ಈ ಬಾರಿ ಆಯುಧಪೂಜೆ ದಿನದಂದು ಜಂಬೂ ಸವಾರಿ
ಮೈಸೂರು, ಅಕ್ಟೋಬರ್ 02 : ಈ ಬಾರಿಯ ಮೈಸೂರು ದಸರಾದಲ್ಲಿ ಆಯುಧಪೂಜೆಯ ದಿನದಂದು ಜಂಬೂ ಸವಾರಿ ನಡೆಯಲಿದೆ. ಪ್ರಗತಿಪರ ರೈತ ಪುಟ್ಟಯ್ಯ ಅವರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 23ರಂದು ವಿಜಯದಶಮಿ ಇದೆ. ಆದರೆ, 22ರಂದೇ ಜಂಬೂ ಸವಾರಿ ನಡೆಯಲಿದೆ.
ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು, 'ಅಕ್ಟೋಬರ್ 23ರ ಬದಲಾಗಿ 22ರಂದು ವಿಜಯದಶಮಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ' ಎಂದು ಹೇಳಿದರು. ಇದರಿಂದಾಗಿ ಆಯುಧಪೂಜೆ ದಿನದಂದೇ ದಸರಾ ಮೆರವಣಿಗೆ ನಡೆಯಲಿದೆ. [ಈ ಬಾರಿ ಸರಳ ದಸರಾ : ಏನಿರುತ್ತೆ, ಏನಿರಲ್ಲ?]

ಅಕ್ಟೋಬರ್ 13ರಂದು 2015ನೇ ಸಾಲಿನ ಮೈಸೂರು ದಸರಾಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 11.05ರಿಂದ 11.55ರವರೆಗೆ ಸಲ್ಲುವ ಧನುರ್ ಲಗ್ನದಲ್ಲಿ ದಸರಾಕ್ಕೆ ಚಾಲನೆ ದೊರೆಯಲಿದೆ. ಪ್ರಗತಿಪರ ರೈತ ಪುಟ್ಟಯ್ಯ ಅವರು ದಸರಾಕ್ಕೆ ಚಾಲನೆ ನೀಡಲಿದ್ದಾರೆ. [4 ಜಿಲ್ಲೆಗಳ ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ]
22ರಂದು ಜಂಬೂ ಸವಾರಿ : ಈ ಬಾರಿಯ ಮೈಸೂರು ದಸರಾದಲ್ಲಿ ಆಯುಧ ಪೂಜೆ ದಿನದಂದು ಜಂಬೂ ಸವಾರಿ ನಡೆಯಲಿದೆ. ಅಕ್ಟೋಬರ್ 22ರಂದು ಮಧ್ಯಾಹ್ನ 1.10 ರಿಂದ 1.25ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಪೂಜೆ ನಡೆಯಲಿದೆ. ಮಧ್ಯಾಹ್ನ 3.12 ರಿಂದ 3.30ರ ವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ['ದಸರಾ ಉದ್ಘಾಟನೆ ಮಾಡೋಲ್ಲ']
ರೈತರ ಸರಣಿ ಆತ್ಮಹತ್ಯೆ ಮತ್ತು ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲು ಸರ್ಕಾರ ಮುಂದಾಗಿದೆ. ಆದ್ದರಿಂದ ಈ ಬಾರಿಯ ದಸರಾದಲ್ಲಿ 20 ಸ್ತಬ್ಧಚಿತ್ರಗಳು ಮತ್ತು 30 ಕಲಾತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.












Click it and Unblock the Notifications