ಮೈಸೂರು; ಭೂಮಿ ಕೊಟ್ಟವರಿಗೆ ಉದ್ಯೋಗ ಕೊಟ್ಟ ಏಷಿಯನ್ ಪೇಂಟ್ಸ್
ಮೈಸೂರು, ಮಾರ್ಚ್ 09: ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡು ಉದ್ಯೋಗಕ್ಕಾಗಿ ಆಗ್ರಹಿಸಿ ಏಷಿಯನ್ ಪೇಂಟ್ಸ್ ಕಾರ್ಖಾನೆ ಎದುರು ನಡೆಯುತ್ತಿದ್ದ ಹೋರಾಟಕ್ಕೆ ಕಡೆಗೂ ಜಯ ದೊರೆತಿದೆ. ಉದ್ಯೋಗಕ್ಕಾಗಿ ಒತ್ತಾಯಿಸಿ 106 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಸುಖಾಂತ್ಯ ಕಂಡಿದ್ದು, ಪ್ರತಿಭಟನಾನಿರತರ ಮೊಗದಲ್ಲಿ ಸಂತಸ ಮೂಡಿದೆ.
ಮೈಸೂರು ಜಿಲ್ಲೆ ವರುಣಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಂಟ್ಸ್ ಕಾರ್ಖಾನೆ ಮುಂಭಾಗ, ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡವರು ಉದ್ಯೋಗಕ್ಕಾಗಿ ಕಳೆದ 106 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.
ರೈತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದರೂ ಯಾವುದೇ ಪ್ರಯೋಜನ ಕಂಡಿರಲಿಲ್ಲ. ಈ ಹೋರಾಟಕ್ಕೆ ಆರಂಭದಿಂದಲೂ ರಾಜ್ಯ ರೈತ ಸಂಘ, ಸ್ವರಾಜ್ ಇಂಡಿಯಾ, ವಿವಿಧ ದಲಿತ ಸಂಘಟನೆಗಳೂ ಬೆಂಬಲ ನೀಡಿದ್ದವು.

ಎಲ್ಲರ ಹೋರಾಟದ ಫಲದ ಹಿನ್ನೆಲೆಯಲ್ಲಿ ಏಷಿಯನ್ ಪೇಂಟ್ಸ್ ಮುಂಭಾಗದ ಆವರಣದಲ್ಲಿ ಸೋಮವಾರ ಸಂತೋಷದ ಹೊನಲು ತುಂಬಿತ್ತು. ಇದೇ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡು ಉದ್ಯೋಗ ನೀಡುವಂತೆ ಆಗ್ರಹಿಸಿದವರ ಮೊಗದಲ್ಲಿ ವಿಜಯದ ನಗೆ ಹರಿದಿತ್ತು.
ಮಹಿಳಾ ದಿನದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನ ಕುಮಾರಿ ಅವರು ಸಚಿನ್, ಆಕಾಶ, ಪ್ರಮೋದ, ಸ್ವಾಮಿ, ಮಹೇಶ ಸೇರಿದಂತೆ ಎಲ್ಲಾ 68 ಜನರಿಗೂ ಏಷಿಯನ್ ಪೇಂಟ್ಸ್ ಕಾರ್ಖಾನೆಯ ನೇಮಕಾತಿ ಪತ್ರಗಳನ್ನು ನೀಡಿದರು.
ಶತದಿನ ಪೂರೈಸಿದ ಹೋರಾಟ ಅಂತ್ಯಗೊಳ್ಳುತ್ತಿದ್ದಂತೆ ಕಾರ್ಖಾನೆ ಅಧಿಕಾರಿಗಳು, ಭೂಮಿ ಕಳೆದುಕೊಂಡ ಒಬ್ಬೊಬ್ಬರನ್ನೇ ಕರೆದು ಅವರಿಂದ ಉದ್ಯೋಗ ನೇಮಕಾತಿ ಕರಾರಿಗೆ ಅಂಕಿತ ಹಾಕಿಸಿಕೊಳ್ಳುವುದರೊಂದಿಗೆ 68 ಜನರ ಉದ್ಯೋಗದ ಕನಸು ನನಸಾಯಿತು.
ಇದೇ ಮೋದಲ ಬಾರಿಗೆ ಹೋರಾಟದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ಪಾನೀಯ ನೀಡಿ ಸ್ವಾಗತಿಸಿದ ಹೋರಾಟಗಾರರು, ಅವರಿಗೆ ಮಹಿಳಾ ದಿನಾಚರಣೆಯ ಶುಭ ಕೋರಿದರು.
ಈ ವೇಳೆ ರೈತ ಸಂಘದ ನಾಯಕ ಹೊಸಕೋಟೆ ಬಸವರಾಜು, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಹೆಜ್ಚಿಗೆ ಪ್ರಕಾಶ, ಅಶ್ವಥ್ರಾಜ್ ಅರಸು, ಪ್ರಸನ್ನ ಗೌಡ ಮುಂತಾದವರಿದ್ದರು.












Click it and Unblock the Notifications