ಮೈಸೂರು ಮೇಯರ್ ಚುನಾವಣೆ; ಮೀಸಲಾತಿ ಪ್ರಕಟ
ಮೈಸೂರು, ಫೆಬ್ರವರಿ 12: ಭಾರೀ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಸಾಮಾನ್ಯ ಮಹಿಳೆಗೆ ಮೇಯರ್ ಸ್ಥಾನ ಹಾಗೂ ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರದ ಗದ್ದುಗೆ ಗುದ್ದಾಟಕ್ಕೆ ರಾಜಕೀಯ ಪಕ್ಷಗಳ ಕಸರತ್ತು ಶುರುವಾಗಲಿದೆ. ಮೂರು ಪಕ್ಷಗಳು ಪಾಲಿಕೆ ಮೇಯರ್ ಸ್ಥಾನಕ್ಕೇರುವ ಕನಸು ಕಂಡಿದ್ದರೂ, ಸಂಖ್ಯಾಬಲದ ಆಧಾರದಲ್ಲಿ ಮೇಯರ್ ಸ್ಥಾನ ಯಾರಿಗೆ ಒಲಿಯಲಿದೆ? ಎಂಬುದು ನಿರ್ಧಾರವಾಗಲಿದೆ. ಹೀಗಾಗಿ ಮೂರು ಪಕ್ಷಗಳಿಗೆ ಮೈತ್ರಿ ಅನಿವಾರ್ಯವಾಗಿದೆ.
ಮೈಸೂರಿನ ಪ್ರಥಮ ಪ್ರಜೆ ಯಾರಾಗಲಿದ್ದಾರೆ? ಎಂಬ ಕುತೂಹಲ ಹೆಚ್ಚಾಗಿದೆ. ಕಳೆದ ಅವಧಿಯಲ್ಲಿ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ದೋಸ್ತಿ ಈ ಬಾರಿ ಮುರಿದು ಬೀಳುವುದು ಬಹುತೇಕ ಸ್ಪಷ್ಟವಾಗಿದೆ. ಇದಕ್ಕೆ ಪೂರಕವೆಂಬಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ತಾವು ಈ ಬಾರಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಪಾಲಿಕೆ ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಆಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಪರಿಷತ್ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಂಡಿರುವ ಉಭಯ ಪಕ್ಷಗಳು ಪಾಲಿಕೆ ಚುನಾವಣೆಯಲ್ಲೂ ಇದೇ ಹೊಂದಾಣಿಕೆ ಮುಂದುವರಿಸುವ ಸಾಧ್ಯತೆ ಇದೆ. ಆದರೆ ಈವರೆಗೂ ತಾವು ಯಾರೊಂದಿಗೆ ಕೈ ಜೋಡಿಸುತ್ತೇವೆ ಎಂಬುದನ್ನು ಜೆಡಿಎಸ್ ನಾಯಕರು ಸ್ಪಷ್ಟಪಡಿಸಿಲ್ಲ.

ಜೆಡಿಎಸ್ ನಿರ್ಣಾಯಕ ಪಾತ್ರ
ಪಾಲಿಕೆಯಲ್ಲಿ ಹೆಚ್ಚು ಸದಸ್ಯರ ಸಂಖ್ಯಾಬಲ ಹೊಂದಿರುವ ಬಿಜೆಪಿ ಈ ಬಾರಿ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಬೇಕೆಂಬ ಕನಸು ಕಂಡಿದೆ. ಆದರೆ ಕಮಲ ಪಾಳೆಯದ ಬಹುವರ್ಷಗಳ ಈ ಕನಸು ನನಸಾಗಬೇಕಾದರೆ ಜೆಡಿಎಸ್ ಜೊತೆಗೆ ದೋಸ್ತಿ ಅನಿವಾರ್ಯವಾಗಿದೆ. ಹೀಗಾಗಿ ಪಾಲಿಕೆಯ ಅಧಿಕಾರದ ಗದ್ದುಗೆ ಏರುವಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರವಹಿಸಲಿದೆ.

ಮೈತ್ರಿ ಮಾಡಿಕೊಳ್ಳುವ ಕಸರತ್ತು
ಮೀಸಲಾತಿ ಪ್ರಕಟಕ್ಕೂ ಮೊದಲೇ ಆಡಳಿತದ ಚುಕ್ಕಾಣಿ ಹಿಡಿಯಲು ತೆರೆಮರೆಯ ಕಸರತ್ತು ನಡೆದಿದ್ದರೂ, ಇದೀಗ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಮೂರು ಪಕ್ಷದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಲಿವೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಮೂರು ಪಕ್ಷಗಳಲ್ಲೂ ಮೇಯರ್ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಅಂತಿಮವಾಗಿ ಯಾರಿಗೆ ಮೇಯರ್ ಪಟ್ಟ? ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.

ಮೇಯರ್ ಚುನಾವಣೆ ಲೆಕ್ಕಾಚಾರ
ಮೈಸೂರು ಮಹಾನಗರ ಪಾಲಿಕೆಯಲ್ಲಿ 65 ವಾರ್ಡ್ಗಳಿವೆ. ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್ಪಿ 1, ಪಕ್ಷೇತರರು 5 ಸದಸ್ಯರಿದ್ದಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದ ಸೇರಿ 73 ಜನರು ಮತದಾನ ಮಾಡಲಿದ್ದಾರೆ.

ಸಾ. ರಾ. ಮಹೇಶ್ ಭೇಟಿ
ಸೋಮವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಜೆಡಿಎಸ್ ಶಾಸಕ ಎಸ್. ಟಿ. ಸೋಮಶೇಖರ್ ನಿವಾಸಕ್ಕೆ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ್ದ ಅವರು, "ಸಾ. ರಾ. ಮಹೇಶ್ ಮೈಸೂರು ಭಾಗದ ನಾಯಕ ಎಂದು ಅವರ ವರಿಷ್ಠರು ಹೇಳಿದ್ದಾರೆ. ಹಾಗಾಗಿ ಅವರ ಬಳಿ ಮೈತ್ರಿಗೆ ಮನವಿ ಮಾಡುತ್ತೇವೆ. ಮೈತ್ರಿಯಾದರೆ ಮೇಯರ್ ಸ್ಥಾನ ಬಿಜೆಪಿಗೆ ನೀಡುವಂತೆ ಕೇಳಲಿದ್ದೇವೆ" ಎಂದು ಹೇಳಿದ್ದರು.












Click it and Unblock the Notifications