ಮೈ ಕೊರೆಯುವ ಚಳಿಗೆ ತತ್ತರಿಸಿದ ಸಾಂಸ್ಕೃತಿಕ ನಗರಿ ಮೈಸೂರು
ಮೈಸೂರು, ನವೆಂಬರ್ 30: ಸಾಂಸ್ಕೃತಿಕ ನಗರಿ ಸದ್ಯ ಊಟಿಯಾಗಿ ಪರಿವರ್ತನೆಯಾಗಿದೆ. ಮುಂಜಾನೆ ಮೈಕೊರೆಯುವ ಚಳಿಯಲ್ಲಿ ನೀರು ಮುಟ್ಟಿದರೆ ಮೈಯೆಲ್ಲಾ ನಡುಕ. ನಗರದಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ಹೆಚ್ಚಿದೆ ಮಂಜುಕವಿದ ವಾತಾವರಣ. ಬೆಳಗ್ಗೆಯಾದರೆ ಥಂಡಿ. ಸಂಜೆಯಾದರೆ ಕೂಲ್ ಕೂಲ್...
ಚಳಿ ಚಳಿ ತಾಳೆನು ಈ ಚಳಿಯಾ... ಎಂಬ ಹಾಡಿನ ಸಾಲು ಕಳೆದ 15 ದಿನಗಳಿಂದ ದಿನಗಳಿಂದ ಕೆಲ ಜನರಿಗೆ ಹೆಚ್ಚು ನೆನಪಾಗುತ್ತಿದೆ. ಎರಡು ದಿನಗಳಿಂದ ವಾತಾವರಣದಲ್ಲಿ ಸಾಕಷ್ಟು ಏರುಪೇರು ಉಂಟಾಗಿದೆ. ನಿತ್ಯವೂ ಮುಂಜಾನೆ ನಾಲ್ಕು ಗಂಟೆಯಿಂದಲೇ ಕರ್ತವ್ಯಕ್ಕೆ ಸಜ್ಜಾಗುವ ಹಾಲು ಮಾರಾಟಗಾರರು, ಪತ್ರಿಕೆ ವಿತರಕರು ಚಳಿಗೆ ತತ್ತರಿಸಿ ಹೋಗುತ್ತಿದ್ದಾರೆ. ಸೊಪ್ಪು, ತರಕಾರಿ ವ್ಯಾಪಾರಸ್ಥರು, ಮಾರುಕಟ್ಟೆಗೆ ಬರುವಂತಹ ರೈತರು, ಗ್ರಾಹಕರೂ ಇದಕ್ಕೆ ಹೊರತಾಗಿಲ್ಲ.
ಇನ್ನೊಂದು ತಿಂಗಳು ಉದ್ಯಾನನಗರಿ ಬೆಂಗಳೂರಲ್ಲಿ ಚಳಿರಾಯಂದೇ ಹವಾ!
ಮೈ ಕೊರೆವ ಚಳಿಯಿಂದ ರಕ್ಷಣೆ ಪಡೆಯಲು ಮಕ್ಕಳು, ಮಹಿಳೆಯರು, ಯುವಸಮೂಹ, ಹಿರಿಯರು ಬೆಚ್ಚಗಿನ ಬಟ್ಟೆಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೆ, ಅಗತ್ಯ ಪರಿಕರ ಹಾಗೂ ಆಹಾರ ಸಾಮಗ್ರಿ ಖರೀದಿಯಲ್ಲಿ ಕೆಲವರು ಮಗ್ನರಾಗುತ್ತಿದ್ದಾರೆ. ಉಷ್ಣಾಂಶ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.
ಶೀತ ವಾತಾವರಣದಿಂದ ತಪ್ಪಿಸಿಕೊಳ್ಳಲು ಜನರು ಮನೆಯ ಬಾಗಿಲು ಹಾಕಿಕೊಂಡು ಬೆಚ್ಚಗಿರಲು ಪ್ರಯತ್ನಿಸುತ್ತಿದ್ದಾರೆ. ವಯಸ್ಸಾದವರು ಹೊರಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಮುಂದೆ ಓದಿ...
ತಾಪಮಾನ ಇಳಿಕೆ
ಮೈಸೂರಿನಲ್ಲಿ ಗುರುವಾರವಂತೂ ಮಧ್ಯಾಹ್ನ 12 ಗಂಟೆಯವರೆಗೂ ತಂಪು ಗಾಳಿ, ಮೈಕೊರೆಯುವ ಚಳಿಯಿತ್ತು. ಮಧ್ಯಾಹ್ನದ ವೇಳೆಗೆ ತಾಪಮಾನ ಹೆಚ್ಚುತ್ತದೆಯಾದರೂ ಸಂಜೆಯಾಗುತ್ತಿದ್ದಂತೆ ಮತ್ತೆ ತಾಪಮಾನ ಇಳಿಕೆಯಾಗುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಬೆಳಗ್ಗೆ ಮೋಡಕವಿದ ವಾತಾವರಣ ಇರುತ್ತದೆ.
ಆದರೆ ಕಳೆದೊಂದು ವಾರದಿಂದ ಚಳಿಯ ಅನುಭವ ಮಾತ್ರ ತೀವ್ರವಾಗುತ್ತಿದೆ. ಈ ತಿಂಗಳ ಅವಧಿಯಲ್ಲಿ ತಾಪಮಾನ ಒಂದೇ ಸಮನೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. 10 ದಿನಗಳ ಅಂತರದಲ್ಲಿ 16 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿದೆ.
ವಾಯುವಿಹಾರಕ್ಕೆ ಹೋಗುತ್ತಿಲ್ಲ
ಕಳೆದ ವರ್ಷ ಇದೇ ಅವಧಿಯಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಈ ಬಾರಿ ತಾಪಮಾನದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದಿದೆ. ಸಾಮಾನ್ಯವಾಗಿ ಜ.15ರ ಬಳಿಕ ನಗರದಲ್ಲಿ ಚಳಿಯ ಪ್ರಮಾಣ ಇಳಿಕೆಯಾಗುತ್ತದೆ. ಆದರೂ ಶಿವರಾತ್ರಿ ಕಳೆಯುವವರೆಗೂ ಚಳಿ ಇದ್ದೇ ಇರುತ್ತದೆ. ಆದರೆ ಈ ಬಾರಿ ನಗರದಾದ್ಯಂತ ನ. 24ರ ಬಳಿಕ ಚಳಿ ತೀವ್ರತೆ ಹೆಚ್ಚಾಗಿದೆ.
ಇದರಿಂದಾಗಿ ಚಾಮುಂಡಿಬೆಟ್ಟಕ್ಕೆ ಬೆಳ್ಳಂಬೆಳಗ್ಗೆಯೇ ವಾಯುವಿಹಾರಕ್ಕೆ ಹೋಗುವಂತಹ ವಯಸ್ಕರ, ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ.
ಬೆಂಗಳೂರಲ್ಲಿ ಕೊರೆವ ಚಳಿ, ರೋಗಗಳ ಭೀತಿ, ಸಲಹೆಗಳು
ಐತಿಹಾಸಿಕ ಸ್ಥಳಗಳಲ್ಲಿಯೂ ಚಳಿ
ಸೂರ್ಯ ನೆತ್ತಿಯ ಮೇಲೆ ಬಂದರೂ ಚಳಿ ಕಡಿಮೆ ಆಗುತ್ತಿಲ್ಲ. ಅಲ್ಲಲ್ಲಿ ಬಿದ್ದ ಪೇಪರ್, ಒಣಗಿದ ಮರದ ಎಲೆ, ಕಸಕಡ್ಡಿಗಳನ್ನು ಗುಡ್ಡೆ ಹಾಕಿ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಬೆಂಕಿ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ನಿಸರ್ಗ ರಮಣೀಯ ತಾಣವಾದ ಐತಿಹಾಸಿಕ ಸ್ಥಳಗಳಲ್ಲಿಯೂ ಈಗ ವಿಪರೀತ ಚಳಿಯ ಅನುಭವ.
ಬಿಸಿ ಬಿಸಿ ಕಾಫಿ
ಆಹಾ, ಎಂಥಹ ಚಳಿ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಮಾಗಿಯ ಚಳಿಯ ಮಜ ಸವಿಯಲು ಪ್ರವಾಸಿಗರು, ಪ್ರೇಮಿಗಳು ಕವಿವರ್ಣನೆಯ ಭೂರಮೆಗೆ ಕಾಲಿಟ್ಟರೆ, ಸ್ಥಳೀಯರು ಮಾತ್ರ ಚಳಿಯಿಂದ ಮುಕ್ತಿ ಪಡೆಯಲು ಸ್ವೆಟರ್, ಬಿಸಿಬಿಸಿ ಕಾಫಿ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಾರುಕಟ್ಟೆಗಳಿಗೆ ಬಗೆಬಗೆಯ ವಸ್ತುಗಳು ಲಗ್ಗೆಯಿಟ್ಟಿವೆ.