ದೇವೇಗೌಡರು ನನ್ನನ್ನು ವಿಜಯಸಿಂಹ ಎಂದು ಹೇಳುವ ಮೂಲಕ ಆಶೀರ್ವದಿಸಿದ್ದಾರೆ : ಪ್ರತಾಪ್ ಸಿಂಹ
ಮೈಸೂರು, ಏಪ್ರಿಲ್ 13 : ನಿನ್ನೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರು, ಮೈಸೂರಿನ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಹೆಸರು ಸರಿಯಾಗಿ ಪ್ರಸ್ತಾಪಿಸದೆ, ಒಮ್ಮೆ ವಿಜಯಸಂಕೇಶ್ವರ ಎಂತಲೂ, ಮತ್ತೊಮ್ಮೆ ವಿಜಯಸಿಂಹ ಎಂದು ಉಚ್ಛರಿಸಿದ್ದರು.
ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು. ಭಾಷಣ ಕೊನೆಗೊಳಿಸುವಾಗ ಬಿಜೆಪಿ ಅಭ್ಯರ್ಥಿ ವಿಜಯಸಿಂಹ ಅವರನ್ನು ಬೆಂಬಲಿಸಿ ಎಂದರು.
ಇದಕ್ಕೆ ಇಂದು ಮಾಧ್ಯಮದೆದುರು ಪ್ರತಿಕ್ರಿಯಿಸಿರುವ ಸಂಸದ ಹಾಗೂ ಬಿಜೆಪಿಯ ಮೈಸೂರು - ಕೊಡಗು ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಪ್ರತಾಪ್ ಸಿಂಹರವರು, ದೇವೇಗೌಡರು ತಮ್ಮ ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಳಿಕ ನಾನು ವಿಜಯಿಯಾಗುತ್ತೇನೆ. ಆದ್ದರಿಂದಲೇ ವಿಜಯ ಸಿಂಹ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ದೇವೇಗೌಡ ಅವರು ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಲ್ಲಿ ನಾನು ಜಯಗಳಿಸುವುದು ಶತಸಿದ್ಧ. ಆದ್ದರಿಂದಲೇ ವಿಜಯಸಿಂಹ ಎಂದು ಹೇಳುವ ಮೂಲಕ ಗೆಲ್ಲಿಸಲು ಅವರೇ ಪ್ರಚಾರ ಮಾಡಿದ್ದಾರೆ ಎಂದರು.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವರು, ಸಿದ್ದರಾಮಯ್ಯ ಓರ್ವ ಹುಟ್ಟಾ ಜಾತಿವಾದಿ. ನೆಪ ಮಾತ್ರಕ್ಕೆ ಮೈತ್ರಿ. ಮಾಡುತ್ತಿರುವುದೆಲ್ಲ ಮೋಸ. ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಎ.ಮಂಜು ಸ್ಪರ್ಧಿಸಿರುವುದರ ಹಿಂದೆ ಸಿದ್ದು ಕೈವಾಡವಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರೇ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದರೆ, ದೊಡ್ಡ ಗೌಡರು, ಸಿದ್ದರಾಮಯ್ಯ ಮಂಡ್ಯಗೆ ಬಂದು ಪ್ರಚಾರ ಮಾಡಿದರೂ ಪ್ರಯೋಜನವಾಗದು. ಈ ಬಾರಿ ಗೆಲುವು ನಮ್ಮದೇ ನಿಶ್ಚಿತ ಎಂದರು.












Click it and Unblock the Notifications