ಮೈಸೂರು: ಮಕ್ಕಳು ಸಂಚಾರ ನಿಯಮ ಪಾಲಿಸಲೆಂದು ನಿರ್ಮಾಣವಾಯ್ತು ಪಾರ್ಕ್
ಮೈಸೂರು, ಜುಲೈ.17: ಜಿಲ್ಲೆಯಲ್ಲಿ ಮಕ್ಕಳಿಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೆಂದು ಮೈಸೂರು ಪೊಲೀಸರು ಪಾರ್ಕ್ ವೊಂದನ್ನು ಮಾಡಿದ್ದಾರೆ. ಇಲ್ಲಿ ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಹಲವಾರು ಫಲಕಗಳು, ಆಟಿಕೆಗಳು ಹಾಗೂ ವಿಡಿಯೋ ತುಣುಕಗಳ ಮೂಲಕ ಸಂಚಾರ ನಿಯಮಗಳ ಬಗ್ಗೆ ಮಕ್ಕಳಿಗೆ ಇಲ್ಲಿ ಅರಿವು ಮೂಡಿಸಲಾಗುತ್ತದೆ. ಮಕ್ಕಳಿಗೆ ಶಾಲಾ ದಿನಗಳಿಂದಲೇ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ನಗರದ ಪೊಲೀಸ್ ಆಯುಕ್ತರ ಕಚೇರಿ ಬಳಿ ಇರುವ ಯೆಜ್ಡಿ ಮಕ್ಕಳ ಉದ್ಯಾನವನವನ್ನು ಮಕ್ಕಳ ಸಂಚಾರ ಉದ್ಯಾನವನ್ನಾಗಿ ಪರಿವರ್ತಿಸಲಾಗಿದೆ.
ಈ ಉದ್ಯಾನವನ್ನು 1981ರಲ್ಲಿ ಐಡಿಯಲ್ ಜಾವಾ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಹಾಗೂ ಸಮಾಜ ಸೇವಕ ಎಫ್. ಕೆ.ಇರಾನಿ ಮಕ್ಕಳಿಗಾಗಿ ಅಭಿವೃದ್ಧಿಪಡಿಸಿದರು. 4 ಎಕರೆಯಲ್ಲಿ ಹರಡಿರುವ ಈ ಉದ್ಯಾನದಲ್ಲಿ ವಿವಿಧ ಸರ್ಕಾರಿ ಕಚೇರಿಗಳ ಮಾದರಿಗಳನ್ನು ನಿರ್ಮಿಸಲಾಯಿತು.

ಅಂಚೆ ಕಚೇರಿ, ರೈಲು ನಿಲ್ದಾಣ, ಶಾಲೆ, ಮಾರುಕಟ್ಟೆ, ಪೊಲೀಸ್ ಠಾಣೆ ಮತ್ತು ದೇವಸ್ಥಾನದ ಮಾದರಿ ಕಟ್ಟಡಗಳು ಮಕ್ಕಳಿಗೆ ಕೈಗೆಟುಕುವಷ್ಟು ಎತ್ತರದಲ್ಲಿ ನಿರ್ಮಿಸಲಾಯಿತು.
ನಂತರ, 2007ರಲ್ಲಿ ಈ ಉದ್ಯಾನವನ್ನು ನಗರ ಸಂಚಾರ ದಳದ ಪೊಲೀಸರು ನವೀಕರಿಸಿದರು. ಇದೀಗ ಸಂಚಾರ ಪೊಲೀಸರು ಬಳಸುವಂಥ ಆಧುನಿಕ ಪರಿಕರಗಳನ್ನು ಸಂಚಾರ ವಿಭಾಗದ ಡಿಸಿಪಿ ಆಗಿರುವ ಡಾ.ವಿಕ್ರಂ ವಿ.ಅಮಟೆ ಇಲ್ಲಿರಿಸಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಸಂಚಾರ ನಿಯಮಗಳ ಕುರಿತು ಇನ್ನಷ್ಟು ಅರಿವು ಮೂಡಿಸುವ ಪ್ರಯತ್ನ ನಡೆದಿದೆ.

ಮಕ್ಕಳ ಹೃದಯಗಳ ಮೂಲಕ ಜಾಗೃತಿ' ಎಂಬ ಘೋಷಣೆಯಡಿ ಪ್ರತಿ ವಾರಕ್ಕೆ ಎರಡು ದಿನ ನಗರದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದು ಅವರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಶಾಲಾ ವಿದ್ಯಾರ್ಥಿಗಳನ್ನು ರಾಯಭಾರಿಗಳನ್ನಾಗಿ ಬಳಸಿಕೊಂಡು ಅವರ ಮೂಲಕ ಸಮಾಜಕ್ಕೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ.

ನವೀಕೃತ ಉದ್ಯಾನದಲ್ಲಿ ಏನೇನಿದೆ?
ಟ್ರಾಫಿಕ್ ಸಿಗ್ನಲ್ ಸಿಸ್ಟಂ, ಪೆಲಿಕಾನ್, ಸೋಲಾರ್ ಬ್ಲಿಂಕರ್, ಸಿಸಿ ಟಿವಿ ವ್ಯವಸ್ಥೆ, ಟಾಫಿಕ್ ಚಿಹ್ನೆಗಳು, ವಿಎಂಎಸ್ ಸಿಸ್ಟಂ ಇನ್ನು ಮುಂತಾದ ಮಾದರಿಗಳನ್ನು ಅಳವಡಿಸಿ ಪ್ರದರ್ಶನಕ್ಕಿಡಲಾಗಿದೆ. ಪ್ರತ್ಯೇಕವಾಗಿ ಕೊಠಡಿಯೊಂದನ್ನು ನಿರ್ಮಿಸಲಾಗಿದ್ದು, ಇಲ್ಲಿ ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ವಿಡಿಯೋ ತುಣುಕುಗಳನ್ನು ತೋರಿಸುವ ವ್ಯವಸ್ಥೆ ಸಹ ಮಾಡಲಾಗಿದೆ.












Click it and Unblock the Notifications