ಇಂದು ಸಂಜೆ 6 ರಿಂದ ಮೈಸೂರಿನಲ್ಲಿ ಸತತ 31 ಗಂಟೆಗಳ ಕಾಲ ಬಂದ್
ಮೈಸೂರು, ಜುಲೈ 4: ಸಾಂಸ್ಕೃತಿಕ ನಗರಿಯಲ್ಲಿ ಮುಂದುವರಿದ ಕೊರೊನಾ ವೈರಸ್ ಹಾವಳಿ ಮುಂದುವರೆದಿದೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬನಲ್ಲೂ ಸೋಂಕು ದೃಢಪಟ್ಟಿದ್ದು, ಕಾರಾಗೃಹದಲ್ಲಿ ಆತಂಕ ಶುರುವಾಗಿದೆ.
Recommended Video
ವಿಜಯನಗರದಲ್ಲಿ ನಡೆದಿದ್ದ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಏಳು ಮಂದಿಯನ್ನು ಬಂಧಿಸಿದ್ದು, ಅದರಲ್ಲಿ ಒಬ್ಬ ಆರೋಪಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಆರೋಪಿಯನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಜೈಲಿನಲ್ಲಿ ಆರೋಪಿಯಿದ್ದ ಸೆಲ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಉಳಿದ ಆರೋಪಿಗಳನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ. ಜಿಲ್ಲೆಯಲ್ಲಿ ಈ ನಡುವೆ ಮತ್ತಷ್ಟು ಕಡೆ ಪ್ರಕರಣಗಳು ಕಂಡುಬಂದಿವೆ.

ಕೆ.ಜಿ.ಕೊಪ್ಪಲಿನ ಮುಖ್ಯರಸ್ತೆ ಸೀಲ್ ಡೌನ್
ಹೈದರಾಬಾದ್ ನಿಂದ ವಾಪಸ್ಸಗಿದ್ದ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಶಂಕೆ ವ್ಯಕ್ತಗೊಂಡಿದ್ದು, ಕೆ.ಜಿ.ಕೊಪ್ಪಲಿನಲ್ಲಿ ಅಂಗಡಿ ಮುಂಗಟ್ಟು ಪೊಲೀಸರು ಬಂದ್ ಮಾಡಿಸಿದ್ದಾರೆ. ಮುಖ್ಯರಸ್ತೆಯ ಎರಡು ಬದಿಯನ್ನು ಬ್ಯಾರಿಕೇಡ್ ನಿಂದ ಬಂದ್ ಮಾಡಲಾಗಿದೆ. ಈ ಒಂದು ಪ್ರಕರಣದಿಂದ ಕೆ.ಜಿ.ಕೊಪ್ಪಲಿನ ಜನರಲ್ಲಿ ಆತಂಕ ಮಡುಗಟ್ಟಿದೆ.

ಮೈಸೂರಿನಲ್ಲಿ ಸತತ 31 ಗಂಟೆಗಳ ಕಾಲ ಬಂದ್
ಕೊರೊನಾ ವೈರಸ್ ನಿಯಂತ್ರಣ ಮಾಡಲು ಜಿಲ್ಲಾಡಳಿತ ಬಿಗಿ ಕ್ರಮಕ್ಕೆ ಮುಂದಾಗಿದ್ದು, ಇಂದು ಸಂಜೆ ಆರು ಗಂಟೆಯಿಂದಲೇ ಮೈಸೂರು ಬಂದ್ ಆಗಲಿದೆ. ನಾಳೆ ಔಷಧಿ, ಹಾಲು ಬಿಟ್ಟು ಉಳಿದವೂ ಬಂದ್ ಆಗಲಿದೆ. ಪಾರ್ಸಲ್ ನೀಡುವ ಹೋಟೆಲ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಕ್ರಮವಹಸಿಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಜಿಲ್ಲೆ ಗಡಿಯಲ್ಲಿ ಚೆಕ್ಪೋಸ್ಟ್ ನಿರ್ಮಾಣ ಕಾರ್ಯವೂ ನಡೆದಿದೆ.

ಐಜಿಪಿ ನಿವಾಸದ ಅಡುಗೆ ಮನೆ ಪ್ರವೇಶಿಸಿದ ಸೋಂಕು
ಮೈಸೂರು ದಕ್ಷಿಣ ವಲಯದ ಐಜಿಪಿ ನಿವಾಸದ ಅಡುಗೆ ಮನೆಯನ್ನೂ ಕೊರೊನಾ ವೈರಸ್ ಪ್ರವೇಶಿಸಿದೆ. ಐಜಿಪಿ ನಿವಾಸದ ಅಡುಗೆ ಭಟ್ಟನಿಗೂ ಸೋಂಕು ತಗುಲಿದ್ದು, ಅಡುಗೆ ಭಟ್ಟನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ನಿವಾಸವನ್ನು ಸೀಲ್ ಡೌನ್ ಮಾಡುವ ಕುರಿತು ಜಿಲ್ಲಾಡಳಿತ ಯೋಚಿಸುತ್ತಿದೆ.
ಜೊತೆಗೆ ಚೆಲುವಾಂಬ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಮಹಿಳೆಗೂ ಕೊರೊನಾ ಸೋಂಕು ತಗುಲಿದೆ. ಚೆಲುವಾಂಬದಲ್ಲಿ ದಾಖಲಾಗಿದ್ದ ಗರ್ಭಿಣಿಯರನ್ನು ಆಸುಪಾಸಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚೆಲುವಾಂಬ ಆಸ್ಪತ್ರೆಯ ಬಹುತೇಕ ವಾರ್ಡ್ ಗಳ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಎಚ್.ಡಿ.ಕೋಟೆಯಲ್ಲಿ ಶಾಸಕರಿಗೆ ಕ್ವಾರಂಟೈನ್
ಎಚ್. ಡಿ. ಕೋಟೆ ಶಾಸಕರು ಸೇರಿದಂತೆ ತಾಲೂಕಿನ ಪ್ರಮುಖ ಅಧಿಕಾರಿಗಳಿಗೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ. ಎಚ್.ಡಿ. ಕೋಟೆ ತಾಲೂಕು ಕಚೇರಿಯಲ್ಲಿ ನಡೆದ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಜೊತೆ ತಾಲೂಕು ತಹಶೀಲ್ದಾರ್, ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಇತರ ತಾಲೂಕಿನ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸರ್ಕಲ್ ಇನ್ಸಪೆಕ್ಟರ್ಗೆ ಕೊರೊನಾ ಸೋಂಕು ಬಂದ ಹಿನ್ನಲೆಯಲ್ಲಿ ಆ ಕಾರ್ಯಕ್ರಮದಲ್ಲಿದ್ದ ಶಾಸಕರು, ಅಧಿಕಾರಿಗಳು, 5 ಜನ ಪತ್ರಕರ್ತರು ಹಾಗೂ 20 ಪೊಲೀಸ್ ಸಿಬ್ಬಂದಿಗೆ ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದಾರೆ.












Click it and Unblock the Notifications