ಮೈಸೂರು-ಬೆಂಗಳೂರು ವಿಮಾನ ಸಂಚಾರ ಸ್ಥಗಿತ
ಮೈಸೂರು, ಅ, 24 : ಮೈಸೂರಿಗರಿಗೆ ದೀಪಾವಳಿ ವೇಳೆಗೆ ಕಹಿಸುದ್ದಿಯೊಂದು ಕಾದಿದೆ. ಬೆಂಗಳೂರು-ಮೈಸೂರು ನಡುವಿನ ವಿಮಾನ ಸಂಚಾರವನ್ನು ರದ್ದುಗೊಳಿಸಲು ಸ್ಪೈಸ್ ಜೆಟ್ ತೀರ್ಮಾನಿಸಿದೆ. ಅ.27 ರಿಂದ ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ.
ತನ್ನ ವಿಮಾನ ಹಾರಾಟದ ಸಮಯವನ್ನು ಪರಿಷ್ಕರಣೆ ಮಾಡಿರುವ ಸ್ಪೈಸ್ ಜೆಟ್ ಅ.27ರಿಂದ ಮೈಸೂರು-ಬೆಂಗಳೂರು ನಡುವಿನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಆದರೆ, ಮೈಸೂರು ಚೆನ್ನೈ ನಡುವಿನ ವಿಮಾನ ಸಂಚಾರ ಎಂದಿನಂತೆ ಇರುತ್ತದೆ.

ಸಮಯ ಪರಿಷ್ಕರಣೆಯಾದ ನಂತರ ಸ್ಪೈಸ್ ಜೆಟ್ ವಿಮಾನ, ಬೆಳಗ್ಗೆ 10.30ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿದೆ. 10.50ಕ್ಕೆ ಇಲ್ಲಿಂದ ಪ್ರಯಾಣ ಬೆಳಸಲಿದೆ. ಇದರಿಂದಾಗಿ ಮೈಸೂರು-ಬೆಂಗಳೂರು ನಡುವಿನ ವಿಮಾನ ಸಂಚಾರಕ್ಕೆ ಮತ್ತೆ ಬ್ರೇಕ್ ಬಿದ್ದಿದೆ.
ಮೈಸೂರಿನ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ 2010ರಲ್ಲಿ ಪ್ರಾರಂಭವಾಗಿತ್ತು. ಮೊದಲು ಕಿಂಗ್ ಫಿಷರ್ ಮೈಸೂರು-ಬೆಂಗಳೂರು ವಿಮಾನ ಹಾರಾಟ ಪ್ರಾರಂಭಿಸಿತ್ತು. ಆದರೆ, ನಂತರ ಕಿಂಗ್ ಫಿಷರ್ ಸಂಸ್ಥೆ ನಷ್ಟ ಅನುಭವಿಸಿದ ನಂತರ ಹಾರಾಟ ನಿಲ್ಲಿಸಲಾಗಿತ್ತು. ಸದ್ಯ ಸ್ಪೈಸ್ ಜೆಟ್ ಸಹ ತನ್ನ ಹಾರಾಟ ನಿಲ್ಲಿಸಿ ಮೈಸೂರಿಗೆ ಕಹಿ ಸುದ್ದಿ ನೀಡಿದೆ.
ಮೈಸೂರು ವಿಮಾನ ನಿಲ್ದಾಣದ ಕಥೆ : ಮೈಸೂರಿನಲ್ಲಿ ವಿಮಾನ ನಿಲ್ದಾಣವಿದ್ದರೂ ವಿಮಾನಗಳೇ ಹಾರಾಡುತ್ತಿಲ್ಲ ಎಂಬ ಕೊರಗು ಬಹಳ ವರ್ಷಗಳಿಂದ ಇತ್ತು. 2010 ಅಕ್ಟೋಬರ್ 1ರಿಂದ ವಿಜಯ್ ಮಲ್ಯ ಒಡೆತನದ ಕಿಂಗ್ಫಿಷರ್ ವಿಮಾನ ಮೈಸೂರಿನಿಂದ ಬೆಂಗಳೂರು ಮೂಲಕ ಚೆನ್ನೈಗೆ ಹಾರಾಟ ಆರಂಭಿಸಿತು, ನಂತರ ಅದು ಸ್ಥಗಿತಗೊಂಡಿತು.
ವಿಮಾಣ ನಿಲ್ದಾಣದ ಹಾಲಿ ರನ್ ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿದೆ ಎನ್ನಬಹುದಾದರೂ ಸುರಕ್ಷತೆ ಬಗ್ಗೆ ಅಪಸ್ವರ ಇದೆ. ಎರಡನೇ ಹಂತದಲ್ಲಿ ಈ ರನ್ವೇಯನ್ನು 2.4ಕಿ.ಮೀ.ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಇದಕ್ಕಾಗಿ 333 ಎಕರೆ ಭೂಮಿ ಅಗತ್ಯವಿದ್ದು, ಇದರಲ್ಲಿ 188 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚಿಸಿದ್ದರು.
ಅಗತ್ಯ ಭೂಮಿ ಲಭ್ಯವಾದ ಕೂಡಲೇ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಅಜಿತ್ ಸಿಂಗ್ 2013 ಮಾರ್ಚ್ ನಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಎಚ್. ವಿಶ್ವನಾಥ ಅವರ ಪ್ರಶ್ನೆಗೆ ಉತ್ತರಿಸುವಾಗ ತಿಳಿಸಿದ್ದರು. ನಿಲ್ದಾಣಕ್ಕೆ ಅಗತ್ಯವಿರುವ ಭೂಮಿ ವಶಪಡಿಸಿಕೊಳ್ಳಲು ತುರ್ತುಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಪಶ್ಚಿಮ ಭಾಗದಲ್ಲಿ ಆಗುವುದಿಲ್ಲ. ಏಕೆಂದರೆ ವಿಮಾನ ನಿಲ್ದಾಣ ಹಿಂಭಾಗದಲ್ಲೇ ರೈಲ್ವೆ ಮಾರ್ಗ ಇರುವುದರಿಂದ ಇದು ಸಾಧ್ಯವಿಲ್ಲ. ಪೂರ್ವ ದಿಕ್ಕಿನಲ್ಲಿ ಅಭಿವೃದ್ಧಿ ಅವಕಾಶವಿದ್ದು. ಆ ಭಾಗದಲ್ಲೇ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರು. ಸದ್ಯ ತವರು ಜಿಲ್ಲೆಯ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸುವ ಹೊಣೆ ಸಿಎಂ ಮೇಲಿದೆ.












Click it and Unblock the Notifications