ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಸರ್ಕಾರದ ಒಪ್ಪಿಗೆ
ಮೈಸೂರು, ಸೆ. 25 : ಮೈಸೂರು ವಿಮಾನ ನಿಲ್ದಾಣ ರನ್ವೇ ವಿಸ್ತರಣೆ ಮಾಡುವ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 500 ಕೋಟಿ ರೂ. ವೆಚ್ಚದಲ್ಲಿ ರನ್ವೇ ವಿಸ್ತರಣೆ ಸೇರಿದಂತೆ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ದಿನಗಳ ಹಿಂದೆ ಉನ್ನತ ಮಟ್ಟದ ಸಭೆ ನಡೆಸಿದ್ದು, ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸಲು ಒಪ್ಪಿಗೆ ನೀಡಿದ್ದಾರೆ. ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅಡ್ಡಿಯಾಗಿದ್ದ ಮೈಸೂರು-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಮಾರ್ಗ ಪರಿವರ್ತನೆ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ವಿಮಾನ ನಿಲ್ದಾಣದ ಕೆಳ ಭಾಗದಲ್ಲಿ ವಿದೇಶಿ ಮಾದರಿಯಲ್ಲಿ ಅಂಡರ್ಪಾಸ್ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. [ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ]

ವಿಮಾನ ನಿಲ್ದಾಣ ರನ್ವೇ ವಿಸ್ತರಣೆ ಕಾಮಗಾರಿಗೆ 500 ಕೋಟಿ ರೂ.ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಈ ಕಾಮಗಾರಿಗಾಗಿ 150 ರಿಂದ 200 ಎಕರೆ ಜಮೀನು ಅಗತ್ಯವಿದ್ದು, ಅದಕ್ಕಾಗಿ ರಾಷ್ಟ್ರೀಯ ಹೆದ್ದಾರಿಗೆ ಮೀಸಲಿಟ್ಟ ಜಮೀನು ವಶಪಡಿಸಿಕೊಳ್ಳಲಾಗುತ್ತದೆ. ಕಾಮಗಾರಿಗೆ ಅಡ್ಡಿಯಾಗಿದ್ದ ರಾಷ್ಟ್ರೀಯ ಹೆದ್ದಾರಿಯ ಮಾರ್ಗ ಪರಿವರ್ತನೆ ಬದಲು ವಿಮಾನ ನಿಲ್ದಾಣದ ಅಡಿಯಲ್ಲಿ ಹಾದು ಹೋಗುವಂತೆ ಅಂಡರ್ಪಾಸ್ ನಿರ್ಮಾಣ ಮಾಡುವ ಬಗ್ಗೆ ವರದಿ ತಯಾರಿಸಲು ಸಿಎಂ ಸೂಚನೆ ನೀಡಿದ್ದಾರೆ. [ಮಂಡಕಹಳ್ಳಿ ವಿಮಾನ ನಿಲ್ದಾಣದ ಬಗ್ಗೆ ಓದಿ]
ಮೈಸೂರು-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಮಾರ್ಗ ಪರಿವರ್ತನೆಗೆ ಜಮೀನು ಸ್ವಾಧೀನ ಸೇರಿದಂತೆ ಒಟ್ಟು 900 ಕೋಟಿ ಖರ್ಚಾಗಲಿದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವಿಮಾನ ನಿಲ್ದಾಣದ ಅಡಿಯಲ್ಲೇ ಅಂಡರ್ಪಾಸ್ ನಿರ್ಮಾಣ ಮಾಡಿದರೆ, 100 ಕೋಟಿ ವೆಚ್ಚವಾಗಬಹುದು ಎಂದು ತೀರ್ಮಾನಿಸಿ ಅದಕ್ಕೆ ಒಪ್ಪಿಗೆ ನೀಡಲಾಗಿದೆ.
ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ಕುರಿತು ಅನುಮತಿ ಪಡೆಯುವ ಹೊಣೆಯನ್ನು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಮೂಲ ಸೌಕರ್ಯ ಸಚಿವ ರೋಷನ್ಬೇಗ್ ಅವರಿಗೆ ವಹಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲೇ ಕಾಮಗಾರಿಯನ್ನು ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಸ್ತರಣೆ ಏಕೆ? : ಮೈಸೂರು ವಿಮಾನ ನಿಲ್ದಾಣದ ಹಾಲಿ ರನ್ ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿದೆ. ಆದರೆ, ಸುರಕ್ಷತೆ ಬಗ್ಗೆ ಅಪಸ್ವರ ಇದ್ದೇ ಇದೆ. ಎರಡನೇ ಹಂತದಲ್ಲಿ ಈ ರನ್ವೇಯನ್ನು 2.4ಕಿ.ಮೀ.ವಿಸ್ತರಿಸಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರ ನಿರ್ಧರಿಸಿತ್ತು.












Click it and Unblock the Notifications