ಮೈಸೂರು: ಮುಂಚಿತವಾಗಿ ತೆರೆವ ಬಾರ್ ಮೇಲೆ ಅಧಿಕಾರಿಗಳ ದಾಳಿ
ಮೈಸೂರು, ಜುಲೈ 18: 'ನಗರದಲ್ಲಿ ಬೆಳ್ಳಂಬೆಳಿಗ್ಗೆ 6 ಗಂಟೆಗೆ ಬಾರ್ ಗಳು ಓಪನ್ ಆಗಲಿವೆ ಎಂಬ ಸಾರ್ವಜನಿಕರ ದೂರಿನನ್ವಯ ಇಂದು(ಜುಲೈ 18) ಬಾರ್ ಗಳ ಮೇಲೆ ನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ನಿಗದಿಗೂ ಮುನ್ನ ತೆರೆಯುವ ಬಾರ್ ಗಳಿಗೆ ಪಾಲಿಕೆ ಆರೋಗ್ಯಾಧಿಕಾರಿ ದಿಢೀರ್ ದಾಳಿ ನಡೆಸಿದ್ದು, ಬಾರ್ ಮಾಲಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಿಗ್ಗೆ 6 ಗಂಟೆಗೆ ತೆರೆಯುವ ಬಾರ್ ಗಳ ಮೇಲೆ ಪಾಲಿಕೆ ಕೆಂಗಣ್ಣು ಬೀರಿದ್ದು, ಕಾಯ್ದೆ ಉಲ್ಲಂಘನೆ ಮಾಡೋ ಬಾರ್ ಗಳ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಖಾಸಗಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಎರಡು ಬಾರ್ ಗಳ ಮೇಲೆ ಏಕಾ ಏಕಿ ದಾಳಿ ನಡೆಸಿದ ಅಧಿಕಾರಿಗಳು ಬಾರ್ ಮಾಲೀಕರಿಗೆ ನೋಟೀಸ್ ನೀಡಿದ್ದಾರೆ. ಬೆಳ್ಳಂಬೆಳಿಗ್ಗೆ ಕುಡುಕರ ಹಾವಳಿ ತಪ್ಪಿಸಲು ಪಾಲಿಕೆ ಈ ಕ್ರಮ ಕೈಗೊಂಡಿದ್ದು, ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಚಾಮುಂಡಿ ವೈನ್ಸ್, ಎಸ್.ಬಿ.ವೈನ್ಸ್ ಮೇಲೆ ದಾಳಿ ನಡೆಸಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದ ಎರಡೂ ಬಾರ್ ಗಳಿಗೂ ನೋಟೀಸ್ ನೀಡಲಾಗಿದೆ.
ಫ್ಲೆಕ್ಸ್ ಗಳನ್ನು ಕಿತ್ತೆಸೆದ ಕಾರ್ಯಕರ್ತರು
ಪ್ರಧಾನಿ ಮೋದಿರವರು ಪ್ಲಾಸ್ಟಿಕ್ ಮುಕ್ತ ನಗರ ಮಾಡಬೇಕು ಎಂದು ಪಾಸ್ಟಿಕ್ ಅನ್ನು ಬ್ಯಾನ್ ಮಾಡಿದ್ದಾರೆ. ಆದರೆ ಮೈಸೂರಿನಲ್ಲಿ ರಾಜಸ್ಥಾನದಿಂದ ಬಂದು ಶಾಪಿಂಗ್ ಬಜಾರ್ ನಿರ್ಮಿಸಿದ್ದು, ಬಜಾರ್ ಮುಂಭಾದಲ್ಲಿ ಪ್ಲೇಕ್ಸ್ ಗಳನ್ನು ಹಾಕಲಾಗಿದೆ. ಮೊದಲು ಕನ್ನಡಕ್ಕೆ ಆದ್ಯತೆ ನೀಡದೆ ಪರಭಾಷೆಗಳ ಪ್ಲೆಕ್ಸ್ ಗಳನ್ನು ಹಾಕಿಕೊಂಡಿರುವುದನ್ನು ವಿರೋಧಿಸಿ ಕನ್ನಡ ಕ್ರಾಂತಿದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಕುವೆಂಪು ನಗರದ ಉದಯಗಿರಿ ರಸ್ತೆಯಲ್ಲಿರುವ ಜಯಗೋವಿಂದ್ ಕನ್ವೆನ್ಶನ್ ಹಾಲ್ ಮುಂಭಾಗ ಕಾರ್ಯಕರ್ತರು ಪರಭಾಷೆಯಲ್ಲಿ ರಾರಾಜಿಸುತ್ತಿದ್ದ ಪ್ಲೆಕ್ಸ್ ಗಳನ್ನು ತೆರವುಗೊಳಿಸಿದರು. ಈ ಸಂದರ್ಭ ಕನ್ನಡ ಕ್ರಾಂತಿ ದಳದ ಯುವ ಘಟಕದ ಅಧ್ಯಕ್ಷ ತೇಜಸ್ ಶಿವಕುಮಾರ್ ಮಾತನಾಡಿ ನಮ್ಮ ದೇಶ ಜ್ಯಾತ್ಯತೀತ ರಾಷ್ಟ್ರವಾಗಿದ್ದು, ಯಾರು ಬೇಕಾದರೂ ಬಂದು ಇಲ್ಲಿ ಬೆಳೆಯಬಹುದು. ರಾಜಸ್ಥಾನದಿಂದ ಮೈಸೂರಿಗೆ ಬಂದು ರಾಜಸ್ಥಾನಿ ವಸ್ತುಗಳ ಬಜಾರ್ ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ ಅದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಪರಭಾಷೆಯ ಪ್ಲೆಕ್ಸ್ ಹಾಕಿರುವುದಕ್ಕೆ ನಮ್ಮ ವಿರೋಧವಿದೆ. ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಬೇಕು ಎಂದರು.
ಬೇಕರಿ ಮೇಲೆ ಆಹಾರಾಧಿಕಾರಿಗಳ ದಾಳಿ
ಮೈಸೂರಿನ ಸರಸ್ವತಿ ಪುರಂ ನ ಬೇಕರಿಯೊಂದರಲ್ಲಿ ಹುಳು ಪತ್ತೆಯಾದ ಹಿನ್ನಲೆಯಲ್ಲಿ ಬೇಕರಿಗೆ ನಗರ ಪಾಲಿಕೆ ಆರೋಗ್ಯಾಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಬೇಕರಿಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ಮಾರಾಟ ಹಿನ್ನಲೆಯಲ್ಲಿ ಬೇಖರಿ ಮಾಲೀಕನಿಗೆ ನೋಟೀಸ್ ಜಾರಿಗೊಳಿಸಿದರು. ಬೇಕರಿ ಆಹಾರ ಪದಾರ್ಥಗಳನ್ನ ಖುದ್ದು ಪರಿಶೀಲನೆ ನಡೆಸಿದರು. ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ನೇತೃತ್ವದಲ್ಲಿ ದಾಳಿ ನಡೆದಿದೆ. ನಿನ್ನೆ(ಜುಲೈ 17) ತಾನೇ ಬೇಕರಿಯಲ್ಲಿ ನೀಡಿದ್ದ ಬನಾನ ಕೇಕ್ ನಲ್ಲಿ ಹುಳು ಪತ್ತೆಯಾಗಿತ್ತು. ಲೋಪ ಸರಿಪಡಿಸಿಕೊಳ್ಳಲು ಬೇಕರಿ ಮಾಲೀಕನಿಗೆ ಎಚ್ಚರಿಕೆ ನೀಡಲಾಗಿದೆ.
ರೂಪಾ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮ ವ್ಯವಹಾರಗಳನ್ನು ಬಯಲಿಗೆಳೆದಿರುವ ಡಿ.ಐ.ಜಿ.(ಕಾರಾಗೃಹ) ಆಗಿದ್ದ ಡಿ. ರೂಪಾರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ಮೈರು ರಕ್ಷಣಾ ವೇದಿಕೆ ಕಾರ್ಯಕರ್ತರು ಮೈಸೂರಿನ ನ್ಯಾಯಾಲಯದ ಬಳಿಯಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications