ಯೋಗೇಶ್ವರ್ಗೆ ಮಂತ್ರಿ ಸ್ಥಾನ ಸಮರ್ಥಿಸಿಕೊಂಡ ಸಂಸದ ಶ್ರೀನಿವಾಸ ಪ್ರಸಾದ್
ಮೈಸೂರು, ಜನವರಿ 15: ಬಿಜೆಪಿ ಸರ್ಕಾರ ಬರಲು ಕಾರಣರಾದವರಲ್ಲಿ ಒಬ್ಬರಾದ ಸಿ.ಪಿ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದು ಸರಿಯಾದ ತೀರ್ಮಾನ ಆಗಿದ್ದು, ಯಾರೂ ಪ್ರಶ್ನಿಸಬಾರದು ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬರಲು ಎಚ್.ವಿಶ್ವನಾಥ್ ಅವರ ರೀತಿಯಲ್ಲಿ ಯೋಗೇಶ್ವರ್ ಸಹ ಕಾರಣರಾಗಿದ್ದು, ಅವರಿಗೆ ಮಂತ್ರಿ ಸ್ಥಾನ ಕೊಟ್ಟಿರುವ ಬಗ್ಗೆ ವಿಶ್ವನಾಥ್ ಅವರಿಗೆ ಅಸಮಾಧಾನ ಇರುವುದು ಸರಿ. ಆದರೆ ಸಚಿವ ಸ್ಥಾನ ಕೊಟ್ಟಿದ್ದು ಏಕೆ ಎಂದು ಪ್ರಶ್ನೆ ಮಾಡಬಾರದು ಎಂದರು. ಯಾರನ್ನು ಮಂತ್ರಿ ಮಾಡಬೇಕು ಯಾರನ್ನು ಮಾಡಬಾರದು ಎಂಬ ತೀರ್ಮಾನ ಸಿಎಂ ಬಿಎಸ್ವೈ ಅವರಿಗೆ ಬಿಟ್ಟಿದ್ದು ಎಂದರು.
''ದೈಹಿಕ, ಮಾನಸಿಕ ಸ್ಟ್ರೋಕ್ ಆಗಿದ್ದು ವಿಶ್ವನಾಥ್ಗೆ, ಯಡಿಯೂರಪ್ಪರಿಗಲ್ಲ''
ಕೋಪದಲ್ಲಿರುವ ವಿಶ್ವನಾಥ್ ಅವರನ್ನು ಕರೆಸಿ ಮಾತನಾಡುತ್ತೇನೆ. ವಿಶ್ವನಾಥ್ ಈಗಿನ ಸ್ಥಿತಿಯಲ್ಲಿ ಸಿಡಿ ವಿಚಾರ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುವುದು ಸರಿಯಲ್ಲ ಎಂದರು. ಸಚಿವ ಆಕಾಂಕ್ಷಿಗಳಲ್ಲಿ ವಿಸ್ತರಣೆಯಾದಾಗ ಅಸಮಾಧಾನಗಳು ಸಹಜ. ಕೆಲ ದಿನಗಳ ಬಳಿಕ ಎಲ್ಲವೂ ಸರಿ ಹೋಗುತ್ತದೆ. ವಿಶ್ವನಾಥ್ ಬಿಜೆಪಿಗೆ ಸೇರುವಾಗ ಯಡಿಯೂರಪ್ಪರ ಜೊತೆ ಯಾವ ರೀತಿ ಮಾತುಕತೆ ಆಗಿತ್ತು ಎಂಬುದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ಇದನ್ನು ವಿಶ್ವನಾಥ್ ನೆನಪಿಸಿಕೊಳ್ಳಲಿ ಎಂದು ತಿಳಿಸಿದರು.
ಮಂತ್ರಿ ಆಗಿದ್ದ ನಾಗೇಶ್ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆ ರಾಜೀನಾಮೆ ಪಡೆಯಲಾಗಿದೆ ಎಂದ ಸಂಸದ ಶ್ರೀನಿವಾಸ್ ಪ್ರಸಾದ್, ಮುನಿರತ್ನಗೆ ಮುಂದೆ ಅವಕಾಶಗಳು ಸಿಗುತ್ತವೆ ಎಂದರು. ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಯಾವ ಪಕ್ಷದಲ್ಲಿ ಇದ್ದಾರೆ, ಯಾವ ವೇದಿಕೆಯಲ್ಲಿ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಿಲ್ಲವೆಂದರು.
ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಈಗಲೂ ನನಗೆ ಅಸಮಾಧಾನವಿದೆ, ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಸಿಕ್ಕಿಲ್ಲ ಎಂದರಲ್ಲದೇ, ಸಿಡಿ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಎಂದು ಸ್ಪಷ್ಟಪಡಿಸಿದರು.