MUDA Case: ಲೋಕಾಯುಕ್ತ ತನಿಖೆ ಆರಂಭ, ಸ್ನೇಹಮಯಿ ಕೃಷ್ಣ ವಿಚಾರಣೆ
ಮೈಸೂರು, ಅಕ್ಟೋಬರ್ 01: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಎ-1 ಆರೋಪಿಯಾಗಿದ್ದು, ವಿಚಾರಣೆ ಕುತೂಹಲಕ್ಕೆ ಕಾರಣವಾಗಿದೆ. ಕೋರ್ಟ್ ಆದೇಶದಂತೆ ಲೋಕಾಯುಕ್ತರು ತನಿಖೆ ಆರಂಭಿಸಿದ್ದು, ಒಟ್ಟು 4 ತಂಡಗಳನ್ನು ರಚನೆ ಮಾಡಲಾಗಿದೆ.
ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿಚಾರಣೆಯನ್ನು ಪೊಲೀಸರು ಮಂಗಳವಾರ ನಡೆಸಲಿದ್ದಾರೆ. ಬೆಳಗ್ಗೆ 7.30ಕ್ಕೆ ಲೋಕಾಯುಕ್ತ ಕಚೇರಿಗೆ ಆಗಮಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಸೋಮವಾರ ಸ್ನೇಹಮಯಿ ಕೃಷ್ಣಗೆ ನೋಟಿಸ್ ನೀಡಿದ್ದರು.

ಸ್ನೇಹಮಯಿ ಕೃಷ್ಣ ಅಗತ್ಯ ದಾಖಲೆಗಳ ಜೊತೆ ಲೋಕಾಯುಕ್ತ ಮೈಸೂರು ಕಛೇರಿಗೆ ಆಗಮಿಸಿದ್ದಾರೆ. ಇಂದು ಎಷ್ಟು ಹೊತ್ತಿನ ತನಕ ಅವರ ವಿಚಾರಣೆ ನಡೆಯಲಿದೆ? ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಸ್ನೇಹಮಯಿ ಕೃಷ್ಣ ವಿಚಾರಣೆ ನಡೆಸಲು ಈಗಾಗಲೇ ಪೊಲೀಸರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಎಲ್ಲಾ ದಾಖಲೆ ನೀಡುತ್ತೇನೆ: ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, "ತನಿಖೆಗೆ ಯಾವ ಯಾವ ದಾಖಲೆ ಬೇಕಾಗಿದೆಯೋ ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ನೀಡಲು ನಾನು ಸಿದ್ದವಿರುವೆ. ತನಿಖೆ ವೇಳೆ ಏನು ಕೇಳುತ್ತಾರೋ ಆ ಮಾಹಿತಿ ನೀಡುತ್ತೇನೆ. ಸಾಕ್ಷ್ಯಗಳು ಇಲ್ಲದೇ ನಾನು ಯಾವುದೇ ಸುಳ್ಳು ಆರೋಪ ಮಾಡುವುದಿಲ್ಲ. ನಾನು ಈ ಹೋರಾಟದಲ್ಲಿ ಗೆಲ್ಲುತ್ತೇನೆ ಎಂದು ನನಗೆ ಭರವಸೆ ಇದೆ" ಎಂದರು.
ಲೋಕಾಯುಕ್ತ ಎಫ್ಐಆರ್ ದಾಖಲು ಬಳಿಕ ಎ-1 ಆರೋಪಿಯಾಗಿರುವ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, "ನನ್ನ ರಾಜಕೀಯ ಬದುಕಿನಲ್ಲಿ ನಯಾಪೈಸೆ ಭ್ರಷ್ಟ ಹಣಕ್ಕಾಗಿ ಕೈಚಾಚಿಲ್ಲ. ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೀನಿ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ. ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ" ಎಂದು ಹೇಳಿದ್ದರು.
"ಬಹಳ ಜನ ಬಂದು ಬಂದು ನನಗೆ ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ ಅಂತಾರೆ. ನಾನು ಷಡ್ಯಂತ್ರಗಳಿಗೆ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ತೇನೆ. ರಾಜಕೀಯವಾಗಿ ಇದನ್ನೆಲ್ಲಾ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ" ಎಂದು ತಿಳಿಸಿದರು.
ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತನಿಖೆ ನಡೆಸುವಂತೆ ಮೈಸೂರು ಲೋಕಾಯುಕ್ತ ಎಸ್ಪಿಗೆ ಸೂಚನೆ ನೀಡಿತ್ತು. ಮೂರು ತಿಂಗಳಿನಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಲೋಕಾಯುಕ್ತ ಪೊಲೀಸರು ವರದಿ ನೀಡಬೇಕಿದೆ.
ಕೋರ್ಟ್ ಆದೇಶವನ್ನು ಹಿಡಿದು ಎಫ್ಐಆರ್ ದಾಖಲು ಮಾಡಿ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರು ಲೋಕಾಯುಕ್ತ ಕಛೇರಿಗೆ ಸೆಪ್ಟೆಂಬರ್ 26ರಂದು ಹೋಗಿದ್ದರು. ಆದರೆ ಅಲ್ಲಿ ಎಸ್ಪಿ, ಇರಲಿಲ್ಲ, ಎಲ್ಲಿದ್ದಾರೆ ಎಂಬ ಮಾಹಿತಿಯೂ ಸಿಬ್ಬಂದಿಗೆ ಇರಲಿಲ್ಲ. ಆಗ ಅವರು ಎಸ್ಪಿಯೇ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದರು.
ಬಳಿಕ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದು ಸಿದ್ದರಾಮಯ್ಯ ಎ-1 ಆರೋಪಿ. ಸಿದ್ದರಾಮಯ್ಯ ಪತ್ನಿ ಪಾವರ್ತಿ ಎ-2 ಆರೋಪಿಯಾಗಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಎ-3 ಆರೋಪಿ ಮತ್ತು ದೇವರಾಜು ಜೆ. ಎ-4 ಆರೋಪಿಯಾಗಿದ್ದಾರೆ. ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆಗೆ 4 ತಂಡಗಳನ್ನು ರಚನೆ ಮಾಡಿದ್ದು, ಮೊದಲು ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆಯನ್ನು ಆರಂಭಿಸಿದ್ದಾರೆ.












Click it and Unblock the Notifications