"ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಬಜೆಟ್ ನಲ್ಲಿ ಹಣ ಮೀಸಲಿಡಿ'
ಮೈಸೂರು, ಮಾರ್ಚ್ 02: ಮೈಸೂರು ವಿಮಾನ ನಿಲ್ದಾಣದ ರನ್ ವೇಯನ್ನು 2.8 ಕಿ.ಮೀ ಗೆ ವಿಸ್ತರಿಸುವ ಯೋಜನೆಯನ್ನು ಈ 2020-21 ರ ಕರ್ನಾಟಕ ಬಜೆಟ್ ನಲ್ಲಿ ಸೇರಿಸಬೇಕೆಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣ ಹಾಗೂ ವಿಸ್ತರಣೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಈ ಸಾಲಿನ ಬಜೆಟ್ ನಲ್ಲಿ 200 ಕೋಟಿ ರುಪಾಯಿ ಮೀಸಲಿಡಬೇಕು. ವಿಮಾನ ನಿಲ್ದಾಣ ವಿಸ್ತರಣೆಗೆ ಒಟ್ಟು 240 ಎಕರೆ ಜಾಗ ಅವಶ್ಯಕತೆಯಿದೆ. ಕೆಐಎಡಿಬಿ ವತಿಯಿಂದ ತಕ್ಷಣಕ್ಕೆ ಅಗತ್ಯವಿರುವ 115 ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ಕೋರಿದರು.
ಅಷ್ಟೇ ಅಲ್ಲದೇ ಮೈಸೂರು(ಬೆಳಗೊಳ)-ಕುಶಾಲನಗರ ರೈಲ್ವೆ ಮಾರ್ಗಕ್ಕೆ ಪ್ರಾರಂಭಿಕವಾಗಿ ಅನುದಾನವನ್ನು ಈ ಸಾಲಿನ ಬಜೆಟ್ ನಲ್ಲಿ ಬಿಡುಗಡೆ ಮಾಡುವಂತೆ ಕೋರಿದರು. ರಾಜ್ಯದಲ್ಲಿ ಅತಿ ಚಿಕ್ಕದಾದ ಜಿಲ್ಲೆ ಹಾಗೂ ರೈಲ್ವೆ ಸಂಪರ್ಕದಿಂದ ವಂಚಿತವಾಗಿರುವ ಏಕೈಕ ಜಿಲ್ಲೆಯಾಗಿದೆ.

ಕೊಡಗು ಜಿಲ್ಲೆಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂದು ಬ್ರಿಟಿಷರ ಕಾಲದಿಂದ ಬೇಡಿಕೆಯಿದ್ದು, ಯಾವ ಸರ್ಕಾರ ಬಂದರೂ ಯೋಜನೆಗೆ ಅನುಮೋದನೆ ದೊರಕಿಲ್ಲ. ಈ ಯೋಜನೆಗೆ ಮೋದೀಜಿ ನೇತೃತ್ವದ ಕೇಂದ್ರ ಸರ್ಕಾರದ 2018-19 ರ ಸಾಲಿನ ಬಜೆಟ್ ನಲ್ಲಿ 1855 ಕೋಟಿ ರೂ. ಅನುದಾನ ಅನುಮೋದನೆಗೊಂಡಿದೆ ಎಂದು ಪ್ರತಾಪ ಸಿಂಹ ಮನವರಿಕೆ ಮಾಡಿದರು.
""ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಅನುದಾನ ಕೋರಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಅದರಂತೆ ತಾವು ಸ್ಪಂದಿಸಿದ್ದು ಮೈಸೂರು-ಕುಶಾಲನಗರ ಸಂಪರ್ಕಿಸುವ ಸುಮಾರು 87 ಕಿ.ಮೀ ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಭೂಮಿಯನ್ನು ನೀಡುವಂತೆ, ಕಾಮಗಾರಿಗೆ ಪ್ರಾರಂಭಿಕವಾಗಿ ಈ ಸಾಲಿನ ಬಜೆಟ್ ನಲ್ಲಿ ಸ್ವಲ್ಪ ಮಟ್ಟಿನ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಕಾಮಗಾರಿಯನ್ನು ಆರಂಭಿಸಬೇಕೆಂದು'' ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications