ಮೋದಿ ಹೆಸರು ಹೇಳದಿದ್ದರೆ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಜನ ಬರೊಲ್ಲ: ಪ್ರತಾಪ್ ಸಿಂಹ
ಮೈಸೂರು, ಅಕ್ಟೋಬರ್ 03: 'ಚುನಾವಣಾ ಕಾಲದ ಗೆಳೆಯ' ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಚಕ್ರವರ್ತಿ ಸೂಲಿಬೆಲೆ ಅವರನ್ನು ಟ್ವಿಟ್ಟರ್ನಲ್ಲಿ ಸಮಾರಂಭವೊಂದರ ಭಾಷಣದಲ್ಲಿ ಹಾಡಿ ಹೊಗಳಿದ್ದ ಪ್ರತಾಪ್ ಸಿಂಹ ಇಂದು ಜರಿದಿದ್ದಾರೆ.
ಸಂಸದರು ಮೋದಿ ಹೆಸರಿನಿಂದ ಗೆದ್ದಿದ್ದಾರೆ ಎಂದು ತಮ್ಮನ್ನು ಸೇರಿದಂತೆ ಹಲವು ರಾಜ್ಯದ ಸಂಸದರನ್ನು ಅಣಕಿಸಿದ್ದ ಚಕ್ರವರ್ತಿ ಸೂಲಿಬೆಲೆಗೆ ಎದಿರೇಟು ನೀಡಿರುವ ಪ್ರತಾಪ್ ಸಿಂಹ 'ಅವರ ಭಾಷಣಕ್ಕೂ ಮೋದಿಯೇ ಬಂಡವಾಳ' ಎಂದು ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ ಸಿಂಹ, 'ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರಿಗೆ ಮೋದಿಯೇ ಬಂಡವಾಳ' ಹೇಳಿದರು.

ಸೂಲಿಬೆಲೆ ಭಾಷಣಕ್ಕೂ ಮೋದಿಯೇ ಬಂಡವಾಳ: ಸಿಂಹ
'ಮೋದಿ ಹೆಸರನ್ನು ಹೇಳಿಕೊಂಡು ಕೆಲ ಸಂಸದರು ಗೆದ್ದಿದ್ದಾರೆ ಎಂಬ ಟೀಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೋದಿ ಅವರ ವಿರುದ್ಧ ಮಾತನಾಡುತ್ತಿರುವವರ ಭಾಷಣಕ್ಕೆ ಮೋದಿಯೇ ಬಂಡವಾಳ. ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ?' ಎಂದು ಚಕ್ರವರ್ತಿ ಸೂಲಿಬೆಲೆಯವರ ಹೆಸರು ಉಲ್ಲೇಖಿಸದೆ ಟಾಂಗ್ ಕೊಟ್ಟಿದ್ದಾರೆ.

ಸೋಲಿಬೆಲೆಯಿಂದ ನಾನು ಮೋದಿ ಪ್ರೇಮ ಕಲಿಯಬೇಕಿಲ್ಲ: ಸಿಂಹ
'ಅವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ನಾನು ಮೋದಿಯವರ ಆತ್ಮಕಥೆ ಬರೆದಿದ್ದೆ. ಇವರಿಂದ ನಾನು ಮೋದಿ ಪ್ರೇಮ ಕಲಿಯಬೇಕಾಗಿಲ್ಲ. ಇವರ ಟೀಕೆ ವಿವೇಚನ ರಹಿತವಾಗಿದೆ. ನಾನಾಗಲಿ ಕೆಲ ಸಂಸದರಾಗಲಿ ಗೆದ್ದಿದ್ದು ಮೋದಿಯವರ ಹೆಸರಿನಿಂದಲೇ. ಆದರೆ ಸದಾನಂದಗೌಡ, ರಮೇಶ್ ಜಿಗಜಣಗಿ, ನಳಿನ್ ಕುಮಾರ್ ಕಟೀಲ್ ಮತ್ತಿತರರು ಮೋದಿ ರಾಷ್ಟ್ರ ರಾಜಕಾರಣಕ್ಕೆ ಬರುವ ಮೊದಲೇ ಸಂಸದರಾಗಿದ್ದಾರೆ. ಟೀಕೆ ಮಾಡುವ ವ್ಯಕ್ತಿ ಇದನ್ನು ನೆನಪಿಟ್ಟುಕೊಳ್ಳಲಿ' ಎಂದು ತಿರುಗೇಟು ನೀಡಿದರು.

ಮೋದಿಯನ್ನು ಟೀಕಿಸುವಂತಿಲ್ಲವೆಂದು ನಾನು ಹೇಳಿಲ್ಲ: ಸಿಂಹ
'ಮೋದಿಯವರನ್ನು ಟೀಕೆ ಮಾಡಬಾರದು ಎಂದು ನಾನು ಹೇಳಿಲ್ಲ. ಟೀಕೆಗಳು ಸೈದ್ದಾಂತಿಕ ಮತ್ತು ರಚನಾತ್ಮಕವಾಗಿರಬೇಕು , ಆರೋಗ್ಯಕರ ಟೀಕೆಗಳನ್ನು ಸ್ವೀಕರಿಸಬೇಕು ಎಂದಷ್ಟೆ ಹೇಳಿದ್ದೇನೆ. ಕೇಂದ್ರದ ನೆರೆ ಪರಿಹಾರ ನಿಧಿ ಕರ್ನಾಟಕ ಮಾತ್ರವಲ್ಲದೆ ಉಳಿದ ರಾಜ್ಯಗಳಿಗೂ ಬಂದಿಲ್ಲ. ಮಹಾರಾಷ್ಟ್ರದಲ್ಲಿ 377 ಜನ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 225 ಜನ ಸಾವನ್ನಪ್ಪಿದ್ದಾರೆ ಯಾವ ರಾಜ್ಯಗಳಿಗೂ ಕೇಂದ್ರ ನೆರೆ ಪರಿಹಾರ ನೀಡಿಲ್ಲ. ಪರಿಹಾರ ತಡವಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಮೋದಿಯನ್ನು ಟೀಕಿಸುವುದು ಸರಿಯಲ್ಲ' ಎಂದು ಹೇಳಿದರು.

ಮೋದಿ ಸದಾ ಕರ್ನಾಟಕದ ಪರವಾಗಿಯೇ ಇದ್ದಾರೆ: ಸಿಂಹ
'ಬೇರೆ ರಾಜ್ಯಗಳಿಗೆ ಬಿಡುಗಡೆಯಾಗಿ ನಮ್ಮ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ ಅಂದರೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರಶ್ನೆ ಮಾಡಬೇಕಿತ್ತು. ಈಗ ನಿಯಮದ ಪ್ರಕಾರವೇ ಎಲ್ಲ ನಡೆಯುತ್ತಿದೆ. ಕಲವೇ ದಿನಗಳಲ್ಲಿ ಪರಿಹಾರದ ಹಣ ಬರುತ್ತದೆ ಎಂದು ಭರವಸೆ ನೀಡಿದರು. ಮೋದಿ ಸರ್ಕಾರ ಕರ್ನಾಟಕ್ಕೆ ಯಾವ ವಿಚಾರದಲ್ಲೂ ಅನ್ಯಾಯ ಮಾಡಿಲ್ಲ. ಕಾವೇರಿ, ಮೇಕೆದಾಟು ಎಲ್ಲಾ ವಿಚಾರದಲ್ಲೂ ಮೋದಿ ಕರ್ನಾಟಕದ ಪರವಾಗಿ ನಿಂತಿದ್ದಾರೆ' ಎಂದು ಪ್ರತಾಪ್ ಸಿಂಹ ಮೋದಿ ಪರವಹಿಸಿದರು.












Click it and Unblock the Notifications