ಮೈಸೂರು ಕೋರ್ಟ್ ಆವರಣ ಬಾಂಬ್ ಸ್ಫೋಟ: ಉಗ್ರನ ವಿಚಾರಣೆ
ಮೈಸೂರು, ಡಿಸೆಂಬರ್ 2: ರಾಜ್ಯದಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಮತ್ತು ಜನರನ್ನು ಬೆಚ್ಚಿ ಬೀಳಿಸಿದ್ದ ಮೈಸೂರು ನ್ಯಾಯಾಲಯ ಆವರಣದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಶುಕ್ರವಾರ ಮೈಸೂರಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆತರಲಾಯಿತು.
ರಾಷ್ಟ್ರೀಯ ತನಿಖಾ ತಂಡವು ಮೈಸೂರು ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ ಕೈದಾ ಸಂಘಟನೆಯ ಶಂಕಿತ ಮೂವರು ಉಗ್ರರನ್ನು ತಮಿಳುನಾಡಿನ ಮದುರೈಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ಸಂದರ್ಭ ದಾವೂದ್ ಸುಲೈಮಾನ್ ಎಂಬಾತನ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಆದ್ದರಿಂದ ಆತನನ್ನು ಕರೆತಂದು ಪರಿಶೀಲನೆ ನಡೆಸಲಾಗಿದೆ.

ಮೊದಲಿಗೆ ಬೆಳಗ್ಗೆ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಲಕ್ಷ್ಮೀಪುರಂನಲ್ಲಿ ವಿಚಾರಣೆಗೊಳಪಡಿಸಿ, ನಂತರ ಆತ ಬಾಂಬ್ ಸ್ಫೋಟದ ದಿನ ಬಸ್ಸಿನಲ್ಲಿ ಬಂದು ಯಾವ ಕಡೆ ಓಡಾಡಿದ್ದ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಆ ನಂತರ ಸ್ಫೋಟ ನಡೆದ ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯಕ್ಕೆ ರಾಷ್ಟ್ರೀಯ ತನಿಖಾ ದಳದ ತಂಡ ಕರೆ ತಂದು, ಸ್ಥಳ ಮಹಜರು ನಡೆಸಿ ಒಂದಷ್ಟು ಮಾಹಿತಿಯನ್ನು ಕಲೆಹಾಕಿತು.
ಬಾಂಬ್ ಸ್ಫೋಟ ನಡೆದ ಆಗಸ್ಟ್ 1ರಂದು ಮೈಸೂರು ನ್ಯಾಯಾಲಯದ ಆವರಣದ ಶೌಚಾಲಯ ಸ್ವಚ್ಛ ಮಾಡುವ ಮಹಿಳೆಯಿಂದ ಉಗ್ರನ ಚಹರೆ ಗುರುತಿಸಲಾಯಿತು. ಅವತ್ತು ಈತ ನಗರದ ವಿದ್ಯಾರಣ್ಯಂಪುರಂನಲ್ಲಿ ಅಡ್ಡಾಡಿ ಕೆಲವರನ್ನು ಭೇಟಿ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಅದನ್ನು ಸ್ಥಳೀಯ ಪೊಲೀಸರ ಸಹಕಾರದಿಂದ ತನಿಖೆ ನಡೆಸಲಾಯಿತು.

ಶಂಕಿತ ಉಗ್ರ ದಾವೂದ್ ಸುಲೈಮಾನ್ ಚೆನೈನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮೈಸೂರು ನ್ಯಾಯಾಲಯದ ಆವರಣದ ಬಾಂಬ್ ಸ್ಫೋಟದಲ್ಲಿ ತಾನೊಬ್ಬನೇ ಭಾಗಿಯಾಗಿರುವುದಾಗಿ ಹೇಳಿದ್ದಾನೆ. ಆದರೆ ಇದರ ಹಿಂದೆ ಕಾಣದ ಕೈಗಳ ಕೈವಾಡ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ತೀವ್ರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ.












Click it and Unblock the Notifications