ಮೈಸೂರು ದಸರಾ 2020: ಚಾಮುಂಡಿ ಬೆಟ್ಟ ತಲುಪಿದ ಜಂಬೂಸವಾರಿ ಉತ್ಸವಮೂರ್ತಿ
ಮೈಸೂರು, ಅಕ್ಟೋಬರ್ 7: ನಾಡಹಬ್ಬ ಮೈಸೂರು ದಸರಾ ಆಚರಣೆ ಹಿನ್ನೆಲೆಯಲ್ಲಿ ಇಂದು ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅಂಬಾವಿಲಾಸ ಅರಮನೆಯಿಂದ ಚಾಮುಂಡಿ ಬೆಟ್ಟಕ್ಕೆ ಕೊಂಡೊಯ್ಯಲಾಯಿತು.
ನಾಡಹಬ್ಬ ಮೈಸೂರು ದಸರಾ 2020ಕ್ಕೆ ದಿನಗಣನೆ ಆರಂಭವಾಗಿದ್ದು, ಅ.17 ರಂದು ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕ ದಸರಾಕ್ಕೆ ಒತ್ತು ನೀಡಲಾಗಿದೆ.
ಪಂಚಲೋಹದಿಂದ ನಿರ್ಮಾಣಗೊಂಡಿರುವ ನಾಡದೇವಿ ಉತ್ಸವ ಮೂರ್ತಿಯನ್ನು ಮೈಸೂರು ನಗರದ ಅಂಬಾವಿಲಾಸ ಅರಮನೆಯಿಂದ ಚಾಮುಂಡಿ ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಯಿತು.

ಚಾಮುಂಡಿ ಬೆಟ್ಟದ ಆಡಳಿತಾಧಿಕಾರಿ ಸಮ್ಮುಖದಲ್ಲಿ ಬೆಟ್ಟಕ್ಕೆ ನಾಡದೇವಿ ಉತ್ಸವ ಮೂರ್ತಿ ತೆರಳಿದ್ದು, ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ದಿನಗಳಂದು ವಿಶೇಷ ಪೂಜೆ ನಡೆಯಲಿದೆ.
ವಿಶೇಷ ಪೂಜೆಗೂ ಮುನ್ನ ಬೆಟ್ಟದ ಸಿಬ್ಬಂದಿ ಪ್ರತಿಮೆ ಶುಚಿಗೊಳಿಸಿ ಪೂಜೆಗೆ ಸಿದ್ಧತೆಗೊಳಿಸಲಿದ್ದಾರೆ. ಜಂಬೂಸವಾರಿ ದಿನ ಮತ್ತೆ ಅರಮನೆಗೆ ನಾಡದೇವಿ ಹಿಂದಿರುಗಲಿದೆ. ಉತ್ಸವ ಮೂರ್ತಿ ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಪ್ರಸ್ತುತ ವರ್ಷ, ರಾಜ್ಯ ಸರ್ಕಾರ ಸಾಂಸ್ಕೃತಿಕ ನಗರಿಯಲ್ಲಿ ಸರಳವಾಗಿ ದಸರಾ ಆಚರಿಸಬೇಕೆಂದು ಆದೇಶ ಹೊರಡಿಸಿದೆ. ಈ ಬಾರಿ ಕೇವಲ ಎರಡು ಸಾವಿರ ಮಂದಿಗೆ ಪ್ರವೇಶ ಎಂದು ತಿಳಿಸಿದೆ.
ಈಗಾಗಲೇ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ದೀಪಾಲಂಕಾರ ಕಾರ್ಯ ಭರದಿಂದ ಸಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆ ದೀಪಾಲಂಕಾರ. ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ, ಹತ್ತನೇ ದಿನ ವಿಜಯ ಸಂಕೇತವಾಗಿ ವಿಜಯ ದಶಮಿ ಆಚರಿಸುತ್ತೇವೆ. ದುರ್ಗಾ ದೇವಿಯ 9 ರೂಪಗಳ ಶಕ್ತಿಯನ್ನು ಪೂಜಿಸಲಾಗುತ್ತದೆ.












Click it and Unblock the Notifications