ಹೊಸ ವರ್ಷಾಚರಣೆ ಹಿನ್ನೆಲೆ ಮೈಸೂರಿನ ದೇವಸ್ಥಾನದಲ್ಲಿ 2 ಲಕ್ಷ ಲಡ್ಡು ವಿತರಣೆ
ಮೈಸೂರು, ಜನವರಿ 1: ಹೊಸ ವರ್ಷಾಚರಣೆಯ ಪ್ರಯುಕ್ತ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಜಾವ 4 ರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ದೇವಸ್ಥಾನಕ್ಕೆ ಭೇಟಿ ನೀಡಿದ ಸಾವಿರಾರು ಮಂದಿಗೆ ಲಡ್ಡು ಮತ್ತು ಪುಳಿಯೊಗರೆ ವಿತರಿಸಲಾಯಿತು.
ಹೊಸ ವರ್ಷಾರಣೆ ಸಂಬಂಧ ಕಳೆದ ಹಲವಾರು ವರ್ಷಗಳಿಂದ ತಪ್ಪದೇ ಲಡ್ಡು ಪ್ರಸಾದ ವಿತರಣೆಯ ಕಾರ್ಯವನ್ನು ಭಾಷ್ಯಂ ಸ್ವಾಮೀಜಿ ನೆರವೇರಿಸಿಕೊಂಡು ಬರುತ್ತಿದ್ದು, ಈ ಬಾರಿ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ಸ್ವಾಮೀಜಿಯವರೇ ಸಾರ್ವಜನಿಕರಿಗೆ ವಿತರಿಸಿದರು.

ಮುಂಜಾನೆ 4.30ರಿಂದಲೇ ಸರತಿ ಸಾಲಿನಲ್ಲಿ ನಿಂತ ಸಾರ್ವಜನಿಕರು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇವಾಲಯದ ಶೀ ಯೋಗಾನರಸಿಂಹಸ್ವಾಮಿ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, ಶ್ರೀ ರಂಗಕ್ಷೇತ್ರದಿಂದ ತರಿಸಿರುವ ವಿಶೇಷ ಹೂಮಾಲೆ ಮತ್ತು ಸ್ವರ್ಣಪುಷ್ಪದಿಂದ ಅಲಂಕರಿಸಲಾಗಿತ್ತು.

ಹೊಸ ವರ್ಷದ ಸಂಬಂಧ ಈ ಬಾರಿ ದೇವಸ್ಥಾನಕ್ಕೆ ಬರುವವರಿಗಾಗಿ ಎರಡು ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ ಎಂದು ಹೇಳಿದ ಪ್ರೊ.ಭಾಷ್ಯಂ ಸ್ವಾಮೀಜಿ ಅವರು, ರಾತ್ರಿ 12ರವರೆಗೂ ಪ್ರಸಾದ ವಿತರಣೆ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಉಚಿತವಾಗಿ ಲಾಡು ವಿತರಣೆ ಮಾಡಲಾಗುತ್ತಿದೆ. ಎರಡು ಲಕ್ಷ ಲಾಡುಗಳನ್ನು ತಯಾರಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.












Click it and Unblock the Notifications