ಉಪನ್ಯಾಸಕರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ
ಮೈಸೂರು, ಫೆಬ್ರವರಿ 18: ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತಮ ಗುಣಮಟ್ಟದ 8,000 ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಲ್ಲಿ ಅತಿಥಿ ಉಪನ್ಯಾಸಕರ ಪರಿಕಲ್ಪನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಈ ಮನವಿಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಕೋರಲಾಗಿದೆ. ಜತೆಗೆ ಒಟ್ಟು ಬಜೆಟ್ನಲ್ಲಿ ಶೇ 3.5ರಷ್ಟು ಅನುದಾನ ಮೀಸಲಿಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈವರೆಗೂ ಬಜೆಟ್ನಲ್ಲಿ ಉನ್ನತ ಶಿಕ್ಷಣಕ್ಕೆ ಕೇವಲ ಶೇ 2ರಷ್ಟು ಅನುದಾನ ಮೀಸಲಿಡಲಾಗುತ್ತಿತ್ತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಈ ವರ್ಷ ಕೂಡ ಮುಂದುವರಿಸಲಾಗುವುದು. ಅವರು ತಮ್ಮ ಸಂಬಳ ಹೆಚ್ಚಳಕ್ಕೆ ಮತ್ತು ಉದ್ಯೋಗವನ್ನು ಕ್ರಮಬದ್ಧಗೊಳಿಸಲು ಕೋರಿದ್ದಾರೆ. ಅವರ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ನ್ಯಾಕ್ ಮಾನ್ಯತೆ ಪಡೆಯಬೇಕು
ಸರ್ಕಾರಿ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದುಕೊಳ್ಳುವಂತಾಗಬೇಕು. ಬಳಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ವಾಯತ್ತದೆಯನ್ನು ಪಡೆದುಕೊಳ್ಳಲು ಹಾಗೂ ಉತ್ತಮ ಫಲಿತಾಂಶಕ್ಕಾಗಿ ಕೆಲಸ ಮಾಡಬೇಕು. ಬೋಧನೆಯ ಗುಣಮಟ್ಟ ಸುಧಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಖಾಸಗಿ ಶಾಲೆಗಿಂತ ಉತ್ತಮ ಸೀಕ್ಷಣ
ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಸ್ಮಾರ್ಟ್ ಕ್ಲಾಸ್ಗಳಿಗೆ ಯೋಜನೆ ರೂಪಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್, ಟ್ಯಾಬ್ ಮತ್ತು ಎಲ್ಎಂಎಸ್ ಸವಲತ್ತುಗಳನ್ನು ನೀಡುವ ಮೂಲಕ ಖಾಸಗಿ ಶಾಲೆಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದ್ದಾರೆ.

12 ಸಾವಿರ ಬೋಧಕೇತರ ಹುದ್ದೆ
ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡುವುದು ಅಗತ್ಯವಾಗಿದೆ. ಇದಲ್ಲದೆ 12 ಸಾವಿರ ಬೋಧಕೇತರ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಬೇಕೆಂಬ ಬೇಡಿಕೆ ಕೂಡ ಇಲಾಖೆ ಮುಂದೆ ಇದೆ. ಇವುಗಳಲ್ಲಿ ತುರ್ತು ಅಗತ್ಯದ ಹುದ್ದೆಗಳನ್ನು ಮಂಜೂರು ಮಾಡಿಸಲು ಶಿಕ್ಷಣ ಇಲಾಖೆ ಆದ್ಯತೆ ನೀಡುತ್ತಿದೆ ಎಂದಿದ್ದಾರೆ.

ಜಿಎಸ್ಡಿಪಿ ಮೊತ್ತ ಹೆಚ್ಚಳ
ಉನ್ನತ ಶಿಕ್ಷಣದ ನಿಗದಿತ ಅನುದಾನ ಪ್ರಮಾಣವನ್ನು ಈಗಿನ ಶೇ 2ರಿಂದ ಶೇ 3.5ಕ್ಕೆ ಹೆಚ್ಚಿಸಲು ಕೋರಲಾಗಿದೆ. ಅಲ್ಲದೆ, ಜಿಎಸ್ಡಿಪಿಯ ಮೊತ್ತವನ್ನು ಶೇ 0.5ರಿಂದ ಶೇ 1ಕ್ಕೆ ಏರಿಸಲು ಸಲ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆ ಬೇಡಿಕೆ ಇರಿಸಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications