ಮೈಸೂರಿನಲ್ಲಿ ಕಾಂಗ್ರೆಸ್ ಗೆ ಮುಖಭಂಗ : ಜೆಡಿಎಸ್ ಜಯಭೇರಿ
ಮೈಸೂರು, ಜುಲೈ 5 : ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಗೆ ಮುಖ ಭಂಗವಾಗಿದೆ. ಹೌದು, ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 32 ರ ಉಪಚುನಾವಣೆಯಲ್ಲಿ ಜೆಡಿಎಸ್ ಭರ್ಜರಿ ಜಯಭೇರಿ ಬಾರಿಸಿದೆ. ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ.ಮಂಜು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಪ್ರಕಾಶ್ ಹೀನಾಯ ಸೋಲನುಭವಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸಿ. ಮಾದೇಶ್ ಅಲಿಯಾಸ್ ಅವ್ವಾ ಮಾದೇಶ್ ಸದಸ್ಯತ್ವ ರದ್ದಾದ ಹಿನ್ನೆಲೆ ಮೈಸೂರು ನಗರಪಾಲಿಕೆಯ 32ನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್ ಬಿಎಂ ಮಂಜು ಜಯ ಸಾಧಿಸಿದ್ದಾರೆ. ಸದಸ್ಯತ್ವ ರದ್ದಾದ ಪರಿಣಾಮ ಕಳೆದ ಭಾನುವಾರ ಉಪಚುನಾವಣೆ ನಡೆದಿತ್ತು.
ಮೈಸೂರು ಸಿಎಫ್ ಟಿಆರ್ ಐ ನಲ್ಲಿ ಕನ್ನಡಿಗರಿಗೆ ಕಿರುಕುಳ
ನಗರದ ಸಂಸ್ಕೃತ ಪಾಠಶಾಲೆಯಲ್ಲಿ ನಡೆದ ಮತಗಳ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಮಾದೇಶ್ ಗೆ 12 ಮತಗಳ ಮುನ್ನಡೆ ಸಾಧಸಿದ್ದರು. ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿ ಕೆ. ಮಾದೇಶ್, ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ. ಮಂಜು ನಡುವೆ ತೀವ್ರ ಹಣಾಹಣಿ ನಡೆದಿತ್ತು. ಜೆಡಿಎಸ್ ನಿಂದ ಎಸ್.ಬಿ.ಎಂ. ಮಂಜು, ಬಿಜೆಪಿ ಯಿಂದ ಕೆ. ಮಾದೇಶ್, ಕಾಂಗ್ರೆಸ್ ನಿಂದ ಮಾಜಿ ಮೇಯರ್ ಬಿ.ಕೆ ಪ್ರಕಾಶ್ ಕಣಕ್ಕಿಳಿದಿದ್ದರು.
ವಾರ್ಡ್ 32ರಲ್ಲಿ ಒಟ್ಟು 10,258 ಮತದಾರರಿದ್ದು 4,923 ಮತದಾರರು ಮತ ಚಲಾಯಿಸಿದ್ದರು. ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ ಮಂಜು ಗೆ 2424, ಬಿಜೆಪಿ ಅಭ್ಯರ್ಥಿ ಕೆ ಮಾದೇಶ್ ಗೆ 2117, ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಪ್ರಕಾಶ್ ಗೆ 329 ಮತಗಳು ಲಭಿಸಿವೆ. ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ ಮಂಜು, ಬಿಜೆಪಿ ಅಭ್ಯರ್ಥಿ ಕೆ. ಮಾದೇಶ್ ವಿರುದ್ಧ 309 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಪ್ರಕಾಶ್ ಠೇವಣಿ ಕಳೆದುಕೊಂಡಿದ್ದಾರೆ.
ವಿಜಯಯೋತ್ಸವ ಆಚರಣೆ:
ಜೆಡಿಎಸ್ ಗೆಲುವು ಸಾಧಿಸುತ್ತಿದಂತೆ ಮತ ಕೇಂದ್ರದ ಮುಂದೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಗೆದ್ದ ಅಭ್ಯರ್ಥಿಯನ್ನು ಹೆಗಲು ಮೇಲೆ ಕುರಿಸಿಕೊಂಡು ವಿಜಯೋತ್ಸವ ಆಚರಿಸಿದರು