ಮೈಸೂರು ದಸರಾ 2021; ಸಾಂಸ್ಕೃತಿಕ ನಗರಿಯಲ್ಲಿ ಭರದಿಂದ ಸಾಗುತ್ತಿದೆ ತಯಾರಿ
ಮೈಸೂರು, ಸೆಪ್ಟೆಂಬರ್ 28: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸರ್ವ ರೀತಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಳ್ಳುತ್ತಿದೆ. ಬೆಳಕಿನಲ್ಲಿ ಕಂಗೊಳಿಸಲು ಅಂಬಾವಿಲಾಸ ಅರಮನೆ ವಿದ್ಯುತ್ ಬಲ್ಬ್ಗಳು ರೆಡಿಯಾಗುತ್ತಿವೆ.
ಮೈಸೂರು ಅರಮನೆ ದೀಪಾಲಂಕಾರ ದಸರಾದ ಪ್ರಮುಖ ಆಕರ್ಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ಆರಂಭವಾಗಿದೆ. ವಿದ್ಯುತ್ ದೀಪ ಹೊತ್ತಿಸಿ, ಬಲ್ಬ್, ಹೋಲ್ಡರ್, ವೈರಿಂಗ್ ಅನ್ನು ಎಲೆಕ್ಟ್ರಿಷಿಯನ್ಸ್ ಸರಿಪಡಿಸುತ್ತಿದ್ದಾರೆ. ಕ್ರೇನ್ ಸಹಾಯದಿಂದ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಒಡೆದು ಹೋಗಿರುವ ಬಲ್ಬ್ಗಳನ್ನು ತೆರವುಗೊಳಿಸಿ ಹೊಸ ಬಲ್ಬ್ಗಳನ್ನು ಅಳವಡಿಸಲಾಗುತ್ತಿದೆ.
ಪ್ರವಾಸಿಗರಿಗೆ ಯದುವೀರ್ ಸ್ವಾಗತ!
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ, ಮೈಸೂರು ಟ್ರಾವೆಲ್ ಅಸೋಸಿಯೇಷನ್ ಹಾಗೂ ಹೋಟೆಲ್ ಮಾಲೀಕರ ಸಂಘದಿಂದ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರವಾಸಿಗರಿಗೆ ಹೂ ನೀಡಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕು ಹಿನ್ನೆಲೆ ದಸರಾ ನಂತರ ಈ ಬಾರಿಯೂ ಪ್ರವಾಸಿಗರಿಗೆ ಸಿಂಹಾಸನ ನೋಡಲು ಅವಕಾಶ ಇರುವುದಿಲ್ಲ. ಈ ಬಾರಿ ದಸರಾ ಸಾಂಪ್ರದಾಯಿಕವಾಗಿ ನಡೆಯಲಿದೆ. ಅರಮನೆ ಸಂಪ್ರದಾಯದ ಬಗ್ಗೆ ಅರಮನೆ ಕಚೇರಿ ಮಾಹಿತಿ ನೀಡಲಿದೆ ಎಂದರು.
ಆನೆಗಳನ್ನು ಕಳುಹಿಸುವ ಬಗ್ಗೆ ಅರಮನೆ ಕಚೇರಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೇ ಜಟ್ಟಿ ಕುಸ್ತಿ ನಡೆಸಬೇಕೇ ಅಥವಾ ಬೇಡವೇ ಎಂಬುವುದರ ಬಗ್ಗೆ ಸದ್ಯದಲ್ಲೇ ತಿಳಿಸಲಾಗುವುದು ಎಂದು ಹೇಳಿದರು.

ಅ.1ಕ್ಕೆ ಸಿಂಹಾಸನ ಜೋಡಣೆ
ಅಕ್ಟೋಬರ್ 1ರ ಶುಕ್ರವಾರದಂದು ಅಭಿಜಿತ್ ಲಗ್ನದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಅದಕ್ಕೂ ಮುನ್ನ ಹೋಮ- ಹವನ ನಡೆಯಲಿದೆ. ಇನ್ನು ಖಾಸಗಿ ದರ್ಬಾರ್ ಹಾಲ್ನಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅಂದು ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ.
ಇನ್ನೂ ಫೈನಲ್ ಆಗಿಲ್ಲ ಉದ್ಘಾಟಕರು
ಅ.7ರಂದು ಚಾಮುಂಡಿ ಬೆಟ್ಟದಲ್ಲಿ ಅಧಿಕೃತವಾಗಿ ಮೈಸೂರು ದಸರಾಗೆ ಚಾಲನೆ ಸಿಗಲಿದೆ. ಆದರೆ ಉದ್ಘಾಟನೆ ಯಾರು ಮಾಡುತ್ತಾರೆ ಅನ್ನುವುದು ಮಾತ್ರ ಇನ್ನೂ ಫೈನಲ್ ಆಗಿಲ್ಲ. ಈಗಾಗಲೇ ಸರ್ಕಾರಕ್ಕೆ ಹಲವು ಹೆಸರು ಶಿಫಾರಸು ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಉದ್ಘಾಟಕರ ಹೆಸರು ಇಷ್ಟೊಂದು ತಡವಾಗಿ ಘೋಷಣೆ ಆಗುತ್ತಿದೆ.

ಮೈಸೂರಿನಲ್ಲಿ ಬಿಗಿ ಭದ್ರತೆ
ಇನ್ನು ಅರಮನೆ ನಗರಿ ಮೈಸೂರಲ್ಲಿ ಖಾಕಿ ಕಣ್ಗಾವಲು ಹೆಚ್ಚಿದೆ. ನಗರದಾದ್ಯಂತ ಹದ್ದಿನ ಕಣ್ಣು ವಹಿಸಲಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಅನುಮಾನ ಬಂದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಮೈಸೂರು ನಗರ ಕಮಿಷನರ್ ಡಾ. ಚಂದ್ರಗುಪ್ತ ಮನವಿ ಮಾಡಿದ್ದಾರೆ.
ಜೋರಾಗಿದೆ ಲೈಟಿಂಗ್ಸ್ ತಯಾರಿ
ದಸರಾ ದೀಪಾಲಂಕಾರ ಮೈಸೂರಿನ ಪ್ರಮುಖ ಆಕರ್ಷಣೆಯಾಗಿದ್ದು, ಸರಳ ದಸರಾ ಆಚರಣೆಯಾದರೂ ಈ ಬಾರಿ ದೀಪಾಲಂಕಾರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಇಡೀ ಮೈಸೂರಲ್ಲಿ ಲೈಟಿಂಗ್ಸ್ ಹಾಕಲಾಗುತ್ತಿದೆ. ಪ್ರವಾಸಿಗರು ಕೂಡ ಮೈಸೂರು ಕಡೆಗೆ ಹೆಚ್ಚಾಗಿ ದೌಡಾಯಿಸುತ್ತಿದ್ದಾರೆ.












Click it and Unblock the Notifications