತ್ಸುಕರಾಗಿತ್ತಾರೆ. ಆದರೆ, ದಸರಾ ಮಹೋತ್ಸವ ನಡೆಯುವ ದಿನಗಳಲ್ಲಿ ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಟ ಇಲ್ಲದಿರುವುದರಿಂದ ಬಹಳಷ್ಟು ವಿದೇಶಿಯರು ಮೈಸೂರು ನಗರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಪತ್ರದಲ್ಲಿ ವಿವರಿಸಿದ್ದಾರೆ.
ಉಡಾನ್ ಯೋಜನೆಯಡಿ ಮೈಸೂರು-ಚೆನ್ನೈ ನಡುವೆ ದಿನಕ್ಕೆ 2 ಬಾರಿ ವಿಮಾನ ಹಾರಾಟ ಇದ್ದಾಗ್ಯೂ ಅದು ಬೆಂಗಳೂರಿಗೆ ಹೋಗುವುದಿಲ್ಲ. ಹಾಗಾಗಿ ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ ಮೈಸೂರು ನಗರಕ್ಕೆ ವಿಶೇಷ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಿ ಎಂದಿದ್ದಾರೆ.












Click it and Unblock the Notifications