ಹುಟ್ಟೂರ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ರೌಂಡ್ಸ್
ಮೈಸೂರು, ಮಾರ್ಚ್, 25: ಬಜೆಟ್ ಮಂಡನೆ ಬಳಿಕ ಕೊಂಚ ಜಾಲಿ ಮೂಡ್ ನಲ್ಲಿರುವ ಸಿಎಂ ಸಿದ್ದರಾಮಯ್ಯ ತವರಿನ ಜಾತ್ರಾ ಸಂಭ್ರಮದಲ್ಲಿ ಭಾಗಿಯಾದರು. ಹುಟ್ಟೂರು ಸಿದ್ದರಾಮನಹುಂಡಿಯ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಿದ ಸಿಎಂ ಜನರೊಂದಿಗೆ ಬೆರೆತರು.
ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಹುಟ್ಟೂರಿನಲ್ಲಿ ವಾಸ್ತವ್ಯ ಹೂಡಿದ ಸಿದ್ದರಾಮಯ್ಯ ದೇವಾಲಯವನ್ನು ವೀಕ್ಷಣೆ ಮಾಡಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ವೀಕ್ಷಿಸಿದರು.[ಶಿರಸಿ ಮಾರಿಕಾಂಬಾ ಜಾತ್ರೆ ಸಂಭ್ರಮದ ಚಿತ್ರಗಳು]
ಗ್ರಾಮದಲ್ಲಿ ಪ್ರತಿವರ್ಷ ಹಲವಾರು ಹಬ್ಬ-ಹರಿದಿನಗಳು ನಡೆದರೂ ಸಿದ್ದರಾಮೇಶ್ವರ ಹಾಗೂ ಚಿಕ್ಕಮ್ಮದೇವಿ ಜಾತ್ರಾ ಮಹೋತ್ಸವ ನಡೆಯುವುದು ಮೂರು ವರ್ಷಕ್ಕೊಮ್ಮೆ ಮಾತ್ರ. ದೇವಸ್ಥಾನ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ 5 ವರ್ಷಗಳ ನಂತರ ವಿಜೃಂಭಣೆಯ ಜಾತ್ರೆ ಆಚರಿಸಲಾಗುತ್ತಿದ್ದು ಸಿಎಂ ಭಾಗವಹಿಸಿದ್ದರು.

ಸ್ನೇಹಿತರನ್ನು ಭೇಟಿ ಮಾಡಿದ ಸಿಎಂ
ಸಿಎಂ ಅವರ ಸ್ನೇಹಿತರು ಸೇರಿದಂತೆ ಗ್ರಾಮಸ್ಥರು ಸಿದ್ದರಾಮಯ್ಯ ಅವರನ್ನು ಮಾತಾಡಿಸಿದರು. ತಮ್ಮ ಹೊಸ ಮನೆಯ ಹೊರ ಭಾಗದ ಕಟ್ಟೆಯ ಮೇಲೆಯೇ ಕುಳಿತ ಸಿಎಂ ಹಳೆಯ ದಿನಗಳನ್ನು ಮೆಲುಕು ಹಾಕಿದರು.

ನಾಳೆಯೂ ಬನ್ನಿ
ಊರಲ್ಲಿ ಒಂದು ಸುತ್ತು ಹಾಕಿದ ಸಿಎಂ ದಾಸೋಹಕ್ಕೆ ತೆರಳಿ ಅಲ್ಲಿ ಊಟ ಮಾಡುತ್ತಿದ್ದ ಜನರನ್ನು ಮಾತಾಡಿಸಿದರು. ಜಾತ್ರೆಗೆ ಪ್ರತಿ ದಿನವೂ ಬರುವಂತೆ ಹೇಳಿದರು.

ಜಾನಪದ ನೃತ್ಯ ಸವಿದರು
ರಾತ್ರಿ 11.30 ರ ವೇಳೆಗೆ ಸಿದ್ದರಾಮೇಶ್ವರ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿದ ಸಿಎಂ, ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಜಾನಪದ ನೃತ್ಯ ವೀಕ್ಷಿಸಿದರು. ಹಾಡಿಗೆ ತಕ್ಕಂತೆ ಸಿಎಂ ಮೈ ಮರೆತಿದ್ದು ಕಂಡುಬಂತು.

ಶನಿವಾರ ಮುಕ್ತಾಯ
ಜಾತ್ರೆ ಶನಿವಾರ ಮುಕ್ತಾಯವಾಗಲಿದೆ. ಸಿದ್ದರಾಮಯ್ಯ ಶುಕ್ರವಾರ ಸಹ ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ಜನರ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಿತ್ತು.












Click it and Unblock the Notifications