ಮೊಬೈಲ್ ನಾಪತ್ತೆಯಾಗಿದ್ದಕ್ಕೆ ಅಪಹರಣದ ನಾಟಕವಾಡಿದ ಮೈಸೂರಿನ ಮಕ್ಕಳು
ಮೈಸೂರು, ಜೂನ್ 27 : ಕಳೆದೆರಡು ದಿನಗಳ ಹಿಂದಷ್ಟೇ ಮೈಸೂರಿನ ಜನರಲ್ಲಿ ಆತಂಕ ಸೃಷ್ಟಿಸಿದ್ದ 3 ಮಕ್ಕಳ ಅಪಹರಣದ ಸುದ್ದಿ ಇದೀಗ ಹೊಸ ತಿರುವು ಪಡೆದಿದೆ. ತಾವು ಆಟವಾಡುತ್ತಿದ್ದ ಮೊಬೈಲ್ ಕಾಣೆಯಾಯಿತೆಂದು, ಮನೆಜನರಿಂದ ಬೈಸಿಕೊಳ್ಳಬೇಕಾಗುತ್ತದೆಂದು ಹೆದರಿದ ಮಕ್ಕಳೇ ಮನೆಬಿಟ್ಟು ಹೋಗಿ ಅಪಹರಣದ ನಾಟಕವಾಡಿದ್ದರು ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.
ಜೂನ್ 25ರಂದು ಮೈಸೂರಿನಿಂದ ಮನೆ ಬಿಟ್ಟು ಹೋಗಿದ್ದ ಮಕ್ಕಳು ನಂಜನಗೂಡು ತಾಲೂಕಿನ ಕವಲಂದೆ ಹೋಬಳಿಯಲ್ಲಿ ಪತ್ತೆಯಾಗಿದ್ದಾರೆ. ಯಾಸೀನ್, ಅನ್ನಾನ್, ಮುನ್ನಾನ್ ಮನೆ ಬಿಟ್ಟು ಹೋಗಿ ಪತ್ತೆಯಾದ ಮಕ್ಕಳು. ಯಾಸೀನ್ ಮನೆಯಿಂದ ಮೊಬೈಲ್ ತಂದು ಆಟವಾಡುತ್ತಿದ್ದಾಗ ಈತನ ಜೊತೆಗೂಡಿದ ಅನ್ನಾನ್ ಮತ್ತು ಮುನ್ನಾನ್ ಅವರು ಕೂಡ ಆಟವಾಡಿದ್ದಾರೆ.
ನಂತರ ಮಧ್ಯಾಹ್ನವಾದ್ದರಿಂದ ಈ ಮೂವರು ನಮಾಜ್ಗೆ ತೆರಳಿದ್ದಾರೆ. ನಮಾಜ್ ಮುಗಿಸಿ ವಾಪಸ್ ಬರುವಾಗ ಮೊಬೈಲ್ ಕಳೆದು ಹೋಗಿದ್ದರಿಂದ ಹೆದರಿದ ಯಾಸಿನ್, ತನ್ನ ಇಬ್ಬರು ಸ್ನೇಹಿತರೊಂದಿಗೆ ಅಪಹರಣ ನಾಟಕ ಸೃಷ್ಟಿ ಮಾಡಿ, ನಂಜನಗೂಡು ತಾಲೂಕಿನ ಮೂಲಕ ಕವಲಂದೆಗೆ ತೆರಳಿದ್ದಾರೆ.
ಮೈಸೂರಿನಲ್ಲಿ ಮತ್ತೆ ಹೆಡೆಯೆತ್ತಿದ ಮಕ್ಕಳ ಮಾರಾಟ ಜಾಲ
ನಂತರ ಈ ಮೂವರು ಒಟ್ಟಿಗೆ ಇದ್ದು ಕಾಣದೇ ಇದ್ದುದ್ದರಿಂದ ಗಾಬರಿಗೊಂಡ ಪೋಷಕರು ತಕ್ಷಣ ಉದಯಗಿರಿ ಠಾಣೆಗೆ ತೆರಳಿ, ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಹೈ ಅಲಟ್೯ ಆದ ಪೊಲೀಸರು ಎಲ್ಲ ಠಾಣೆಗಳಿಗೆ ಸಂದೇಶ ರವಾನಿಸಿದ್ದಾರೆ.
ಈ ಮೂವರು ಮಕ್ಕಳು ಕವಲಂದೆ ಬಸ್ ನಿಲ್ದಾಣದ ಬಳಿ ನಿಂತಿದ್ದನ್ನು ಕಂಡ ಅಲ್ಲಿಯ ಸಂಬಂಧಿಗಳು, ತಕ್ಷಣ ಅವರ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಅವರ ಪೋಷಕರು ಸಂಬಂಧಿಗಳಿಗೆ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ.
ಅದರಂತೆ ಸಂಬಂಧಿಗಳು ಮಕ್ಕಳ ಮನವೊಲಿಸಿ ಅವರ ಮನೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿದ್ದಾರೆ. ಪೋಷಕರು ಅಲ್ಲಿಗೆ ತೆರಳಿ ಮಕ್ಕಳು ಆಡಿದ ನಾಟಕ ತಿಳಿದುಕೊಂಡು ಬುದ್ಧಿವಾದ ಹೇಳಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾರೆ.