ಮೈಸೂರಿನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 34 ಜಾನುವಾರುಗಳು ವಶ
ಮೈಸೂರು, ಜುಲೈ 18: ಕಸಾಯಿಖಾನೆಗೆ ಸಾಗಿಸುತ್ತಿದ್ದ 34 ಜಾನುವಾರುಗಳನ್ನು ರಕ್ಷಿಸಿ, ಇಬ್ಬರನ್ನು ಮೈಸೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರಿನ ಶುಭೋದಿನಿ ಕನ್ವೆನ್ಷನ್ ಹಾಲ್ ಬಳಿ ಹೆಬ್ಬಾಳು ರಿಂಗ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಮೈಸೂರಿನ ಲಷ್ಕರ್ ಮೊಹಲ್ಲಾ, ಮಹಮದ್ ಸೇಠ್ ಬ್ಲಾಕ್ ನಿವಾಸಿ ಫಾರೂಕ್ (30) ಹಾಗೂ ಮೈಸೂರು ತಾಲ್ಲೂಕು, ಕಾಮನಕೆರೆ ಹುಂಡಿ ಬಳಿಯ ಅಮೃತ ಬಡಾವಣೆ ನಿವಾಸಿ ಮೌಸಿನ್ (35) ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೆ.ಆರ್. ನಗರ ತಾಲ್ಲೂಕಿನ ಚುಂಚನಕಟ್ಟೆ ಕಡೆಯಿಂದ ಮೈಸೂರಿನ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಬೊಲೆರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡು ಪಿಂಜರಾ ಪೋಲ್ ಸೊಸೈಟಿಗೆ ಒಪ್ಪಿಸಿದ್ದಾರೆ.

ಅನಧಿಕೃತವಾಗಿ 34 ದನಕರುಗಳನ್ನು ಸಾಗಿಸುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿ ಹೆಬ್ಬಾಳು ಠಾಣೆ ಪೊಲೀಸರಿಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಡಿಸಿಪಿ ಎಂ.ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಬಿ.ಆರ್. ಲಿಂಗಪ್ಪ, ಇನ್ಸ್ ಪೆಕ್ಟರ್ ಎ.ಮಲ್ಲೇಶ್, ಸಿಬ್ಬಂದಿ ರಾಜು, ಜೋಸೆಫ್, ನರೋನ, ಪುರುಷೋತ್ತಮ್, ಅರುಣ್, ರಘು, ಮೋಹನ್ ಹಾಗೂ ಶ್ರೀನಿವಾಸ ಪ್ರಸಾದ್ ಭಾಗಿಯಾಗಿದ್ದರು.












Click it and Unblock the Notifications