ಮೈಸೂರು ದಸರಾ 2019 : ಪೂರ್ವ ಸಿದ್ಧತೆ ಸಭೆ ಕರೆದ ಯಡಿಯೂರಪ್ಪ
ಮೈಸೂರು, ಆಗಸ್ಟ್ 05 : 2019ರ ಮೈಸೂರು ದಸರಾ ಸಿದ್ಧತೆಗಳತ್ತ ಕರ್ನಾಟಕ ಸರ್ಕಾರ ಗಮನ ಹರಿಸಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ತನಕ ಈ ಬಾರಿಯ ದಸರಾ ನಡೆಯಲಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದಸರಾ ಕುರಿತು ಚರ್ಚೆ ನಡೆಸಲು ಆಗಸ್ಟ್ 9ರಂದು ಸಭೆಯನ್ನು ಕರೆದಿದ್ದಾರೆ. ಮೈಸೂರು ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲೆಯ ಜನಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ದಸರಾ ಪೂರ್ವ ಸಿದ್ಧತೆಗಳ ಕುರಿತು ಸಭೆ ನಡೆಯಲಿದೆ. ರಾಜ್ಯದಲ್ಲಿ ಬರಗಾಲ ಇರುವ ಕಾರಣ ಸರಳವಾಗಿ ಈ ಬಾರಿಯ ದಸರಾವನ್ನು ಆಚರಣೆ ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
2018ರಲ್ಲಿಯೂ ಕೊಡಗಿನಲ್ಲಿ ನಡೆದ ಜಲಪ್ರಳಯದಿಂದಾಗಿ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ಮೈಸೂರು, ಮಂಡ್ಯ ಭಾಗದಲ್ಲಿ ಮಳೆಯ ಕೊರತೆ ಎದುರಾಗಿದೆ. ರಾಜ್ಯದ ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಆದ್ದರಿಂದ, ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತದೆ.
ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ತನಕ ಈ ಬಾರಿಯ ಮೈಸೂರು ದಸರಾ ನಡೆಯಲಿದೆ. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ದಸರಾ ಉದ್ಘಾಟನೆ ಮಾಡುವವರು ಯಾರು? ಎಂದು ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications