ಮೈಸೂರಿನ ವಿಮಾನ ನಿಲ್ದಾಣಕ್ಕೆ ನಟ ಅಂಬರೀಶ್ ಹೆಸರಿಡುವಂತೆ ಒತ್ತಾಯ
ಮೈಸೂರು, ಡಿಸೆಂಬರ್ 9 : ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿಡಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಮನವಿ ಮಾಡಿದ್ದಾರೆ.
ಅಂಬರೀಶ್ ಅವರ ಸ್ಮರಣೆ ಅಂಗವಾಗಿ ರೆಬೆಲ್ ಸ್ಟಾರ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬರೀಶ್ ಮೂಲ ಮಂಡ್ಯವಾದರೂ ಅವರು ಹುಟ್ಟಿ, ಬೆಳೆದಿದ್ದು ಮೈಸೂರಿನಲ್ಲಿ. ರಾಜಕಾರಣ ನಿಮಿತ್ತ ಮಂಡ್ಯ ಜಿಲ್ಲೆಗೆ ತೆರಳಿದರು. ಮೈಸೂರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬರೀಶ್ ಹೆಸರಿನಲ್ಲಿ ಮೈಸೂರಿನಲ್ಲಿ ಇಲ್ಲಿಯವರೆಗೂ ಏನು ಕೂಡ ಮಾಡಿಲ್ಲ ಎಂದರು.
ಹಾಗಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಕಲಾ ಜಗತ್ತಿನ ಸೇವೆಯನ್ನು ಸ್ಮರಿಸಬೇಕು ಎಂದು ಹೇಳಿದರು.

ಸಂಘದ ಸಂಚಾಲಕಿ ರಾಣಿ ಮಾತನಾಡಿ, ಅಂಬರೀಶ್ ಅವರನ್ನು ಮಾತಿಗೆ ಅಷ್ಟೇ ಕರ್ಣ ಎಂದು ಕರೆಯುತ್ತಿರಲಿಲ್ಲ. ನಿಜವಾಗಿಯೂ ಕರ್ಣನ ಮಾದರಿಯಲ್ಲೇ ಜೀವನ ನಡೆಸಿದರು. ಶಿವರಾಂಪೇಟೆಯ ಅನೇಕ ಅಸಹಾಯಕರಿಗೆ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮದ ಅಂಗವಾಗಿ ಗಿಡ ನೆಟ್ಟು ಹಾಗೂ ಮಕ್ಕಳಿಗೆ ಪುಸ್ತಕ ಸಾಮಗ್ರಿಗಳನ್ನು ವಿತರಿಸಲಾಯಿತು.












Click it and Unblock the Notifications