ಅರಮನೆ ನಗರಿ ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ಸಂಭ್ರಮ-10 ದಿನ ಅದ್ಧೂರಿ ಕಾರ್ಯಕ್ರಮಗಳ ಪಟ್ಟಿ ಹೀಗಿದೆ
ಮೈಸೂರು, ಅಕ್ಟೋಬರ್, 03: ಇಂದು (ಅಕ್ಟೋಬರ್ 03) ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿಧ್ಯುಕ್ತ ಚಾಲನೆ ದೊರೆತಿದದೆ. ಇನ್ಮುಂದೆ 10 ದಿನಗಳ ಕಾಲ ಮೈಸೂರು ನಗರದಲ್ಲಿ ಸಡಗರ, ಸಂಭ್ರಮ ಮನೆ ಮಾಡಲಿದೆ. ರಾತ್ರಿಯಾಗುತ್ತಿದ್ದಂತೆಯೇ ಇಂದ್ರನ ಅಮರಾವತಿಯೇ ಧರೆಗಿಳಿದ ಅನುಭವವಾಗಲಿದೆ.
ಇಂದಿನಿಂದಲೇ ಇಡೀ ನಗರ ದಸರಾ ಬೆಳಕಿನಲ್ಲಿ ಮಿಂದೇಳಲಿದೆ. ದಸರಾ ವೇಳೆ ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿರುವ ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ದಸರಾ ಎಂದರೆ ಎಲ್ಲರ ಮೈಮನವನ್ನು ಪುಳಕಗೊಳಿಸುತ್ತಿದೆ. ಅದರಲ್ಲೂ ದಸರಾ ಎಂದರೆ ಸಾಕು ಮೈಸೂರಿಗೆ ಮೈಸೂರೇ ಬದಲಾಗಿಬಿಡುತ್ತದೆ. ಮಕ್ಕಳಿಂದ ಆರಂಭಗೊಂಡು ವೃದ್ಧರವರೆಗೆ ಎಲ್ಲರಲ್ಲೂ ಸಡಗರ ಮೂಡಿ ಬಿಡುತ್ತದೆ.

ಇಡೀ ನಗರದ ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿದ್ದರೆ, ಅದರ ನಡುವೆ ದಸರಾಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗಿದ್ದರೆ, ಅತ್ತ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಆಹಾರಮೇಳ, ವಸ್ತುಪ್ರದರ್ಶನ ಹೀಗೆ ಎಲ್ಲದಕ್ಕೂ ಚಾಲನೆ ಸಿಗಲಿದ್ದು, ಪ್ರತಿ ದಿನವೂ ದಸರಾ ಸಂಬಂಧ ಕಾರ್ಯಕ್ರಮಗಳು ಆರಂಭವಾಗಲಿವೆ.
ಎಲ್ಲರಿಗೂ ದಸರಾದಲ್ಲಿ ಸಂಭ್ರಮಿಸುವ ಸಡಗರ: ದಸರಾ ಶುರುವಾಗುತ್ತಿದ್ದಂತೆಯೇ ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಅವಕಾಶ ದೊರೆಯಲಿದೆ. ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸಲಿದ್ದರೆ, ಮತ್ತೊಂದೆಡೆ ಬೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಆಹಾರ ಮೇಳ ಮಾಡಲಿದೆ. ಇನ್ನು ಸಂಜೆ ನಗರದಲ್ಲಿ ಅಡ್ಡಾಡಿದರೆ, ಇನ್ನು ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದೆ.
ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆಯಲಿವೆ. ದಸರಾ ಸಡಗರ ಸಂಭ್ರಮದ ಜೊತೆಗೆ ಇತಿಹಾಸ, ರಾಜಪರಂಪರೆಯನ್ನು ತೆರೆದಿಡುವ ಖಾಸಗಿ ದರ್ಬಾರ್ ಗಮನ ಸೆಳೆಯಲಿದೆ. ಅಷ್ಟೇ ಅಲ್ಲದೆ, ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ಜನ ಇನ್ಮುಂದೆ ಹತ್ತು ದಿನಗಳ ಕಾಲ ಸಂಜೆ ಆಗುತ್ತಿದ್ದಂತೆಯೇ ಜನ ಮನೆಯಿಂದ ಹೊರ ಬರಲಿದ್ದಾರೆ.
ಏನೋ ಒಂಥರಾ ಆನಂದ.. ಅನುಭವ: ಹೊರಗಿನಿಂದ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗಲಿದ್ದು, ನಗರದ ಅಲ್ಲಲ್ಲಿ ವೃತ್ತಗಳು, ರಸ್ತೆಗಳು, ಮರಗಳು, ಕಟ್ಟಡಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಅವು ಮಿನುಗುವಾಗ ಕಾಣುವ ದೃಶ್ಯ ಅದ್ಭುತ. ಆದ್ದರಿಂದಲೇ ಮೈಸೂರು ದಸರಾ ಎಂದಾಕ್ಷಣ ಏನೋ ಒಂಥರಾ ಆನಂದ. ಸುಂದರ ಅನುಭವ.
ಇನ್ನು ನಗರದಲ್ಲಿ ಅಡ್ಡಾಡುವವರಿಗೆ ಮೈಮನವೆಲ್ಲಾ ರೋಮಾಂಚನ. ಕಣ್ಮುಂದೆ ಚೆಂದದ ಮೈಸೂರು, ಅಂದದ ಅರಮನೆ, ಸುಂದರ ಚಿನ್ನದ ಅಂಬಾರಿ, ಮನಸೆಳೆವ ರತ್ನ ಸಿಂಹಾಸನ, ಸಿಂಹಾಸನಾಧೀಶರಾಗಿ ಮೆರೆದ ಮಹಾರಾಜರ ವೈಭವ-ವೈಭೋಗಗಳೆಲ್ಲವೂ ನೆನಪುಗಳ ಮೆರವಣಿಗೆಯಾಗಿ ತೇಲಿ ಬರುತ್ತದೆ.
ಸಂಪ್ರದಾಯಕ್ಕೊಂದು ಹೊಸ ಮೆರಗು: ಇನ್ನು ಇವತ್ತು ಇಂತಹದೊಂದು ದಸರಾ ಆಚರಣೆಯನ್ನು ಹಿಂದಿನ ಕಾಲದಲ್ಲಿ ಮೈಸೂರು ಮಹಾರಾಜರು ಜಾರಿಗೆ ತಂದರು. ಅದು ರಾಜತ್ವ ಕಳೆದು ಪ್ರಜಾಪ್ರಭುತ್ವ ಬಂದಿದ್ದರೂ ಹಲವು ಬದಲಾವಣೆಗಳನ್ನು ಕಂಡು ಜನೋತ್ಸವವಾಗಿ ಈಗ ಮೆರೆಯುತ್ತಿದೆ. ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಶುರುವಾಗಿ ಮಹಾನವಮಿಯ ಕಡೇ ದಿನದವರೆಗೂ ಪ್ರತಿನಿತ್ಯ ಪೂಜೆ-ಪುನಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಾರಾಜರು ಆಚರಿಸುತ್ತಿದ್ದರು.
ಇವತ್ತು ಬದಲಾವಣೆಯ ಕಾಲಘಟ್ಟದಲ್ಲಿದ್ದೇವೆ. ಈಗಿನ ತಲೆಮಾರಿಗೆ ಅನ್ವಯವಾಗುವಂತೆ ಹಿಂದಿನ ಸಂಪ್ರದಾಯದೊಂದಿಗೆ ಒಂದಷ್ಟು ಹೊಸ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡುತ್ತಾ ದಸರಾ ಇನ್ನಷ್ಟು ವಿಸ್ತಾರವಾಗುತ್ತಾ ಹೋಗುತ್ತಿರುವುದು ದಸರಾದ ವಿಶೇಷವಾಗಿದೆ.












Click it and Unblock the Notifications